ರಾಜ್ಯದ ಪ್ರತಿ ಪ್ರಜೆ ತಲೆ ಮೇಲೆ 38 ಸಾವಿರು ರು ಸಾಲ!
ಬೆಂಗಳೂರು, ಫೆಬ್ರವರಿ 15: ಒಂದು ಸರ್ಕಾರ ಸಾಲ ಮಾಡುವುದು ತಪ್ಪಲ್ಲ. ಆದರೆ ಅದಕ್ಕೆ ಪೂರಕವಾದ ಸಿದ್ಧತೆ ಹಾಗೂ ಯೋಜನೆಗಳಿರಬೇಕು. ಆದರೆ, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಕೊಂಚವೂ ವಿತ್ತೀಯ ಶಿಸ್ತು ಪಾಲಿಸದೇ, ಅನಗತ್ಯ ದುಂದುವೆಚ್ಚ, ರಾಜ್ಯದ ಆದಾಯ ಹೆಚ್ಚಿಸುವ ಯಾವುದೇ ಯೋಜನೆ ರೂಪಿಸಿದೇ ರಾಜ್ಯದ ಸಾಲದ ಹೊರೆ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ಸಾಧನಾ ಸಮಾವೇಶದ ಹೆಸರಿನಲ್ಲಿ, ಜನರ ತೆರಿಗೆ ದುಡ್ಡಿನಲ್ಲಿ ಸಿದ್ದರಾಮಯ್ಯನವರ ಮತ್ತು ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡಲಾಗುತ್ತಿದೆ.
ಆಡಳಿತ ಯಂತ್ರವೇ ನಿಷ್ಕ್ರಿಯವಾಗಿದ್ದರೂ, ರಾಜ್ಯದ ರಸ್ತೆಗಳು ರೌರವ ನರಕದಂತಾಗಿದ್ದರೂ, ಕೆಟ್ಟ ರಸ್ತೆಗಳಿಂದಾಗಿ ಜನ ಪಡಿಪಾಟಲು ಪಡುತ್ತಿದ್ದರೂ, ಅಭಿವೃದ್ಧಿ ಪಥದಲ್ಲಿ ಕರ್ನಾಟಕ ನಂ 1 ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಾ, ಕೇವಲ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೇ, ಸಾಧ್ಯವಿರುವ ಎಲ್ಲೆಲ್ಲಿಯೂ ದುಬಾರಿ ವೆಚ್ಚದಲ್ಲಿ ಜಾಹೀರಾತು ನೀಡಿ ಜನರ ದುಡ್ಡನ್ನು ಪೋಲು ಮಾಡಲಾಗುತ್ತಿದೆ.
ರಾಜ್ಯದ ಮಂತ್ರಿಗಳ ಅನಗತ್ಯ ಕಛೇರಿ ನವೀಕರಣ, ದುಂದು ವೆಚ್ಚ, ಸರಕಾರಿ ದುಡ್ಡಲ್ಲಿ ಮಜಾ ಮಾಡುವ ಛಾಳಿ ಸರಕಾರಿ ಅಧಿಕಾರಿಗಳಿಗೂ ಹಿಡಿದಿದ್ದು, (ಆರ್ಡಿಪಿಆರ್) ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಅ ಅಧಿಕಾರಿಗಳು 17,000 ಕೋಟಿ ರೂಪಾಯಿಗಳ ಬಹುದೊಡ್ಡ ಹಗರಣ ಮಾಡಿ, ಸಾವಿರಾರು ಕೋಟಿ ಜನರ ತೆರಿಗೆ ದುಡ್ಡನ್ನು ಗುಳುಂ ಮಾಡಿದ್ದರೂ, ಸರಕಾರ ಅವರ ವಿರುದ್ಧ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ.

ಬೆಂಗಳೂರು ಮಹಾನಗರ ಅಭಿವೃದ್ಧಿಯ ನೆಪ
ಬೆಂಗಳೂರು ಮಹಾನಗರ ಅಭಿವೃದ್ಧಿಯ ನೆಪದಲ್ಲಿ, ಸ್ಟೀಲ್ ಬ್ರಿಡ್ಜ್, ಪಾಡ್ ಟ್ಯಾಕ್ಸಿ, ವೈಟ್ ಟ್ಯಾಪಿಂಗ್, ಕೆಂಪೇಗೌಡ ಬಡಾವಣೆ ನಿರ್ಮಾಣದ ಹೆಸರಲ್ಲಿ ಅಪಾರ ಹಣ ಬಿಡುಗಡೆ ಮಾಡಿ, ಅತ್ಯಂತ ದುಬಾರಿ ವೆಚ್ಚದ ಗುತ್ತಿಗೆಗಳನ್ನು ನೀಡಿ ರಾಜ್ಯವನ್ನು ಲೂಟಿ ಮಾಡುತ್ತಿದೆ. ಸರ್ಕಾರದ ನಿಷ್ಕ್ರಿಯತೆ,ಹೊಣೆಗೇಡಿತನ, ಬೇಜವಾಬ್ದಾರಿತನ, ಭೃಷ್ಟಾಚಾರ ರಾಜ್ಯವನ್ನು ದಿವಾಳಿಯ ಅಂಚಿಗೆ ತಳ್ಳುತ್ತಿವೆ.
ದೆಹಲಿಯ ಆಮ್ ಆದ್ಮಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಸಾಲ ಮಾಡದೇ, ಯಾವುದೇ ತೆರಿಗೆ ಹೆಚ್ಚಿಸದೇ, ಬದಲಾಗಿ ಇನ್ಸ್ಪೆಕ್ಟರ್ ರಾಜ್ ರದ್ದು ಮಾಡಿ, ಭೃಷ್ಟಾಚಾರಕ್ಕೆ ಕಡಿವಾಣ ಹಾಕಿ, ಉಚಿತ ನೀರು ಹಾಗೂ ವಿದ್ಯುತ್ ಬೆಲೆಯನ್ನು ಅರ್ಧಕ್ಕಿಳಿಸಿಯೂ ಉಳಿತಾಯ ಬಜೆಟ್ ಮಂಡಿಸಿದೆ.

ದೆಹಲಿ ಸರ್ಕಾರದ ಜತೆ ಹೋಲಿಕೆ
ಆಮ್ ಆದ್ಮಿ ಪಕ್ಷದ ಸರಕಾರ ಹಿಂದಿನ ವ್ಯಾಟ್ ಪದ್ಧತಿಯಲ್ಲಿದ್ದ , ಅನೇಕ ಅಗತ್ಯ ವಸ್ತುಗಳ 14.5% ತೆರಿಗೆಯನ್ನು 5%ಗೆ ಇಳಿಸಿದರೂ, 2015-16ನೇ ಸಾಲಿನಲ್ಲಿ ದೆಹಲಿ ಸರ್ಕಾರದ ಆದಾಯ 38 ಸಾವಿರ ಕೋಟಿಯಿಂದ 48 ಸಾವಿರ ಕೋಟಿಗೆ ಏರಿಕೆಯಾಗಿತ್ತು ಮಾತ್ರವಲ್ಲದೇ, ಆಪ್ ಸರಕಾರ ಬಂದ ಮೂರೇ ವರ್ಷಗಳಲ್ಲಿ ಬಜೆಟ್ ಗಾತ್ರ 33% ಏರಿಕೆಯಾಗಿದೆ.

ಎಎಪಿ ಸರ್ಕಾರ ಮಾದರಿಯಾಗಿದೆ
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಗೆ ಈ ಹೆಚ್ಚುವರಿ ಕ್ರೋಢಿಕೃತ ಹಣವನ್ನು ವಿನಿಯೋಗಿಸಲಾಗುತ್ತಿದೆ. ಫ್ಲೈ ಓವರ್ಗಳ ನಿಗದಿತ ಅವಧಿಗೆ ಮೊದಲೇ ನಿರ್ಮಾಣದಿಂದ ಸುಮಾರು 277 ಕೋಟಿ ಉಳಿತಾಯ ಮಾಡಲಾಯಿತು ಈ ಹಣವನ್ನು ಮೊಹಲ್ಲಾ ಕ್ಲಿನಿಕ್ ನಂತಹ ಜನಪರ ಕೆಲಸಗಳಿಗೆ ಬಳಸಲಾಗಿದೆ. ಪ್ರಾಮಾಣಿಕ ಸರ್ಕಾರ ಹೇಗೆ ತನ್ನ ದಕ್ಷ ಆಡಳಿತದಿಂದ, ಆರ್ಥಿಕ ಶಿಸ್ತಿನಿಂದ ರಾಜ್ಯವನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಆಮ್ ಆದ್ಮಿ ಸರ್ಕಾರ ಮಾದರಿಯಾಗಿದೆ.

ಸಿದ್ದರಾಮಯ್ಯ ಸಂಪೂರ್ಣ ವಿಫಲ
ಇದಕ್ಕೆ ತದ್ವಿರುದ್ದವಾಗಿ ಈಗಾಗಲೇ ಹನ್ನೊಂದು ಬಜೆಟ್ ಮಂಡಿಸಿರುವ ಅನುಭವ ಇರುವ ಸಿದ್ದರಾಮಯ್ಯನವರು ಆರ್ಥಿಕ ಆಶಿಸ್ತಿನಿಂದ ರಾಜ್ಯವನ್ನು ದಿವಾಳಿಯತ್ತ ನೂಕುತ್ತಿದ್ದಾರೆ, ಉತ್ತಮ ಸ್ಥಿತಿಯಲ್ಲಿರುವ ರಾಜ್ಯವನ್ನು ಬಿಹಾರ, ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳ ಸಾಲಿಗೆ ದೂಡುತ್ತಿದ್ದಾರೆ.
ರಾಜ್ಯದ ಆದಾಯ ಸಂಗ್ರಹದಲ್ಲಿ 20ಸಾವಿರ ಕೋಟಿಗಳಷ್ಟು ಕೊರತೆ ಇರುವುದರಿಂದ, ಪ್ರಮುಖ ಇಲಾಖೆಗಳ ಅನುದಾನದಲ್ಲಿ 20% ಕಡಿತವಾಗಲಿರುವ ಬಗ್ಗೆ ಈಗಾಗಲೇ ಪತ್ರಿಕಾ ವರದಿಗಳು ಬೆಳಕು ಚೆಲ್ಲಿವೆ, ಇದು ಆದಾಯ ಕ್ರೋಢಿಕರಣದಲ್ಲಾಗಲೀ, ವಿತ್ತೀಯ ಕೊರತೆ ನೀಗಿಸುವುದರಲ್ಲಾಗಲೀ ರಾಜ್ಯ ಸರ್ಕಾರಕ್ಕೆ ಯಾವುದೇ ಇಚ್ಛಾಶಕ್ತಿ ಇಲ್ಲವೆಂಬುದನ್ನು ಎತ್ತಿ ತೋರಿಸುತ್ತದೆ. ಒಬ್ಬ ಹಣಕಾಸು ಸಚಿವನಾಗಿ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ.

ಸಾಲ ತೀರಿಸಲು ರೂಪಿಸಿರುವ ಯೋಜನೆಗಳೇನು?
ರಾಜ್ಯ ಸರ್ಕಾರ ಯಾವ ಯಾವ ಉದ್ದೇಶಗಳಿಗಾಗಿ ಸಾಲ ಮಾಡಿದೆ. ?
ಮಾಡಿರುವ ಸಾಲ ತೀರಿಸಲು ರೂಪಿಸಿರುವ ಯೋಜನೆಗಳೇನು?
ಸಾಲ ತಂದು ಮಾಡಿರುವ ಯೋಜನೆಗಳ ಪ್ರಗತಿ ಏನು? ಈ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ, ಇಲ್ಲವಾದಲ್ಲಿ ರಾಜ್ಯದ ಜನರ ತೆರಿಗೆ ದುಡ್ಡಿನಲ್ಲಿ ನಡೆಸುತ್ತಿರುವ ಕಾಂಗ್ರೆಸ್ ಜಾತ್ರೆಯ ಬಂಡವಾಳವನ್ನು ಎಳೆಎಳೆಯಾಗಿ ಜನರ ಮುಂದೆ ಬಿಚ್ಚಿಟ್ಟು ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವ ಕೆಲಸವನ್ನು ಆಮ್ ಆದ್ಮಿ ಪಕ್ಷ ಮಾಡಲಿದೆ.












Click it and Unblock the Notifications