ಜಾತಿವಾರು ಗಣತಿಗೆ ಸಮ್ಮತಿ ಸೂಚಿಸಿದ ಸರ್ಕಾರ
ಬೆಂಗಳೂರು, ಡಿ. 13 : ಅನ್ನಭಾಗ್ಯ ವ್ಯಾಪ್ತಿಗೆ ಕಾರಾಗೃಹ, ಗೃಹರಕ್ಷಕದಳ, ಪೌರರಕ್ಷಣಾ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ, ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿ ಮಾಡಲು ಬೆಂಬಲ ಬೆಲೆ, ಬೆಂಗಳೂರಿಗೆ ಹೆಚ್ಚುವರಿಯಾಗಿ 10 ಟಿಎಂಸಿ ಕಾವೇರಿ ನೀರು, ಏಪ್ರಿಲ್-ಮೇ ತಿಂಗಳಿನಲ್ಲಿ ಜಾತಿವರು ಗಣತಿ ಮುಂತಾದ ನಿರ್ಧಾರಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಭತ್ತ ಮತ್ತು ಗಿರಣಿಗಳಿಂದ ಅಕ್ಕಿ ಖರೀದಿ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತು. ರೈತರಿಂದ ನೇರವಾಗಿ ಭತ್ತವನ್ನು ಪ್ರತಿ ಕ್ವಿಂಟಲ್ಗೆ 1600 ರೂ. ದರದಲ್ಲಿ ಖರೀದಿಸಲು ಮತ್ತು ಮಿಲ್ಗಳಿಂದ ಕ್ವಿಂಟಲ್ಗೆ 2,400 ರೂ ನಂತೆ ಅಕ್ಕಿ ಖರೀದಿ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನತರ ಮಾಧ್ಯಮಗಳಿಗೆ ಸಭೆಯ ವಿವರಗಳನ್ನು ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ಪೊಲೀಸ್ ಕುಟುಂಬಗಳಿಗೆ ಸ್ಥಗಿತಗೊಂಡಿದ್ದ ಪಡಿತರ ಪೂರೈಕೆಯನ್ನು ಪುನಃ ಆರಂಭಿಸಲಾಗುವುದು. ಕಾರಾಗೃಹ, ಗೃಹ ರಕ್ಷಕದಳ, ಪೌರರಕ್ಷಣಾ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳನ್ನು ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ತರಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಸಂಪುಟ ಸಭೆಯ ವಿವರಗಳು
ಏಪ್ರಿಲ್, ಮೇನಲ್ಲಿ ಜಾತಿವಾರು ಸಮೀಕ್ಷೆ
ಸರ್ಕಾರದ ಬಹುದಿನಗಳ ಕನಸು ಜಾತಿವಾರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿ ಜಾತಿವಾರು ಜನಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಆರಂಭವಾಗಲಿದೆ. ಆ ಸಮಯದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾದರೆ, ಅಕ್ಟೋಬರ್ನಲ್ಲಿ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಶಿಕ್ಷಕರನ್ನು ಮತ್ತು ಕಂದಾಯ, ಪೌರಾಡಳಿತ, ಅನುದಾನಿತ ಶಾಲೆಗಳ ಬೋಧಕ- ಬೋಧಕೇತರ ಸಿಬ್ಬಂದಿಯನ್ನೂ ಬಳಸಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಅನ್ನಭಾಗ್ಯ ಅನುಷ್ಠಾನಕ್ಕಾಗಿ ನಿಯಮ
ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ 'ಪಡಿತರ ಖಾತ್ರಿ' ಯೋಜನೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಇದರ ಅನ್ವಯ ರೇಷನ್ ಡಿಪೋಗಳು ಪ್ರತಿ ತಿಂಗಳ 1ರಿಂದ 10ನೇ ತಾರೀಖೀನವರೆಗೆ ಬೆಳಗ್ಗೆಯಿಂದ ರಾತ್ರಿವರೆಗೆ ತೆರೆಯುವುದು ಕಡ್ಡಾಯವಾಗಿದೆ. ಜತೆಗೆ ಕರಾವಳಿ ಭಾಗದ ಜನರ ಬೇಡಿಕೆಯಾಗಿದ್ದ ಕುಚ್ಚಲಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಪೂರೈಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಕ್ಷೀರಭಾಗ್ಯ ಯೋಜನೆಗೆ 314 ಕೋಟಿ
ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಗಾಗಿ 314 ಕೋಟಿ ಅನುದಾನ ಬಳಸಿಕೊಳ್ಳಲಿ ಶಿಕ್ಷಣ ಇಲಾಖೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. 9 ಮತ್ತು 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಆರಕ್ಷಕ, ಅಗ್ನಿಶಾಮಕದಳ, ಕಾರಾಗೃಹ ಇಲಾಖೆಯ ಸಿಬ್ಬಂದಿಗೆ ಪಡಿತರ ವಿತರಿಸಲು ಪ್ರತಿ ತಿಂಗಳು 19.66 ಕೋಟಿ ಹಾಗೂ ವರ್ಷಕ್ಕೆ 235.92 ಕೋಟಿ ವೆಚ್ಚ ಮಾಡಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.
ಬೆಂಗಳೂರಿಗೆ 10 ಟಿಎಂಸಿ ಕಾವೇರಿ ನೀರು
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಖಾರ, ಕಾವೇರಿ ನದಿಯಿಂದ 10 ಟಿಎಂಸಿ ಹೆಚ್ಚು ನೀರನ್ನು ನಗರಕ್ಕೆ ಬಳಸಿಕೊಳ್ಳಲು ಅನುಮತಿ ನೀಡಿದೆ. ಜಲಮಂಡಳಿಯ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಅದಕ್ಕೆ ಒಪ್ಪಿಗೆ ನೀಡಲಾಗಿದೆ. ಕಾವೇರಿ ನೀರು ಹಂಚಿಕೆ ಹಾಗೂ ಬಳಕೆ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಜನವರಿ 15ರಂದು ವಿಚಾರಣೆ ಆರಂಭವಾಗಲಿದ್ದು, ಆಗ ರಾಜ್ಯ ಸರ್ಕಾರ ಹೆಚ್ಚುವರಿ ನೀರಿನ ಬಳಕೆ ಕುರಿತು ಅನುಮತಿ ಪಡೆಯಲಿದೆ.
ನರ್ಮ್ ಯೋಜನೆಗೆ 214 ಕೋಟಿ ವೆಚ್ಚ
ನರ್ಮ್ ಯೋಜನೆಯಡಿ 2104 ಬಸ್ ಖರೀದಿಗೆ ರಾಜ್ಯ ಸರ್ಕಾರದಿಂದ 214 ಕೋಟಿ ವೆಚ್ಚ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ನರ್ಮ್ ಯೋಜನೆಯ ಹಣ ವಿನಿಯೋಗಕ್ಕೆ ನಗರ ರಸ್ತೆ ಸಾರಿಗೆ ನಿಗಮ ಸ್ಥಾಪನೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಐದು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ
ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಕೊಡಗು, ಚಾಮರಾಜನಗರ, ಕೊಪ್ಪಳ, ಗದಗ, ಗುಲ್ಬರ್ಗದಲ್ಲಿ ವೈದ್ಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ತಾಳೆಎಣ್ಣೆಗೆ ಪ್ರತಿ ಟನ್ಗೆ 8500 ಬೆಂಬಲ ಬೆಲೆ ನಿಗದಿ ಮಾಡಲು ತೀರ್ಮಾನಿಸಲಾಗಿದೆ.
ಸುಪ್ರೀಂಗೆ ಪ್ರಮಾಣ ಪತ್ರ
ರಾಜ್ಯದಲ್ಲಿ ಸಿ ಕೆಟಗರಿಯಲ್ಲಿರುವ ಕಂಪನಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ವಿಧಿಸಿರುವ ಎಲ್ಲ ಷರತ್ತುಗಳನ್ನೂ ಪಾಲಿಸಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಲು ಸಚಿವ ಸಂಪು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಳಿಕ ಸುಪ್ರೀಂ ಕೋರ್ಟ್ ನೀಡುವ ಆದೇಶದಂತೆ ಗಣಿಗಾರಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.