ಮಹಾಮಾರಿ ಕೊರೊನಾ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯ
ಕೊರೊನಾ ವೈರಸ್ ಹಾವಳಿ ಜಗತ್ತಿನಲ್ಲಿ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಬಗ್ಗೆ ಹಲವು ಜ್ಯೋತಿಷಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಮೇ 29ಕ್ಕೆ ವೈರಸ್ ಹಾವಳಿ ಕಮ್ಮಿಯಾಗಲಿದೆ ಎಂದು ಹೇಳಿದ್ದರು.
ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿದು, ಭರತ ಖಂಡಕ್ಕೆ ಇದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ನುಡಿದಿದ್ದರು.
ಇನ್ನು, ಹದಿನಾಲ್ಕು ವರ್ಷದ ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ಕೊರೊನಾ ವಿಚಾರದಲ್ಲಿ ನುಡಿದ ಭವಿಷ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನೇ ಮಾಡಿತ್ತು. ಈಗ, ಬ್ರಹ್ಮಾಂಡ ಗುರೂಜಿಗಳ ಸರದಿ.
ಕೊರೊನಾ ವೈರಸ್ ನಿಂದ ಬಚಾವ್ ಆಗಲು ದೇವರನ್ನು ನಂಬುವುದೇ ಪರಿಹಾರ ಎಂದಿರುವ ಗುರೂಜಿಗಳು, ಕೊರೊನಾ ಜೊತೆಗೆ, ಭೂಕಂಪನದ ಬಗ್ಗೆಯೂ ಜ್ಯೋತಿಷ್ಯ ನುಡಿದಿದ್ದಾರೆ. ಅದು ಹೀಗಿದೆ:

ಬ್ರಹ್ಮಾಂಡ ಗುರುಗಳು ಎಂದೇ ಹೆಸರಾಗಿರುವ ನರೇಂದ್ರ ಬಾಬು ಶರ್ಮಾ
ತನ್ನ ವಿಶಿಷ್ಟ ಮಾತಿನ ಧಾಟಿಯಿಂದ ಹೆಸರುವಾಸಿಯಾಗಿರುವ ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ, ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅವರು, ಭೂಕಂಪ ಮತ್ತು ಕೊರೊನಾ ಬಗ್ಗೆ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ
ಎರಡು ವರ್ಷಗಳ ಹಿಂದಿನ ಅತಿವೃಷ್ಟಿಯಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಲಿದ್ದು, ತುಂಬಾ ತೊಂದರೆಯಾಗಲಿದೆ ಎಂದು ಗುರೂಜಿಗಳು ಹೇಳಿದ್ದಾರೆ. ಸಂಪೂರ್ಣ ಕೊಡಗು ಮತ್ತೆ ನಲುಗಿ ಹೋಗಲಿದೆ ಎಂದು ಗುರೂಜಿಗಳು ಹೇಳಿದ್ದಾರೆ.

ಅಮೆರಿಕಾ ಮತ್ತು ಆಸ್ಟ್ರೇಲಿಯಾ
ಇನ್ನೂ ಮುಂದುವರಿದು, ಭೂಕಂಪನದ ಭಯಾನಕ ಅನುಭವಕ್ಕೆ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಕೂಡಾ ಸಾಕ್ಷಿಯಾಗಲಿದೆ. ಅಮೆರಿಕಾ ಸರ್ವನಾಶವಾಗಲಿದೆ ಮತ್ತು ಆಸ್ಟ್ರೇಲಿಯಾ ಬಹುಪಾಲು ಸಮುದ್ರ ಪಾಲಾಗಲಿದೆ ಎನ್ನುವ ಭವಿಷ್ಯವನ್ನೂ ಬ್ರಹ್ಮಾಂಡ ಗುರುಗಳು ಹೇಳಿದ್ದಾರೆ.

ಇದು ಕೊರೊನಾ ಅಲ್ಲ, ಕೌಮಾರಿ
ಕೊರೊನಾ ಮಹಾಮಾರಿಯ ಬಗ್ಗೆ ಮಾತಾನಾಡಿದ ಗುರುಗಳು, ಇದು ಕೊರೊನಾ ಅಲ್ಲ, ಕೌಮಾರಿ. ಈ ಕೌಮಾರಿಯ ಶಾಂತಿಗಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಬೇಕಿದೆ ಎಂದು ಹೇಳಿದ ಬ್ರಹ್ಮಾಂಡ ಗುರುಗಳು, ಇದರಿಂದ ಮುಕ್ತಿಯ ಬಗ್ಗೆ ಏನನ್ನೂ ಹೇಳಲಿಲ್ಲ.












Click it and Unblock the Notifications