ಸಂಪುಟ ಸೇರಲ್ಲ, ರಾಜ್ಯಾಧ್ಯಕ್ಷರೂ ಆಗಲ್ಲ ಬಿ. ವೈ. ವಿಜಯೇಂದ್ರ!
ಬೆಂಗಳೂರು, ಮಾರ್ಚ್ 14; ನಾಲ್ಕು ರಾಜ್ಯಗಳಲ್ಲಿ ಗೆದ್ದು ಬೀಗಿರುವ ಬಿಜೆಪಿ ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಿಸಬೇಕಿದೆ. ಇದಕ್ಕಾಗಿ ಪಕ್ಷ ಸಂಘಟನೆಯಲ್ಲಿ ಹಲವಾರು ಬದಲಾವಣೆ ಆಗಲಿದೆ. ರಾಜ್ಯಾಧ್ಯಕ್ಷರು ಸಹ ಬದಲಾಗಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ.
ಬಿಜೆಪಿಯಲ್ಲಿ ಹಲವು ಬದಲಾವಣೆ ಸುದ್ದಿಗಳು ಹರಿದಾಡುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ದೆಹಲಿ ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿತ್ತು.
ನನ್ನ ಭವಿಷ್ಯದ ದೃಷ್ಟಿಯಿಂದ ಕ್ಷೇತ್ರವನ್ನು ಹುಡುಕುತ್ತಿದ್ದೇನೆ: ಬಿ.ವೈ. ವಿಜಯೇಂದ್ರ
ಪಂಚ ರಾಜ್ಯಗಳ ಫಲಿತಾಂಶ ಹೊರಬರುತ್ತಲೇ ದೆಹಲಿಗೆ ತೆರಳಿದ್ದ ಬಿ. ವೈ. ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿ ಮಾಡಿದ್ದರು. 46 ವರ್ಷದ ವಿಜಯೇಂದ್ರ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯಲು ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗಳು ಕೇವಲ ಉಹಾಪೋಹವಾಗಿದೆ.
ಸಚಿವ ಸ್ಥಾನ, ಚುನಾವಣೆ ಸ್ಪರ್ಧೆ ಬಗ್ಗೆ ಬಿ. ವೈ. ವಿಜಯೇಂದ್ರ ಮಾತು
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ಬಿ. ವೈ. ವಿಜಯೇಂದ್ರ ಸೂಪರ್ ಸಿಎಂ ಎಂಬ ಮಾತು ಕೇಳಿಬರುತ್ತಿತ್ತು. ಬಿಜೆಪಿ ಉಪಾಧ್ಯಕ್ಷರಾಗಿರುವ ಅವರು ವಿವಿಧ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರು.
ಉಪ ಚುನಾವಣೆ ಉಸ್ತುವಾರಿ; ಸ್ಪಷ್ಟನೆ ಕೊಟ್ಟ ವಿಜಯೇಂದ್ರ
ಸಂಪುಟ ಸೇರುವುದಿಲ್ಲ ವಿಜಯೇಂದ್ರ
2021ರ ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದ ಬಿ. ವೈ. ವಿಜಯೇಂದ್ರ ಬಸವರಾಜ ಬೊಮ್ಮಾಯಿ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹಡಿರಾಡುತ್ತಿದೆ. ಆದರೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಸಂಪುಟ ಸೇರಿ ಸಚಿವರಾಗುವುದಿಲ್ಲ. ಪಕ್ಷ ಸಂಘಟನೆಯಲ್ಲಿಯೇ ಮುಂದುವರೆಯಲಿದ್ದಾರೆ. ಅವರ ಗಮನ 2023ರ ವಿಧಾನಸಭೆ ಚುನಾವಣೆ ಮೇಲಿದೆ. ಯಡಿಯೂರಪ್ಪ ಸಹ ಮುಂದಿನ ಚುನಾವಣೆ ಮೇಲೆ ಗಮನ ಹರಿಸುವಂತೆ ಪುತ್ರನಿಗೆ ಸೂಚನೆ ನೀಡಿದ್ದಾರೆ.
ಶಿಕಾರಿಪುರದಿಂದ ಸ್ಪರ್ಧೆ?
2018ರ ವಿಧಾನಸಭೆ ಚುನಾವಣೆಯಲ್ಲಿಯೇ ಬಿ. ವೈ. ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಹೈಕಮಾಂಡ್ ನಾಯಕರು ಕೊನೆ ಕ್ಷಣದಲ್ಲಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಬಳಿಕ ಬಸವಕಲ್ಯಾಣ, ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. 2023ರ ಚುನಾವಣೆಗೆ ಅವರು ಕಣಕ್ಕಿಳಿಯುವುದು ಬಹತೇಕ ಖಚಿತವಾಗಿದೆ. ವಿಜಯೇಂದ್ರ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ? ಎಂಬ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದಿಂದ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ.
ದೆಹಲಿ ಭೇಟಿ ಬಗ್ಗೆ ವಿಜಯೇಂದ್ರ ಸ್ಪಷ್ಟನೆ
ನವದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿರುವ ಬಿ. ವೈ. ವಿಜಯೇಂದ್ರ, "ಪಕ್ಷ ಸಂಘಟನೆ ವಿಚಾರದ ಕುರಿತು ಚರ್ಚೆ ನಡೆಸಲು ತೆರಳಿದ್ದೆ. ಸಂಪುಟ ಸೇರಿಕೊಳ್ಳಲು ವರಿಷ್ಠರ ಮೇಲೆ ಒತ್ತಡ ಹೇರಲು ತೆರಳಿರಲಿಲ್ಲ" ಎಂದು ಹೇಳಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಹಲವು ಬದಲಾವಣೆಯಾಗುವ ನಿರೀಕ್ಷೆ ಇದೆ. ಇಂತಹ ಬೆಳವಣಿಗೆ ನಡೆದರೆ ಬಿ. ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರೂ ಆಗುವುದಿಲ್ಲ. ಆದರೆ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಯಾರಾಗಲಿದ್ದಾರೆ ಬಿಜೆಪಿ ಅಧ್ಯಕ್ಷರು?
"ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುತ್ತೇನೆ. ಮುಂದಿನ ಚುನಾವಣೆಗೆ ಪಕ್ಷವನ್ನು ಯಾರು ಮುನ್ನಡೆಸುತ್ತಾರೆ? ಎಂಬ ಬಗ್ಗೆ ಚಿಂತನೆ ನಡೆಸುವುದಿಲ್ಲ" ಎಂದು ಬಿ. ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ಬಳಿಕ ಬಿಜೆಪಿ ಕರ್ನಾಟಕದ ಮೇಲೆ ಗಮನಹರಿಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಸಹ ಬದಲಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಮುಂದಿನ ವರ್ಷ ಚುನಾವಣೆ ಇರುವುದರಿಂದ ಜಾತಿ ಲೆಕ್ಕಾಚಾರ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಆಲೋಚನೆ ಮಾಡಿ ಹೊಸ ಸಾರಥಿಯನ್ನು ಕರ್ನಾಟಕ ಬಿಜೆಪಿಗೆ ಹುಡುಕಬೇಕಿದೆ.
Recommended Video