Arecanut: ತೆಂಗು, ಅಡಿಕೆ ಮತ್ತು ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರಿಗೆ ಬಜೆಟ್ನಲ್ಲಿ ಬಂಪರ್ ಗುಡ್ನ್ಯೂಸ್!
ಕರ್ನಾಟಕ ಬಜೆಟ್ 2025 -26ನೇ ಸಾಲಿನಲ್ಲಿ ತೆಂಗು, ಅಡಿಕೆ ಹಾಗೂ ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರಿಗೆ ಗುಡ್ನ್ಯೂಸ್ ಕೊಡಲಾಗಿದೆ. ರೈತರಿಗೆ ಹೆಚ್ಚಿನ ಆದಾಯವನ್ನು ನೀಡುವಲ್ಲಿ ತೋಟಗಾರಿಕೆ ಬೆಳೆಗಳ ಪಾತ್ರವು ಪ್ರಮುಖವಾಗಿವೆ. ಹೀಗಾಗಿ, ಬೆಳೆ ಪದ್ಧತಿ, ಸಂಸ್ಕರಣೆ ಹಾಗೂ ಮೌಲ್ಯ ವರ್ಧನೆಗೆ ಆದ್ಯತೆ ನೀಡಿರುವುದಾಗಿ ಅಲ್ಲದೆ ಇದರಲ್ಲಿ ಆಧುನೀಕರಣವನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ 2 ಅನ್ನು ಜಾರಿಗೊಳಿಸುವುದಾಗಿಯೂ, ಇದಕ್ಕಾಗಿ ಬರೋಬ್ಬರಿ 95 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿರುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಇದರಲ್ಲಿ ತೆಂಗು ಮತ್ತು ಅಡಿಕೆ ಬೆಳೆಯುವ ರೈತರಿಗೆ ಭರ್ಜರಿ ನ್ಯೂಸ್ ಕೊಡಲಾಗಿದೆ. ಈ ಬೆಳೆಗಾರರಿಗೆ ಸಿಕ್ಕಿರುವ ಕೊಡುಗೆಗಳು ಏನು ಹಾಗೂ ತೋಟಗಾರಿಕೆ ಇಲಾಖೆಗೆ ಸಿಕ್ಕಿರುವ ಕೊಡುಗೆಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಇನ್ನು ರಾಜ್ಯದಲ್ಲಿ ಕಳೆದ 3 ವರ್ಷಗಳಿಂದಲೂ ತೆಂಗು ಹಾಗೂ ಅಡಿಕೆ ಬೆಳೆಗಾರರು ವಿವಿಧ ಕಾರಣಗಳಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಈ ಎರಡೂ ರೈತರ ನೆರವಿಗೆ ಸರ್ಕಾರ ಧಾವಿಸಿದೆ. ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗದ ಸಮಸ್ಯೆಯಿಂದ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ, ಈ ರೋಗವನ್ನು ನಿಯಂತ್ರಣ ಮಾಡುವುದಕ್ಕೆ ಅಗತ್ಯ ನೂತನ ಪದ್ಧತಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರವು ಮುಂದಾಗಿದೆ.

ಅಡಿಕೆಯಲ್ಲಿ ಎಲೆಚುಕ್ಕಿ ರೋಗವನ್ನು ನಿಯಂತ್ರಿಸಲು ಬರೋಬ್ಬರಿ 62 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ. ಇನ್ನು ತೆಂಗು ಬೆಳೆಯುವ ಪ್ರದೇಶಗಳಲ್ಲಿ ಕಪ್ಪು ತಲೆಹುಳುವಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಸಮೀಕ್ಷೆಯ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದಾಗಿ ಹೇಳಲಾಗಿದೆ.
ತೋಟಗಾರಿಕೆಗೆ ಇನ್ನಷ್ಟು ಬಂಪರ್ ಕೊಡುಗೆಗಳು
ಇನ್ನು ರಾಜ್ಯ ಸರ್ಕಾರವು ಈ ಬಾರಿಯ 2025 -26ನೇ ಸಾಲಿನ ಬಜೆಟ್ನಲ್ಲಿ ತೋಟಗಾರಿಕೆ ಇಲಾಖೆಗೆ ಹಲವು ಬಂಪರ್ ಕೊಡುಗೆಗಳನ್ನು ನೀಡಿದೆ.
* ತೋಟಗಾರಿಕೆ ಬೆಳೆಗಳ ಬಗ್ಗೆ ರೈತರಿಗೆ ನಿಖರವಾದ ಮಾಹಿತಿಯನ್ನು ನೀಡುವ ಉದ್ದೇಶದಿಂದ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನ ಕೋಶ ಸ್ಥಾಪಿಸಲು ನಿರ್ಧರಿಸಲಾಗಿದೆ.
* ದೇಶಿಯ ತಳಿಗಳ ಸಂರಕ್ಷಣೆಗಾಗಿ ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ಮಾಡುವುದಕ್ಕೆ ನಿರ್ಧರಿಸಲಾಗಿದೆ.

* ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ ಹಾಗೂ ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ.
* ತೋಟಗಾರಿಕೆ ಉತ್ತೇಜನ ನೀಡುವ ಉದ್ದೇಶದಿಂದ ತೋಟಗಾರಿಕಾ ಪ್ರವಾಸೋದ್ಯಮ ಉತ್ತೇಜಿಸಲು ಕ್ರಮ.
* ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ವ್ಯವಸ್ಥೆ. 52,000 ಸಾವಿರ ರೈತರಿಗೆ ಲಾಭ ಇದಕ್ಕಾಗಿ 426 ಕೋಟಿ ರೂಪಾಯಿ ಅನುದಾನ ಮೀಸಲು.
* ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.












Click it and Unblock the Notifications