ಐಟಿ ದಾಳಿಗೆ ಹೆದರಿದ ಕಾಳಧನಿಕರು ನೋಟಿಗೆ ಬೆಂಕಿಯಿಟ್ಟರು!
ಹಳೇ ನೋಟಿಗೆ ಬೆಂಕಿಯಿಟ್ಟು ಕಸದ ರಾಸಿಯಲ್ಲಿ ಬಿಸಾಕಲಾದ ಘಟನೆ ಹಾಸನದಿಂದ ವರದಿಯಾಗಿದೆ. ಐಟಿ ದಾಳಿಗೆ ಹೆದರಿ, ಕಪ್ಪುಹಣ ಹೊಂದಿರುವವರ ಕೆಲಸವಿದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಹಾಸನ, ಡಿ 10: ದೇಶದೆಲ್ಲಡೆ ಆದಾಯ ತೆರಿಗೆ ಮತ್ತು ಇಡಿ ಇಲಾಖೆ ನಡೆಸುತ್ತಿರುವ ದಾಳಿಗೆ ಬೆದರಿ ಕಪ್ಪುಹಣ ಹೊಂದಿರುವವರು, ಕಂತೆ ಕಂತೆ ನೋಟಿಗೆ ಬೆಂಕಿಯಿಟ್ಟ ಘಟನೆ ಹಾಸನದಲ್ಲಿ ವರದಿಯಾಗಿದೆ.
ಐನೂರು ರೂಪಾಯಿ ಮುಖಬೆಲೆಯ ಅರ್ಧ ಸುಟ್ಟ ಕಂತೆ ಕಂತೆ ನೋಟು ನಗರದ ಸಂತೇಪೇಟೆಯಲ್ಲಿರುವ ಕಸದ ರಾಸಿಯಲ್ಲಿ ಬಿದ್ದಿದೆ. ಸುಟ್ಟ ನೋಟಿನ ಕಂತೆಯಲ್ಲಿ ಸರಿಯಾಗಿರುವುದು ಯಾವುದಾದರೂ ಇದೆಯೇ ಎಂದು ಕೆಲವರು ಆಯ್ದುಕೊಳ್ಳಲು ಮುಂದಾಗಿದ್ದಾರೆ. (ಭರವಸೆ ಕೊಡ್ತೀನಿ ಒಬ್ರನ್ನೂ ಬಿಡಲ್ಲ, ಮೋದಿ)
ಕಳೆದ ಒಂದು ವಾರದಿಂದ ಹಾಸನ ಜಿಲ್ಲೆ ಸೇರಿದಂತೆ ದೇಶದೆಲ್ಲಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದರಿಂದ, ಕಪ್ಪುಹಣವನ್ನು ಹೊಂದಿರುವ ದಂಧೆಕೋರರು ಹಣ ಸುಟ್ಟಿದ್ದಾರೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಹಣವನ್ನು ಸುಟ್ಟಿರುವುದು ದೇಶಕ್ಕೆ ಮಾಡಿರುವ ಅವಮಾನ, ಅದನ್ನು ಬಡವರಿಗಾದರೂ ಕೊಟ್ಟಿದ್ದರೆ ಅವರಿಗೆ ಉಪಯೋಗವಾಗುತ್ತಿತ್ತು, ಅವರಿಗೆ ' ಬರಬಾರ್ದು ಬಾರಾ.. ' ಎಂದು ಜನ, ಹಣ ಸುಟ್ಟವರ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಶನಿವಾರ (ಡಿ10) ಗುಜರಾತಿನ ಬನಸ್ಕಾಂತದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಭ್ರಷ್ಟಾಚಾರ ನಡೆಸುತ್ತಿರುವವರನ್ನು, ಕಾಳದಂಧೆಕೋರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
ಅವರು ಹಿಂದಿನ ಗೇಟಿನಿಂದ ಪರಾರಿಯಾಗುತ್ತೇನೆ ಅಂತ ಅಂದುಕೊಂಡಿದ್ದರೆ ಅವರಿಗೆ ತಿಳಿದಿರಲಿ, ನರೇಂದ್ರ ಮೋದಿ ಹಿಂದಿನ ಗೇಟಿನಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಮೋದಿ ಎಚ್ಚರಿಕೆ ನೀಡಿದರು. (ಚಿತ್ರ: ಪಬ್ಲಿಕ್ ಟಿವಿ)