ಮತ್ತೆ ಖಾತೆ ಬದಲಾವಣೆ ಮಾಡಿದ ಸಿಎಂ ಯಡಿಯೂರಪ್ಪ; ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ!
ಬೆಂಗಳೂರು, ಜ. 25: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ. ಬಹಳಷ್ಟು ವಿರೋಧದ ಮಧ್ಯೆಯೂ ಮತ್ತೊಮ್ಮೆ ಸಚಿವರ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಬಳಿಕ ಮೂರನೇ ಬಾರಿ ಖಾತೆ ಹಂಚಿಕೆ ಆಗಿದ್ದು, ಯಡಿಯೂರಪ್ಪ ಅವರ ನಿರ್ಧಾರದಿಂದ ಹಲವು ಸಚಿವರು ಗರಂ ಆಗಿದ್ದಾರೆ ಎನ್ನಲಾಗಿದೆ.
ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಅವರು ಖಾತೆಗಳನ್ನು ಮರು ಹಂಚಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರು, ಸಚಿವರು ಆರೋಪಿಸಿತ್ತಿದ್ದಾರೆ. ಇದೀಗ ಡಾ. ಸುಧಾಕರ್ ಅವರ ಬೇಡಿಕೆ ಈಡೇರಿಸಲು ಸಚಿವರಾದ ಜೆ.ಸಿ. ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಅವರ ಖಾತೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪಟ್ಟು ಹಿಡಿದಿದ್ದ ಡಾ. ಸುಧಾಕರ್ ಅವರಿಗೆ ಆ ಖಾತೆಯನ್ನು ಕೊಡಲಾಗಿದೆ. ಇದು ಮೂಲ ಬಿಜೆಪಿ ಸಚಿವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಯಾರ ಖಾತೆಗಳು ಮರು ಹಂಚಿಕೆ ಆಗಿವೆ ಎಂಬುದರ ಸಂರ್ಪೂರ್ಣ ವಿವರ ಮುಂದಿದೆ.

ಮತ್ತೆ ಮೂವರು ಸಚಿವರ ಖಾತೆ ಬದಲಾವಣೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಮೂವರು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎಂಬುದು ಇಲ್ಲಿದೆ.
* ಡಾ. ಸುಧಾಕರ್- ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ
* ಜೆ.ಸಿ. ಮಾಧುಸ್ವಾಮಿ - ಪ್ರವಾಸೋದ್ಯಮ, ಪರಿಸರ ಖಾತೆಯನ್ನು ವಹಿಸಲಾಗಿದೆ.
* ಆನಂದ್ ಸಿಂಗ್ - ಮೂಲ ಸೌಕರ್ಯ ಹಾಗೂ ಹಜ್ ಮತ್ತು ವಕ್ಫ್ ಖಾತೆ
Recommended Video

ಮೂರನೇ ಬಾರಿ ಖಾತೆ ಮರು ಹಂಚಿಕೆ
ಡಾ. ಸುಧಾಕರ್ ಅವರ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 9 ದಿನಗಳಲ್ಲಿ 3ನೇ ಬಾರಿ ಖಾತೆ ಮರು ಹಂಚಿಕೆ ಮಾಡಿದ್ದಾರೆ. ಜನವರಿ 21 ರಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಖಾತೆ ಹಂಚಿಕೆ ಮಾಡುವಾಗ ಹಲವು ಸಚಿವರ ಖಾತೆಗಳನ್ನು ಮರು ಹಂಚಿಕೆಯನ್ನೂ ಮಾಡಲಾಗಿತ್ತು. ಅದಕ್ಕೆ ಹಲವು ಸಚಿವರು ಜನವರಿ 22 ರಂದು ನಡೆದಿದ್ದ ಸಚಿವ ಸಂಪುಟ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಡಿಸಿದ್ದರು. ಅಂದೇ ಮತ್ತೊಮ್ಮೆ ಖಾತೆ ಮರು ಹಂಚಿಕೆ ಮಾಡಲಾಗಿತ್ತು.
ಇದೀಗ ಡಾ. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಕೊಡುವ ಹಿನ್ನೆಲೆಯಲ್ಲಿ ಸಚಿವರಾದ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಅವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಜೊತೆಗೆ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕೊಡಲಾಗಿದೆ.

ಪದೇ ಪದೇ ಖಾತೆ ಬದಲಾವಣೆ
ಸಂಪುಟ ವಿಸ್ತರಣೆ ಆಗಿ 9 ದಿನಗಳ ಬಳಿಕ ಸಿಎಂ ಯಡಿಯೂರಪ್ಪ ಅವರು ಜ.21 ರಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದರು. ಆಗಲೂ ಬಹಳಷ್ಟು ಗೊಂದಲಗಳು ಉಂಟಾಗಿದ್ದವು. ಪ್ರಮುಖ ಸಚಿವರ ಖಾತೆಗಳನ್ನು ಬದಲಾಯಿಸಿ ನೂತನ ಸಚಿವರಿಗೆ ವಹಿಸಲಾಗಿತ್ತು. ಆದರೆ ತಮ್ಮಲ್ಲಿನ ಖಾತೆ ಹಿಂದಕ್ಕೆ ಪಡೆದಿದ್ದಕ್ಕೆ ಹಲವು ಸಚಿವರು ಅಸಮಾಧಾನಗೊಂಡಿದ್ದರು. ಪ್ರಮುಖವಾಗಿ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ, ಜೆ.ಸಿ. ಮಾಧುಸ್ವಾಮಿ ಅವರುಗಳು ತಮ್ಮ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಹೀಗಾಗಿ ಜ.22 ರಂದು ಮತ್ತೆ 6 ಸಚಿವರ ಖಾತೆ ಬದಲಾಯಿಸಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದರು.

ಹೀಗಾದರೆ ಹೇಗೆ ಎನ್ನುತ್ತಿದ್ದಾರೆ ಸಚಿವರು!
ಸಿಎಂ ಯಡಿಯೂರಪ್ಪ ಅವರು ಪದೇ ಪದೇ ಖಾತೆಗಳನ್ನು ಬದಲಾವಣೆ ಮಾಡುತ್ತಿರುವುದಕ್ಕೆ ಸಚಿವರು ಮತ್ತು ಬಿಜೆಪಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ದಿನಕ್ಕೊಂದು ನಿರ್ಧಾರ ಮಾಡಿದರೆ ನಾವೇನು ಮಾಡುವುದು? ಯಾರನ್ನೋ ಸಮಾಧಾನ ಪಡಿಸಲು ಹೀಗೆಲ್ಲಾ ಮಾಡಿದರೆ ಹೇಗೆ? ಎಲ್ಲವೂ ಸರಿ ಹೋಗಿತ್ತು, ಈಗ್ಯಾಕೆ ಹೀಗೆ ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ? ಎಂದು ಸಚಿವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬ್ಲ್ಯಾಕ್ ಮೇಲ್ ಮಾಡುವವರಿಗೆಲ್ಲಾ ಖಾತೆ ಬದಲಾವಣೆ ಮಾಡುತ್ತಾರೆ. ಸಂಭಾವಿತರ ಖಾತೆಗಳನ್ನು ವಾಪಸ್ ಪಡೆಯುತ್ತಾರೆ, ಇದು ಸರಿಯಾದ ಕ್ರಮವಲ್ಲ ಎಂದೂ ಸಚಿವರು ಆಪ್ತರಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ. ಒಟ್ಟಾರೆ ಮೂರನೇ ಬಾರಿ ಖಾತೆ ಹಂಚಿಕೆ ಮುಕ್ತಾಯವಾಗುತ್ತದೆಯಾ ಎಂಬುದನ್ನು ಕಾಯ್ದು ನೋಡಬೇಕಿದೆ.












Click it and Unblock the Notifications