ಕೇಂದ್ರ ಬಜೆಟ್ 2022: ಕರ್ನಾಟಕ ರಾಜಕಾರಣಿಗಳ ಪ್ರತಿಕ್ರಿಯೆ
ಬೆಂಗಳೂರು, ಫೆಬ್ರವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಕುರಿತು ಕರ್ನಾಟಕದ ರಾಜಕಾರಣಿಗಳು ಪ್ರತಿಕ್ರಿಯಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಇ-ಪಾಸ್ಪೋರ್ಟ್ ನೀಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರದಿಂದ, ನಾಗರಿಕರು ಕಚೇರಿಗಳಿಗೆ ಅಲೆದಾಡದೆ ಸುಲಭವಾಗಿ ಪಾಸ್ಪೋರ್ಟ್ ಸೇವೆ ಪಡೆಯಲು ಸಾಧ್ಯವಾಗಲಿದೆ. ತಂತ್ರಜ್ಞಾನದ ಸದ್ಬಳಕೆಗೆ ಇದು ಮಾದರಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.
ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ
2022-23ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಸಚಿವ ಸಿ.ಎನ್. ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದು, ಸಶಸ್ತ್ರ ಪಡೆಗಳಲ್ಲಿ ಸ್ವಾವಲಂಬನೆಗೆ ನಮ್ಮ ಸರ್ಕಾರ ಬದ್ಧವಾಗಿದೆ. 2021-22ರಲ್ಲಿ 58% ರಿಂದ 2022-23ಕ್ಕೆ ಬಂಡವಾಳ ಸಂಗ್ರಹಣೆಯ ಬಜೆಟ್ನ 68% ಅನ್ನು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗುತ್ತದೆ.

ಎಂಬೆಡೆಡ್ ಚಿಪ್ಸ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಪಾಸ್ಪೋರ್ಟ್ಗಳ ವಿತರಣೆಯನ್ನು 2022-23ರಲ್ಲಿ ಸಾಗರೋತ್ತರ ಪ್ರಯಾಣದಲ್ಲಿ ನಾಗರಿಕರಿಗೆ ಅನುಕೂಲವನ್ನು ಹೆಚ್ಚಿಸಲು ಹೊರತರಲಾಗುವುದು.
ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಗತ್ಯ
ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಹಬ್ ಮತ್ತು ಸ್ಪೋಕ್ ಮಾದರಿಯ ಸಾಲಿನಲ್ಲಿ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ವೈಯಕ್ತಿಕಗೊಳಿಸಿದ ಕಲಿಕೆಯೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕೆ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ ಎಂದು ಸಚಿವ ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ:
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೂರದೃಷ್ಠಿ ಬಜೆಟ್ ಆಗಿದ್ದು, ಕೈಗಾರಿಕಾ ಕ್ಷೇತ್ರ, ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಅಳವಡಿಕೆ ಮೂಲಕ ಎಲ್ಲಾ ವರ್ಗದ ಜನರ ಜೀವನಮಟ್ಟ ಸುಧಾರಣೆಗೆ ಒತ್ತು ನೀಡಲಾಗಿರುವುದನ್ನು ಸ್ವಾಗತಿಸುತ್ತೇನೆ ಮಾನ್ಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆ.ಜೆ.ಎಂ. ಯೋಜನೆಗೆ 2021-22 ಸಾಲಿನಲ್ಲಿ 50 ಸಾವಿರ ಕೋಟಿ ಇದ್ದು, ಅದನ್ನು 2022-23ನೇ ಸಾಲಿನಲ್ಲಿ 60 ಸಾವಿರ ಕೋಟಿಗೆ ಏರಿಸಲಾಗಿದ್ದು, ಹೊಸದಾಗಿ 3.8 ಕೋಟಿ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ಬಜೆಟ್
ಇಂದು ಕೇಂದ್ರ ಬಜೆಟ್ ಮಂಡನೆ ಮಂಡನೆಯಾಗಿದ್ದು, ಇದು ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ಬಜೆಟ್ ಆಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಅನೇಕ ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಯುತ್ತಿತ್ತು. ಇದೀಗ ನದಿ ಜೋಡಣೆ ಯೋಜನೆ ಘೋಷಿಸಲಾಗಿದೆ. ಇದರಿಂದ 25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲ ಆಗಲಿದೆ. ಕುಡಿಯುವ ನೀರಿನ ಸಮಸ್ಯೆ ಕೂಡ ನಿವಾರಣೆಯಾಗಿದೆ. ಪ್ರತಿ ಮನೆಗೂ ನೀರು ಕೊಡಲು 60 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ರೈತರಿಗೆ ಅನುಕೂಲವಾಗುವ ಅಂಶಗಳು ಈ ಬಜೆಟ್ನಲ್ಲಿ ಇವೆ ಎಂದಿದ್ದಾರೆ.
ಶಿಕ್ಷಣಕ್ಕೆ ಅಭೂತಪೂರ್ವ ಕೊಡುಗೆ
ಈ ಬಾರಿ ಕೇಂದ್ರ ಬಜೆಟ್ನಲ್ಲಿ ಶಿಕ್ಷಣಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದು, ಈ ಬಜೆಟ್ ಸ್ವಾಗತಾರ್ಹ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ. ಒಂದು ತರಗತಿ, ಒಂದು ಟಿವಿ ಚಾನೆಲ್ ಕಾರ್ಯಕ್ರಮದಲ್ಲಿ ಸ್ಥಳೀಯ ಭಾಷೆಯಲ್ಲಿ ಕಲಿಸಲು ಚಾನೆಲ್ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸುವ ಪ್ರಧಾನಿ ಮೋದಿ ಸರ್ಕಾರದ ನಡೆ ಶ್ಲಾಘನೀಯ. ಇದು ಶಿಕ್ಷಣದ ಪ್ರಸರಣಕ್ಕೆ ಇನ್ನಷ್ಟು ನೆರವಾಗಲಿದೆ ಎಂದಿದ್ದಾರೆ.
ಜನಪರ ಬಜೆಟ್ ಮಂಡನೆ
ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ದೇಶ ವೇಗವಾಗಿ ಅಭಿವೃದ್ಧಿ ಹೊಂದುವಂತಹ ಬಜೆಟ್ ಕೇಂದ್ರದಿಂದ ಮಂಡನೆಯಾಗಿದೆ ಎಂದಿದ್ದಾರೆ. ರಾಜ್ಯಕ್ಕೆ ಇನ್ನೂ ವಿಶೇಷ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. ಈ ಬಾರಿ ಐಟಿ, ಆರೋಗ್ಯ, ರೈತರಿಗೆ ಅನುಕೂಲವಾಗುವಂಥ ಬಜೆಟ್ ಮಂಡನೆಯಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ದೇಶದ ಸಮಗ್ರ ಪ್ರಗತಿಗೆ ಪೂರಕ ಬಜೆಟ್
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ನಲ್ಲಿ ಪ್ರಧಾನಿ ಗತಿಶಕ್ತಿ ಯೋಜನೆ, ಅಂತರ್ಗತ ಅಭಿವೃದ್ಧಿ, ಉತ್ಪಾದಕತೆ ಹೆಚ್ಚಳ, ಅಭಿವೃದ್ಧಿ ಅವಕಾಶ ಹೆಚ್ಚಳ, ಶಕ್ತಿ ಪರಿವರ್ತನೆ, ಹವಾಮಾನ ಸಂಬಂಧಿತ ಪ್ರಕ್ರಿಯೆ, ಹೂಡಿಕೆಗೆ ಹಣಕಾಸು ನೀಡಿಕೆ ಇದ್ದು ಇದೊಂದು ಆತ್ಮನಿರ್ಭರ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪಿಎಂ ಗತಿಶಕ್ತಿ ಯೋಜನೆಯನ್ನು ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಸಾರಿಗೆ ಮತ್ತು ಲಾಜಿಸ್ಟಿಕ್ ಇನ್ಫ್ರಾ ಎಂದು 7 ವಿಭಾಗಗಳನ್ನಾಗಿ ಮಾಡಿದ್ದು ಇದು ಸಮಗ್ರ ಪ್ರಗತಿಗೆ ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ವಿಶ್ವಗುರುವಿನತ್ತ ಸಾಗಲು ಕೇಂದ್ರ ಬಜೆಟ್ ಸಹಕಾರಿ
ಇಂದು 2022-23ನೇ ಸಾಲಿನ ಬಜೆಟ್ ಅನ್ನು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಜೆಟ್ ಕೋವಿಡ್ ನಂತರದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ದೇಶದ ಪ್ರಗತಿಗೆ ಒಂದು ಹೊಸ ಮುನ್ನುಡಿ ಬರೆದಂತಿದೆ ಎಂದು ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಬಜೆಟ್ನಲ್ಲಿ ವಿಶೇಷವಾಗಿ ಪಿಎಂ ಆವಾಸ್ ಯೋಜನೆಗೆ 48,000 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು. ಎಲ್ಲರಿಗೂ ಸೂರು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗೆ ಆದ್ಯತೆ ನೀಡಲಾಗಿದ್ದು, 2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ರಕ್ಷಣಾ ಬಜೆಟ್ನ ಶೇ.35ರಷ್ಟು ಅನುದಾನ ಸಂಶೋಧನೆಗೆ ಮೀಸಲಿಡಲಾಗಿದ್ದು, ಶೇ.68ರಷ್ಟು ಭಾರತದಲ್ಲೇ ಉತ್ಪಾದನೆಗೆ ಒತ್ತು ನೀಡಲಾಗಿದೆ. ರಕ್ಷಣೆ ಕ್ಷೇತ್ರದಲ್ಲಿಯೂ ಸಹ ಆತ್ಮನಿರ್ಭರತೆ ಹೊಂದುವುದಕ್ಕಾಗಿ ಸ್ಥಳೀಯವಾಗಿಯೇ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದಿದ್ದಾರೆ.
ವಿಶೇಷವಾಗಿ ಡಿಜಿಟಲ್ ಕರೆನ್ಸಿಯನ್ನು ಈ ಸಾಲಿನಲ್ಲಿ ಪರಿಚಯಿಸಿದ್ದಾರೆ. 2022ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ "ಡಿಜಿಟಲ್ ರುಪೀ" ಪರಿಚಯಿಸಲಿದೆ. ನಾಗರಿಕರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಈ ಪಾಸ್ಪೋರ್ಟ್ ಅನ್ನು ಪರಿಚಯಿಸಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭದಿಂದಲೂ ಡಿಜಿಟಲೀಕರಣ, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಈ ಬಾರಿಯ ಬಜೆಟ್ ನಲ್ಲಿ ಡಿಜಿಟಲ್ ಆಸ್ತಿ ಮೇಲೆ ಶೇಕಡಾ 30ರಷ್ಟು ತೆರಿಗೆ, ಸಹಕಾರ ಸಂಘಗಳಿಗೆ ತೆರಿಗೆ ಮುಕ್ತಿ ದೊರೆಯಲಿದೆ.
ಜನಸಾಮಾನ್ಯರನ್ನು ನಿರ್ಲಕ್ಷಿಸಿದ ಬಜೆಟ್: ಪೃಥ್ವಿ ರೆಡ್ಡಿ
ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಜನಸಾಮಾನ್ಯರಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳನ್ನು ನಿರ್ಲಕ್ಷಿಸಿರುವ ಆಯವ್ಯಯವನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ಗೆ ಸಂಬಂಧಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಪೃಥ್ವಿ ರೆಡ್ಡಿ, "2022ರ ವೇಳೆಗೆ ಕೃಷಿಕರ ಆದಾಯವನ್ನು ಎರಡು ಪಟ್ಟು ಹೆಚ್ಚಿಸುವುದಾಗಿ ಪ್ರಧಾನಿ ಮೋದಿಯವರು ನಾಲ್ಕು ವರ್ಷಗಳಿಂದ ಎಲ್ಲ ಚುನಾವಣಾ ಸಮಾವೇಶಗಳಲ್ಲಿ ಹೇಳುತ್ತಿದ್ದರು. ಆದ್ದರಿಂದ ಈ ಬಾರಿಯಾದರೂ ರೈತಪರ ಬಜೆಟ್ ಮಂಡಿಸುತ್ತಾರೆಂಬ ನಿರೀಕ್ಷೆಯಿತ್ತು. ಕೋವಿಡ್ ಅಲೆಗಳು ಒಂದಾದ ಮೇಲೆ ಒಂದರಂತೆ ಬರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಾರೆಂದು ಭಾವಿಸಲಾಗಿತ್ತು. ಆದರೆ ಎಲ್ಲ ವರ್ಗಗಳ ಸಾಮಾನ್ಯ ಜನರ ನಿರೀಕ್ಷೆಗಳಿಗೆ ಬಜೆಟ್ನಲ್ಲಿ ತಣ್ಣೀರು ಎರೆಚಲಾಗಿದೆ," ಎಂದು ಹೇಳಿದರು.
"ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಶಿಕ್ಷಣವು ಎಂದೂ ಆದ್ಯತೆಯ ವಿಷಯವಲ್ಲ. ಹಿಂದಿನಿಂದ ಬಂದ ಸಂಪ್ರದಾಯದಂತೆ ಹಾಗೂ ನಮ್ಮೆಲ್ಲರ ಊಹೆಯಂತೆ ಈ ಬಾರಿ ಕೂಡ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೋವಿಡ್ ಹಾಗೂ ಲಾಕ್ಡೌನ್ನಿಂದ ತತ್ತರಿಸಿರುವ ಕಾರ್ಮಿಕರಿಗೆ ನೆರವಾಗುವಂತಹ ಯೋಜನೆಗಳೂ ಬಜೆಟ್ನಲ್ಲಿ ಇಲ್ಲ. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆಯೂ ಬಜೆಟ್ನಲ್ಲಿ ಸರಿಯಾದ ಪ್ರಸ್ತಾಪವಿಲ್ಲ. ಬಜೆಟ್ ಹೆಸರಿನಲ್ಲಿ ಸುಳ್ಳುಗಳ ಸರಮಾಲೆಯನ್ನು ಮಂಡಿಸಲಾಗಿದೆ," ಎಂದು ಪೃಥ್ವಿ ರೆಡ್ಡಿ ಹೇಳಿದರು.












Click it and Unblock the Notifications