ಉಪ ಚುನಾವಣೆ : ಕಾಂಗ್ರೆಸ್ ಸ್ಟಾರ್ ಪ್ರಚಾರಕರಲ್ಲಿ ರಮ್ಯಾ ಇಲ್ಲ!
ಬೆಂಗಳೂರು, ಅಕ್ಟೋಬರ್ 17 : ಕರ್ನಾಟಕ ಕಾಂಗ್ರೆಸ್ ಉಪ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದರೂ ರಮ್ಯಾ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ.
ಬುಧವಾರ ಕೆಪಿಸಿಸಿ ಸ್ಟಾರ್ ಪ್ರಚಾರಕರನ್ನು ಅಂತಿಮಗೊಳಿಸಿದೆ. ನವೆಂಬರ್ 3ರಂದು ಮೂರು ಲೋಕಸಭೆ, 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಮಂಡ್ಯ ಉಪ ಚುನಾವಣೆ : ಅಂಬರೀಶ್ ಭೇಟಿಯಾದ ಎಲ್.ಆರ್.ಶಿವರಾಮೇಗೌಡ
ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿಲ್ಲ.
ಉಪ ಚುನಾವಣೆ : ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷೆ ಏನು?
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಇತರ ಮೂವರು ಎಐಸಿಸಿ ಕಾರ್ಯದರ್ಶಿಗಳು ಪ್ರಚಾರ ಸಮಿತಿಯಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ..
ನಾನು ಮಂಡ್ಯದ ಮಣ್ಣಿನ ಮಗ : ಯಡಿಯೂರಪ್ಪ ಭಾವುಕ ಭಾಷಣ!
ಕಾಂಗ್ರೆಸ್ ಸ್ಟಾರ್ ಪ್ರಚಾರಕರು
ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇದ್ದಾರೆ.
ಸಚಿವರು, ಶಾಸಕರು
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್, ರಾಜಶೇಖರ್ ಪಾಟೀಲ್, ಶಿವಾನಂದ ಪಾಟೀಲ್, ಯು.ಟಿ.ಖಾದರ್, ವೆಂಕಟರಮಣಪ್ಪ, ಕೃಷ್ಣ ಬೈರೇಗೌಡ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಸಚಿವರ ಮತ್ತೊಂದು ತಂಡ
ಸಚಿವರಾದ ಆರ್.ವಿ.ದೇಶಪಾಂಡೆ, ಡಾ.ಜಯಮಾಲಾ, ರಮೇಶ್ ಜಾರಕಿಹೊಳಿ ಅವರು ಸ್ಟಾರ್ ಪ್ರಚಾರಕರು. ಮಾಜಿ ಸಚಿವರಾದ ಡಾ.ಶರಣಪ್ರಕಾಶ್, ರಮಾನಾಥ ರೈ ಅವರು ಸ್ಟಾರ್ ಪ್ರಚಾರಕರು.
ರಮ್ಯಾ, ಅಂಬರೀಶ್
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಆದರೆ, ಮಂಡ್ಯದ ಮಾಜಿ ಸಂಸದೆ ರಮ್ಯಾ, ಮಂಡ್ಯದ ಮಾಜಿ ಶಾಸಕ ಅಂಬರೀಶ್ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ. ಮಂಡ್ಯಕ್ಕೆ ರಮ್ಯಾ ಅವರು ಆಗಮಿಸಿ ಪ್ರಚಾರವನ್ನು ನಡೆಸಲಿದ್ದಾರೆಯೇ? ಕಾದು ನೋಡಬೇಕು.