ಎಂ.ಬಿ.ಪಾಟೀಲ್-ವೇಣುಗೋಪಾಲ್ ಭೇಟಿ: ಚುರುಕಾದ ಸಚಿವ ಸ್ಥಾನ ಆಕಾಂಕ್ಷಿಗಳು
ಬೆಂಗಳೂರು, ನವೆಂಬರ್ 17: ಉಪಚುನಾವಣೆ ಮುಗಿದು ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಸಚಿವಾಕಾಂಕ್ಷಿಗಳು ಮತ್ತೆ ಚುರುಕಾಗಿದ್ದಾರೆ.
ಇಂದು ಬೆಳಿಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಸಚಿವ ಸ್ಥಾನ ಆಕಾಂಕ್ಷಿ ಎಂ.ಬಿ.ಪಾಟೀಲ್ ಅವರು ಭೇಟಿ ಆಗಿದ್ದು, ಸಚಿವ ಸ್ಥಾನದ ಬಗ್ಗೆ ಬಹು ಸಮಯ ಚರ್ಚೆ ನಡೆಸಿದ್ದಾರೆ.
ಎಂ.ಬಿ.ಪಾಟೀಲ್ ಅವರು ಅತೃಪ್ತ ಶಾಸಕರ ಮುಖಂಡತ್ವ ವಹಿಸಿದ್ದರು. ಅದೇ ಕಾರಣದಿಂದ ತಮ್ಮ ಬೆಂಬಲಿತ ಶಾಸಕರ ಪರವಾಗಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯನ್ನು ಆದಷ್ಟು ಬೇಗ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇಂದಿನ ಇವರಿಬ್ಬರ ಭೇಟಿ ಬಹು ಮಹತ್ವದ್ದು ಎನ್ನಲಾಗಿದ್ದು, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡದಿದ್ದಲ್ಲಿ ಭಿನ್ನಮತ ಸ್ಪೋಟಗೊಳ್ಳುವ ಎಚ್ಚರಿಕೆಯನ್ನು ಪಾಟೀಲ್ ನೀಡಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಅಧಿವೇಶನದ ನಂತರ ವಿಸ್ತರಣೆ
ಬೆಳಗಾವಿ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಕಾಂಗ್ರೆಸ್ನಲ್ಲಿ ಮಾತುಕತೆ ಆಗಿತ್ತು. ಅದರಂತೇ ಆದರೆ ಸಂಪುಟ ವಿಸ್ತರಣೆ ಇನ್ನಷ್ಟು ತಡವಾಗುತ್ತದೆ ಎಂಬ ಕಾರಣದಿಂದ ಎಂಬಿ.ಪಾಟೀಲ್ ಅವರು ಇಂದು ವೇಣುಗೋಪಾಲ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ.

ಬಿಸಿತುಪ್ಪವಾಗಿರುವ ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಂಪುಟ ವಿಸ್ತರಣೆ ಮಾಡದೇ ವಿಧಿಯಿಲ್ಲ. ಆದರೆ ವಿಸ್ತರಣೆ ಮಾಡಿದರೆ ಅಸಮಾಧಾನ ಸ್ಫೋಟಗೊಳ್ಳುವ ಅಪಾಯ ಇದ್ದೇ ಇದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಬಹಳವೇ ಯೋಚಿಸಿ ಮುಂದಡಿ ಇಡುತ್ತಿದೆ.

ಸದ್ಯಕ್ಕೆ ಬೇಡ ಎಂದಿದೆ ಹೈಕಮಾಂಡ್
ಸಂಪುಟ ವಿಸ್ತರಣೆ ಸದ್ಯಕ್ಕೆ ಬೇಡವೆಂದು ಸ್ಪಷ್ಟವಾಗಿ ಹೈಕಮಾಂಡ್ ಹೇಳಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಇದೆ. ಈ ಸಮಯದಲ್ಲಿ ಸಂಪುಟ ವಿಸ್ತರಣೆ ಮತ್ತು ಅದರಿಂದ ಆಗುವ ಭಿನ್ನಮತಗಳ ಶಮನಕ್ಕೆ ಗಮನ ಕೊಡುವುದು ಅಸಾಧ್ಯ ಹಾಗಾಗಿ ಪಂಚ ರಾಜ್ಯಗಳ ಚುನಾವಣೆ ಮುಗಿವವರೆಗೂ ಯಾವುದೇ ಸಂಪುಟ ವಿಸ್ತರಣೆ ಬೇಡ ಎಂದು ಹೈಕಮಾಂಡ್ ಕೆಪಿಸಿಸಿಗೆ ಹೇಳಿದೆ.

ಆಕಾಂಕ್ಷಿಗಳಲ್ಲಿ ಅತೃಪ್ತಿ
ಕಾಂಗ್ರೆಸ್ ಬಳಿ ಇರುವ ಆರು ಸಚಿವ ಸ್ಥಾನಕ್ಕೆ ಮೂರುಪಟ್ಟು ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸರ್ಕಾರ ರಚನೆ ಆದಾಗಿನಿಂದಲೂ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳುತ್ತಲೇ ಬಂದು ಈಗ ಮತ್ತೆ ಇನ್ನಷ್ಟು ಮುಂದಕ್ಕೆ ಹಾಕುತ್ತಿರುವುದು ಸಹಜವಾಗಿಯೇ ಅವರಲ್ಲಿ ಆಕ್ರೋಶ ಕೆರಳಿಸಿದೆ. ಇಂದು ವೇಣುಗೋಪಾಲ್ ಅವರನ್ನು ಎಂ.ಬಿ.ಪಾಟೀಲ್ ಭೇಟಿ ಮಾಡಿರುವುದು ಇದೇ ಕಾರಣಕ್ಕೆ ಎನ್ನಲಾಗಿದೆ.

ಯಾರ್ಯಾರು ಆಕಾಂಕ್ಷಿಗಳು?
ಎಂ.ಬಿ.ಪಾಟೀಲ್, ತನ್ವೀರ್ ಸೇಠ್, ಎಂಟಿಬಿ ನಾಗರಾಜು, ಡಾ.ಸುಧಾಕರ್, ಆನಂದ್ ಸಿಂಗ್, ತುಕಾರಾಂ, ಎಚ್.ಕೆ.ಪಾಟೀಲ್, ಬಿ.ಸಿ.ಪಾಟೀಲ್, ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಇನ್ನೂ ಹಲವರು ಸಚಿವ ಸ್ಥಾನದ ರೇಸಿನಲ್ಲಿ ಇದ್ದಾರೆ. ಎ.ಬಿ.ಪಾಟೀಲ್ ಇವರ ನಾಯಕತ್ವ ವಹಿಸಿದ್ದಾರೆ. ಕೆಲವು ಅತೃಪ್ತರ ನಾಯಕತ್ವವನ್ನು ರಮೇಶ್ ಜಾರಕಿಹೊಳಿ ವಹಿಸಿದ್ದಾರೆ.












Click it and Unblock the Notifications