ಬಸವರಾಜ ಬೊಮ್ಮಾಯಿ ಸಂಪುಟ ಜಾತಿ ಲೆಕ್ಕಾಚಾರ ಹೀಗಿದೆ
ಬೆಂಗಳೂರು, ಆಗಸ್ಟ್ 4: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಅಂತಿಮ ಹಂತ ತಲುಪಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಏಳು ಮಂದಿ ಹಿರಿಯರಿಗೆ ಕೊಕ್ ನೀಡಲಾಗಿದೆ. ಹೈಕಮಾಂಡ್ ಅಣತಿಯಂತೆ ಹೊಸಬರು, ಅನುಭವವುಳ್ಳರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಸಚಿವ ಸ್ಥಾನಕ್ಕೆ 29 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ನಿರೀಕ್ಷೆಯಂತೆ ಲಿಂಗಾಯತ-ವೀರಶೈವ ಸಮುದಾಯಕ್ಕೆ ಸಿಂಹಪಾಲು ಸಿಕ್ಕಿದೆ. ಮಿಕ್ಕಂತೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿ 7 ಮಂದಿಗೆ ಅವಕಾಶ ಸಿಕ್ಕಿದೆ. ಈ ಪೈಕಿ ಒಕ್ಕಲಿಗ ಶಾಸಕರೇ ಅಧಿಕವಾಗಿದ್ದಾರೆ. ಹಿಂದುಳಿದ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ.
ಬೊಮ್ಮಾಯಿ ಸಂಪುಟಕ್ಕೆ ಆಯ್ಕೆಯಾದವರ ಪೈಕಿ 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ ಟಿ ಮತ್ತು ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸಲಾಗಿದೆ.

ಸಚಿವರು-ಕ್ಷೇತ್ರ-ಜಾತಿ ಪಟ್ಟಿ:
1. ವಿ ಸೋಮಣ್ಣ- ಗೋವಿಂದರಾಜನಗರ-ಲಿಂಗಾಯತ
2. ಶಂಕರ್ ಪಾಟೀಲ್ ಮುನೇನಕೊಪ್ಪ-ನವಲಗುಂದ-ಲಿಂಗಾಯತ
3. ಜೆ.ಸಿ ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ-ಲಿಂಗಾಯತ
4. ಮುರುಗೇಶ್ ನಿರಾಣಿ-ಬೀಳಗಿ- ಲಿಂಗಾಯತ
5. ಸಿ. ಸಿ ಪಾಟೀಲ-ನರಗುಂದ- ಲಿಂಗಾಯತ
6. ಬಿ.ಸಿ ಪಾಟೀಲ್-ಹಿರೇಕೆರೂರು-ಲಿಂಗಾಯತ
7. ಉಮೇಶ್ ಕತ್ತಿ-ಹುಕ್ಕೇರಿ- ಲಿಂಗಾಯತ
8. ಶಶಿಕಲಾ ಜೊಲ್ಲೆ- ನಿಪ್ಪಾಣಿ-ಲಿಂಗಾಯತ
9. ಆರ್ ಅಶೋಕ-ಪದ್ಮನಾಭನಗರ-ಒಕ್ಕಲಿಗ
10. ಎಸ್ ಟಿ ಸೋಮಶೇಖರ್-ಯಶವಂತಪುರ-ಒಕ್ಕಲಿಗ
11. ಡಾ. ಸಿ. ಎನ್ ಅಶ್ವಥ ನಾರಾಯಣ-ಮಲ್ಲೇಶ್ವರ- ಒಕ್ಕಲಿಗ
12. ಆರಗ ಜ್ಞಾನೇಂದ್ರ- ತೀರ್ಥಹಳ್ಳಿ-ಒಕ್ಕಲಿಗ
13. ಕೆ ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್-ಒಕ್ಕಲಿಗ
14. ಡಾ. ಸುಧಾಕರ್-ಚಿಕ್ಕಬಳ್ಳಾಪುರ-ಒಕ್ಕಲಿಗ
15. ಕೆ. ಸಿ ನಾರಾಯಣ ಗೌಡ- ಕೆ. ಆರ್ ಪೇಟೆ-ಒಕ್ಕಲಿಗ
16. ಬೈರತಿ ಬಸವರಾಜ್- ಕೆ. ಆರ್ ಪುರ-ಕುರುಬ
17: ಕೆಎಸ್ ಈಶ್ವರಪ್ಪ-ಶಿವಮೊಗ್ಗ-ಕುರುಬ
18. ಗೋವಿಂದ ಕಾರಜೋಳ-ಮುಧೋಳ- ಪರಿಶಿಷ್ಟ ಜಾತಿ (ದಲಿತ)
19. ಹಾಲಪ್ಪ ಆಚಾರ್- ಯಲಬುರ್ಗಿ-ರೆಡ್ಡಿ
20. ಆನಂದ್ ಸಿಂಗ್-ಹೊಸಪೇಟೆ-ರಜಪೂತ್
21 ಕೋಟಾ ಶ್ರೀನಿವಾಸ ಪೂಜಾರಿ- ಎಂಎಲ್ಸಿ-ಬಿಲ್ಲವ
22. ಪ್ರಭು ಚೌವಾಣ್- ಔರಾದ್-ಪರಿಶಿಷ್ಟ ಜಾತಿ (ದಲಿತ)
23. ಸುನಿಲ್ ಕುಮಾರ್- ಕಾರ್ಕಳ-ದಲಿತ
24 ಬಿ. ಸಿ ನಾಗೇಶ್- ತಿಪಟೂರು- ಬ್ರಾಹ್ಮಣ
25. ಎಸ್ ಅಂಗಾರ- ಸುಳ್ಯ-ದಲಿತ
26. ಬಿ ಶ್ರೀರಾಮುಲು-ಮೊಳಕಾಲ್ಮೂರು- ವಾಲ್ಮೀಕಿ(ಎಸ್ ಟಿ)
27. ಶಿವರಾಂ ಹೆಬ್ಬಾರ್- ಯಲ್ಲಾಪುರ-ಬ್ರಾಹ್ಮಣ
28. ಮುನಿರತ್ನ- ಆರ್ ಆರ್ ನಗರ-ನಾಯ್ಡು
29. ಎಂ. ಟಿ. ಬಿ ನಾಗರಾಜ್- ಎಂಎಲ್ ಸಿ- ಕುರುಬ
"ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸದಿರಲು ಹೈಕಮಾಂಡ್ ತೀರ್ಮಾನ ಮಾಡಿರುವುದರಿಂದ ಯಾರೂ ಡಿಸಿಎಂ ಇರುವುದಿಲ್ಲ ಎಂದು" ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕತೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೊಮ್ಮಾಯಿ ಇಂದು ವಿವರಿಸಿದರು.
ಈ ಮುಂಚೆ ಜಾತಿ ಲೆಕ್ಕಾಚಾರದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸುದ್ದಿ ಹಬ್ಬಿತ್ತು. ಬಿ ಶ್ರೀರಾಮುಲು ಅವರು ಡಿಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಒಕ್ಕಲಿಗ ಸಮುದಾಯದ ಆರ್. ಅಶೋಕ, ಪರಿಶಿಷ್ಟ ಜಾತಿಗೆ ಸೇರಿರುವ ಗೋವಿಂದ ಕಾರಜೋಳ ಹಾಗೂ ಬ್ರಾಹ್ಮಣ ಸಮುದಾಯದ ಒಬ್ಬರಿಗೆ ಡಿಸಿಎಂ ಹುದ್ದೆ ಒಲಿದು ಬರಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಡಿಸಿಎಂ ಹುದ್ದೆ ಬಗ್ಗೆ ಆರೆಸ್ಸೆಸ್ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕಿದೆ ಎಂಬ ಮಾಹಿತಿಯಿದೆ.
ಯಡಿಯುರಪ್ಪ ಸಂಪುಟದಲ್ಲಿದ್ದ ಜಗದೀಶ್ ಶೆಟ್ಟರ್, ಆರ್. ಶಂಕರ್, ಸಿ. ಪಿ. ಯೋಗೇಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಎಸ್. ಸುರೇಶ್ ಕುಮಾರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರದಲ್ಲಿ ಒಟ್ಟು 34 ಶಾಸಕರು ಸಚಿವರಾಗಬಹುದು. ಇಂದು 29 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ಅಧಿಕೃತವಾಗಿ ಪತ್ರ ಮೂಲಕ ತಿಳಿಸಲಾಗಿದೆ. ಉಳಿದಿರುವ 4 ಸ್ಥಾನಗಳನ್ನು ಕಾಯ್ದಿರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ.












Click it and Unblock the Notifications