ಯಡಿಯೂರಪ್ಪ ಡೋಂಗಿತನ ಬಿಡಲು ಕುಮಾರಣ್ಣನ ಸಲಹೆ!
Recommended Video
ಬೆಂಗಳೂರು, ನವೆಂಬರ್ 26 : " ಯಡಿಯೂರಪ್ಪನವರೇ ಬಿಡಿ ನಿಮ್ಮ ಡೋಂಗಿತನವನ್ನು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ. ಉಪ ಚುನಾವಣೆ ಪ್ರಚಾರದ ನಡುವೆಯೇ ಉಭಯ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿವೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸೋಮವಾರ ಉಪ ಚುನಾವಣಾ ಪ್ರಚಾರ ನಡೆಸಿದರು. ತಮ್ಮ ಹುಟ್ಟೂರು ಕೆ. ಆರ್. ಪೇಟೆ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಪರವಾಗಿ ಮತಯಾಚನೆ ಮಾಡಿದರು.
"ಬೂಕನಕೆರೆ ನನ್ನ ಜನ್ನಭೂಮಿ, ಕರ್ಮಭೂಮಿ ಎಂದು ಬರೆದುಕೊಟ್ಟ ಭಾಷಣವನ್ನು ಮಂಡ್ಯದಲ್ಲಿ ನಿಂತು ಯಡಿಯೂರಪ್ಪ ಅವರು ಹೇಳಿದ್ದು ಕೇಳಿ ನನಗೆ ತೀವ್ರ ಆಶ್ಚರ್ಯವಾಯ್ತು" ಎಂದು ಎಚ್. ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಯಡಿಯೂರಪ್ಪ ಮಂಡ್ಯ ಬಗ್ಗೆ ಆಡಿದ ಮಾತನ್ನು ಕುಮಾರಸ್ವಾಮಿ ಉಲ್ಲೇಖಿಸಿದ್ದು, "ಯಡಿಯೂರಪ್ಪನವರೇ ಬಿಡಿ ನಿಮ್ಮ ಡೋಂಗಿತನವನ್ನು ಬಿಡಿ" ಎಂದು ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.

ನನಗೆ ತೀವ್ರ ಆಶ್ಚರ್ಯವಾಯ್ತು
"ಬೂಕನಕೆರೆ ನನ್ನ ಜನ್ನಭೂಮಿ, ಕರ್ಮಭೂಮಿ ಎಂದು ಬರೆದುಕೊಟ್ಟ ಭಾಷಣವನ್ನು ಮಂಡ್ಯದಲ್ಲಿ ನಿಂತು ಯಡಿಯೂರಪ್ಪ ಅವರು ಹೇಳಿದ್ದು ಕೇಳಿ ನನಗೆ ತೀವ್ರ ಆಶ್ಚರ್ಯವಾಯ್ತು. 2018ರ ನನ್ನ ಬಜೆಟ್ನಲ್ಲಿ ಮಂಡ್ಯಕ್ಕೆ ನ್ಯಾಯವಾಗಿ ಅನುದಾನ ಕೊಟ್ಟದ್ದಕ್ಕೆ ನನ್ನನ್ನು 'ಮಂಡ್ಯದ ಸಿಎಂ' 'ಇದು ಮಂಡ್ಯ ಬಜೆಟ್' ಅಂದವರು ಇವರೇ ಅಲ್ಲವೇ? ರಾಜಕೀಯಕ್ಕಾಗಿ ಎಂಥ ಬೂಟಾಟಿಕೆ?" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಎಂಥ ವಿಪರ್ಯಾಸ
"ಮಂಡ್ಯ ಜನರನ್ನು ಬಿಜೆಪಿ ತುಚ್ಛವಾಗಿ ಕಂಡಿತ್ತು. ಮಂಡ್ಯದ ಜನರನ್ನು ಮೂರನೇ ದರ್ಜೆಯವರಾಗಿ ಕಂಡಿದ್ದು ಬಿಜೆಪಿ. ಆದರೆ ಇಂದು ರಾಜಕೀಯಕ್ಕಾಗಿ ಮಂಡ್ಯ ಜನರ ಕಾಲ ಬಳಿ ಬಿದ್ದಿದೆ. ಎಂಥ ವಿಪರ್ಯಾಸ. ಯಡಿಯೂರಪ್ಪನವರೇ ಬಿಡಿ ನಿಮ್ಮ ಡೋಂಗಿತನವನ್ನು" ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ತವರು ಕ್ಷೇತ್ರದಲ್ಲಿ ಪ್ರಚಾರ
ಕೆ. ಆರ್.ಪೇಟೆ ತಾಲೂಕು ಯಡಿಯೂರಪ್ಪ ಅವರ ಹುಟ್ಟೂರು. ತಾಲೂಕಿನ ಕಿಕ್ಕೇರಿ ಮತ್ತು ಬೂಕನಕೆರೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಉಪ ಚುನಾವಣೆ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಡಿಸೆಂಬರ್ 5ರಂದು ಉಪ ಚುನಾವಣೆ
ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಬಿಜೆಪಿಯಿಂದ ನಾರಾಯಣ ಗೌಡ, ಕಾಂಗ್ರೆಸ್ನಿಂದ ಕೆ. ಬಿ. ಚಂದ್ರಶೇಖರ್ ಮತ್ತು ಜೆಡಿಎಸ್ನಿಂದ ಬಿ. ಎಲ್. ದೇವರಾಜ್ ಕಣದಲ್ಲಿದ್ದಾರೆ. ಡಿಸೆಂಬರ್ 9ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications