ಉಪ ಚುನಾವಣೆ: ಬಿಜೆಪಿ ಬೆಚ್ಚಿಬೀಳಿಸುವ ಆಂತರಿಕ ಸಮೀಕ್ಷಾ ವರದಿ ಬಹಿರಂಗ?

ಬೆಂಗಳೂರು, ಅ 13: ಬಿಜೆಪಿ ಸರಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅತ್ಯಂತ ಮಹತ್ವದ್ದಾಗಿರುವ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆ ಸಂಬಂಧ, ಬಿಜೆಪಿ, ಖಾಸಗಿ ಸಂಸ್ಥೆಯೊಂದರ ಮೂಲಕ ಸಮೀಕ್ಷೆಯೊಂದನ್ನು ನಡೆಸಿತ್ತು.

ಸಿ.ಎಂ.ಉದಾಸಿ ನಿಧನದಿಂದ ಹಾನಗಲ್ ಮತ್ತು ಮನಗೂಳಿ ನಿಧನದಿಂದ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ ಮೂವತ್ತರಂದು ಚುನಾವಣೆ ನಡೆಯಲಿದೆ. ನವೆಂಬರ್ ಎರಡರಂದು ಫಲಿತಾಂಶ ಹೊರಬೀಳಲಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾಗಿದೆ.

ದಸರಾ ಮುಗಿದ ನಂತರ ಪ್ರಚಾರ ವೇಗ ಪಡೆದುಕೊಳ್ಳಲಿದೆ. ಚುನಾವಣಾ ಉಸ್ತುವಾರಿಗಳನ್ನು ಹಬ್ಬದ ನಂತರ ಕ್ಷೇತ್ರದಲ್ಲಿ ಬೀಡು ಬಿಡಲು ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಈ ನಡುವೆ, ಮೀಸಲಾತಿ ಪ್ರಮಾಣಪತ್ರದ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರದ್ದು ಎನ್ನಲಾಗುತ್ತಿರುವ ಆಡಿಯೋ ಕ್ಷೇತ್ರಗಳಲ್ಲಿ ಸದ್ದು ಮಾಡುತ್ತಿದೆ.

ಖಾಸಗಿ ಸಂಸ್ಥೆ ತನ್ನ ಸಮೀಕ್ಷಾ ವರದಿಯನ್ನು ರಾಜ್ಯ ಬಿಜೆಪಿ ಪ್ರಮುಖರಿಗೆ ನೀಡಿದ್ದು, ಅದರಲ್ಲಿ ಬಿಜೆಪಿಗೆ ಅನುಕೂಲಕರವಾದ ವಾತಾವರಣ ಸದ್ಯದ ಮಟ್ಟಿಗೆ ಇಲ್ಲ ಎನ್ನುವ ಅಂಶಗಳಿವೆ ಎಂದು ಹೇಳಲಾಗುತ್ತಿದೆ. ಮುಂದಿನ ಹದಿನೈದು ದಿನಗಳಲ್ಲಿ ಬಿಜೆಪಿ ತನ್ನ ಪ್ರಚಾರದ ಶೈಲಿಯನ್ನು ಯಾವರೀತಿ ಬದಲಾಯಿಸಿಕೊಳ್ಳಬೇಕು ಎನ್ನುವ ಟಿಪ್ಸ್ ಅನ್ನೂ ಸಂಸ್ಥೆ ನೀಡಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

 ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ಸಾಧ್ಯತೆ ಕಮ್ಮಿ

ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ಸಾಧ್ಯತೆ ಕಮ್ಮಿ

ಖಾಸಗಿ ಸಂಸ್ಥೆಯ ಸಮೀಕ್ಷಾ ವರದಿಯ ಪ್ರಕಾರ, ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ಸಾಧ್ಯತೆ ಕಮ್ಮಿ. ಆದರೆ, ಜೆಡಿಎಸ್ ಹೆಚ್ಚುಹೆಚ್ಚು ಮತಗಳಿಸಿದಷ್ಟು ಬಿಜೆಪಿಗೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಲಿದೆ. ಪ್ರಮುಖವಾಗಿ, ಮುಸ್ಲಿಂ ಸಮುದಾಯದ ಮತಗಳು ಡಿವೈಡ್ ಆಗುವ ಸಾಧ್ಯತೆಯಿದ್ದು, ಇದು ಕಾಂಗ್ರೆಸ್ಸಿನ ಮತಬ್ಯಾಂಕ್ ಆಗಿರುತ್ತದೆ. ಹಾಗಾಗಿ, ಜೆಡಿಎಸ್ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಮುಖವಾಗಲಿದೆ. ಆದರೂ, ಒಂದು ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಹೆಚ್ಚು.

 ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಉಪಸ್ಥಿತಿ ಅತಿ ಮುಖ್ಯ

ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಉಪಸ್ಥಿತಿ ಅತಿ ಮುಖ್ಯ

ಸಂಸ್ಥೆ ತನ್ನ ವರದಿಯಲ್ಲಿ ಪ್ರಮುಖವಾಗಿ ಹೇಳಿರುವುದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಉಪಸ್ಥಿತಿ. ಚುನಾವಣಾ ಪ್ರಚಾರದಲ್ಲಿ ಬಿಎಸ್ವೈ ಸಕ್ರಿಯವಾಗಿ ಭಾಗವಹಿಸುವುದು ಅತ್ಯಂತ ಮುಖ್ಯ ಎನ್ನುವ ಅಂಶ ವರದಿಯಲ್ಲಿದೆ. ಆದಾಯ ತೆರಿಗೆ ದಾಳಿಯ ನಂತರ ಬಿಎಸ್ವೈ ಏನಾದರೂ ನಾಮಕೇವಾಸ್ತೆ ಪ್ರಚಾರದಲ್ಲಿ ತೊಡಗಿಸಿಕೊಂಡರೆ, ಇದರ ಲಾಭವನ್ನು ಸ್ಪಷ್ಟವಾಗಿ ಕಾಂಗ್ರೆಸ್ ಪಡೆದುಕೊಳ್ಳಬಹುದು ಎನ್ನುವ ಅಂಶವೂ ಸಮೀಕ್ಷಾ ವರದಿಯಲ್ಲಿದೆ ಎಂದು ಹೇಳಲಾಗುತ್ತಿದೆ.

 ಉದಾಸಿ ಕುಟುಂಬದ ಸದಸ್ಯರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು

ಉದಾಸಿ ಕುಟುಂಬದ ಸದಸ್ಯರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು

ಹಾನಗಲ್ ನಲ್ಲಿ ಸದ್ಯ ಕಾಂಗ್ರೆಸ್ಸಿಗೆ ಪೂರಕವಾದ ವಾತಾವರಣವಿದ್ದರೆ, ಸಿಂಧಗಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮನಾದ ಫೈಟ್ ಇದೆ. ಹಾನಗಲ್ ನಲ್ಲಿ ಸಿ.ಎಂ.ಉದಾಸಿ ಕುಟುಂಬದ ಸದಸ್ಯರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ, ಬಿಜೆಪಿಗೆ ಪ್ರತಿಕೂಲವಾಗುವ ಸಾಧ್ಯತೆ ಹೆಚ್ಚು. ಯಾಕೆಂದರೆ, ಉದಾಸಿ ಕುಟುಂಬದ ಸದಸ್ಯರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಟಿಕೆಟ್ ಸಿಗದೇ ಇರುವುದಕ್ಕೆ ಕಾರ್ಯಕರ್ತರು ಆಕ್ರೋಶವನ್ನೂ ವ್ಯಕ್ತ ಪಡಿಸಿದ್ದರು. ಹಾಗಾಗಿ, ಇದನ್ನು ಸರಿಪಡಿಸಲು ಪ್ರಚಾರ ಕಣದಲ್ಲಿ ಉದಾಸಿ ಕುಟುಂಬದವರು ಇರುವುದು ಅತ್ಯವಶ್ಯಕ.

 ದಾವಣಗೆರೆಯಲ್ಲಿ ಸಿಎಂ ಬೊಮ್ಮಾಯಿ ಸಭೆಯನ್ನು ನಡೆಸಿ, ಕಾರ್ಯತಂತ್ರ

ದಾವಣಗೆರೆಯಲ್ಲಿ ಸಿಎಂ ಬೊಮ್ಮಾಯಿ ಸಭೆಯನ್ನು ನಡೆಸಿ, ಕಾರ್ಯತಂತ್ರ

ಯಡಿಯೂರಪ್ಪನವರು ಪ್ರಚಾರದಲ್ಲಿ ಭಾಗವಹಿಸದಿದ್ದರೆ, ಬಿಎಸ್ವೈ ಅಂತಹ ಪಕ್ಷ ಕಟ್ಟಿದ ನಾಯಕನನ್ನು ಬಿಜೆಪಿಯವರು ಸರಿಯಾಗಿ ನಡೆಸಿಕೊಳ್ಳದೇ ಅವಮಾನಿಸಿದರು ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡುವ ಸಾಧ್ಯತೆಯಿದೆ. ಇದರಿಂದ ಪಾರಾಗಲು, ಬಿಎಸ್ವೈ ಪ್ರಚಾರದಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯ. ಸಮೀಕ್ಷಾ ವರದಿ ಬಂದ ನಂತರ, ದಾವಣಗೆರೆಯಲ್ಲಿ ಸಿಎಂ ಬೊಮ್ಮಾಯಿ ತುರ್ತಾಗಿ ಸಭೆಯನ್ನು ನಡೆಸಿ, ಕಾರ್ಯತಂತ್ರವನ್ನು ರೂಪಿಸಿದ್ದರು ಎನ್ನುವ ಮಾತು ಚಾಲ್ತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+