ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ, ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಸಿಪಿ ಯೋಗೇಶ್ವರ್ ಹೇಳಿದ್ದೇನು?
ಬೆಂಗಳೂರು, ಜನವರಿ 14: ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಅವರ ಮತ್ತೆ ಸುದ್ದಿಯಲ್ಲಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜನಾಭಿಪ್ರಾಯದಿಂದ ಅಧಿಕಾರಕ್ಕೆ ಬರಲ್ಲ ಎಂಬ ಶಾಕಿಂಗ್ ಸ್ಟೆಟ್ಮೆಂಟ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿರುವ ಆಡಿಯೊವೊಂದು ವೈರಲ್ ಆಗಿದೆ. ಇದು ಯೋಗೇಶ್ವರ್ ಅವರ ಧ್ವನಿಯನ್ನೇ ಹೊಂದುವ ಆಡಿಯೊ ಆಗಿದೆ.

ಯೋಗೇಶ್ವರ್ ಹೇಳಿದ್ದೇನು?
ಕೇಂದ್ರ ಗೃಹ ಸಚಿವ ಅಮಿತ್ ಶಾರದ್ದು ಒಂಥರಾ ರೌಡಿಸಂ ಕಣಯ್ಯ, ಪಕ್ಷದ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅವರ ಕಥೆ ಅಷ್ಟೇ.. ಅಲ್ಲಿಗೆ ಮುಗೀತು ಎಂಬ ಮಾತನ್ನು ಹೇಳಿದ್ದಾರೆ.
'ಹೊಂದಾಣಿಕೆ ರಾಜಕೀಯ ನಮ್ಮ ಪಕ್ಷಕ್ಕೆ ಬೇಡವೆಂದು ಅಮಿತ್ ಶಾ ಹೇಳ್ತಾರೆ. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡರೆ, ಅದು ತಾಯಿಗೆ ದ್ರೋಹ ಬಗೆದಂತೆ ಎಂದು ಪ್ರತಿಪಾದಿಸ್ತಾರೆ. ನಮ್ಮ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ. ಪಕ್ಷದ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ, ಅಲ್ಲಿಗೆ ಮುಗೀತು' ಎಂದು ಯೋಗೇಶ್ವರ್ ಆಡಿಯೊದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ತಮ್ಮದೇ ಪಕ್ಷದ ನಾಯಕರಿಗೂ ಸವಾಲು ಹಾಕುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. 'ನಾನು ಜೆಡಿಎಸ್ ನಾಯಕ ಕುಮಾರಸ್ವಾಮಿ ವಿರುದ್ಧ ತೊಡೆತಟ್ತಿನಿ. ಆದರೆ, ಆ ಅಶ್ವತ್ಥನಾರಾಯಣಗೆ ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂತು ಗೆಲ್ಲೋಕೆ ಆಗುತ್ತಾ? ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಆರ್. ಅಶೋಕ್ ಗೆದ್ದು ತೋರಿಸಲಿ. ಈ ಬಾರಿಯೂ ಜನಾಭಿಪ್ರಾಯದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲ. ಆದ್ರೂ, ನಾವೇ ಸರ್ಕಾರ ರಚಿಸ್ತೀವಿ' ಎಂದು ಯೋಗೇಶ್ವರ್ ಹೇಳಿದ್ದಾರೆ.

ಜೆಡಿಎಸ್ ಬಗ್ಗೆ ಮಾತು
ಇದೇ ಆಡಿಯೊದಲ್ಲಿ ಜೆಡಿಎಸ್ ಬಗ್ಗೆ ಸಿಪಿ ಯೋಗೇಶ್ವರ್ ಕೆಲ ವಿವಾದಿತ ಮಾತುಗಳನ್ನು ಆಡಿದ್ದಾರೆ. 'ಗುಬ್ಬಿಯಲ್ಲಿ ಶ್ರೀನಿವಾಸ್, ಅರಿಶೀಕೆರೆಯಲ್ಲಿ ಶಿವಲಿಂಗೇಗೌಡ, ಅರಕಲಗೂಡಿನಲ್ಲಿ ಎ.ಟಿ ರಾಮಸ್ವಾಮಿ, ದಾಸರಹಳ್ಳಿಯಲ್ಲಿ ಆರ್.ಮಂಜುನಾಥ್, ನೆಲಮಂಗಲದಲ್ಲಿ ಡಾ. ಶ್ರೀನಿವಾಸ್ ಮೂರ್ತಿ, ಮಳವಳ್ಳಿಯಲ್ಲಿ ಡಾ. ಅನ್ನದಾನಿ, ಮದ್ದೂರಿನಲ್ಲಿ ಡಿ.ಸಿ.ತಮ್ಮಣ್ಣ, ಮಂಡ್ಯದಲ್ಲಿ ಶ್ರೀನಿವಾಸ್, ಟಿ ನರಸೀಪುರದಲ್ಲಿ ಸಾರಾ ಮಹೇಶ್ ಯಾಕೆ ಸೋಲ್ತಾರೆ. ಅದು ಯಾಕೆ ಅಂತ ಆಮೇಲೆ ಹೇಳ್ತೀನಿ. ರಾಮನಗರದಲ್ಲಿ 3 ಅವರೇ (ಜೆಡಿಎಸ್) ಗೆಲ್ತಾರೆ. ಇನ್ನು ಮಧುಗಿರಿಯಲ್ಲಿ ವೀರಭದ್ರಯ್ಯ, ಬೇಲೂರು ಲಿಂಗೇಶ್ ಈ ಸರಿ ಗೆಲ್ಲಲ್ಲ' ಎಂದು ಹೇಳಿದ್ದಾರೆ.
'ಟಿ ನರಸೀಪುರದಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಯಾಕೆ ಸೋಲ್ತಾನೆ ಅಂದ್ರೆ, ಅವನು ಗೆದ್ದಿರೋದು ಕಡಿಮೆ ಮತಗಳ ಅಂತರದಲ್ಲಿ. ಅಲ್ಲೀಗ ಜೆಡಿಎಸ್ ಹಾಗೂ ಕಾಂಗ್ರೆಸ್ ಕ್ಷೇತ್ರದಿಂದ ಇಬ್ಬರು ಒಕ್ಕಲಿಗರನ್ನು ನಿಲ್ಲಿಸ್ತಾರೆ. ಹೀಗಾಗ, ಕಾಂಗ್ರೆಸ್ಗೆ ಚಾನ್ಸ್ ಇದೆ' ಎಂದು ತಿಳಿಸಿದ್ದಾರೆ.

ಜನಾಭಿಪ್ರಾಯದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲ್ಲ
ಜನಾಭಿಪ್ರಾಯದಿಂದ ಬಿಜೆಪಿ ಸರ್ಕಾರವನ್ನು ರಚಿಸುವುದಿಲ್ಲ. ಆದ್ರೆ, ಕಳೆದ ಬಾರಿಯಂತೆ ಈ ಬಾರಿಯೂ ನಾವೇ ಬಿಜೆಪಿ ಸರ್ಕಾರ ಮಾಡ್ತೀವಿ. ಮಾವಿನ ಹಣ್ಣು ಮರದಲ್ಲೇ ಹಣ್ಣಾಗೋದಕ್ಕೂ, ಕೆಮಿಕಲ್ ಹಾಕಿ ಹಣ್ಣು ಮಾಡೋದಕ್ಕೂ ವ್ಯತ್ಯಾಸವಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಷ್ಟೊಂದು ಸ್ಟ್ರಾಂಗ್ ಇಲ್ಲ. ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯಗೆ ಮತ್ತೊಮ್ಮೆ ಪಟ್ಟ ಕಟ್ಟೋಕೆ ದೊಡ್ಡ ದೊಡ್ಡ ನಾಯಕರುಗಳಿಗೆ ಇಷ್ಟವಿಲ್ಲ ಎಂದೂ ಸಿಪಿವೈ ಆಡಿಯೊದಲ್ಲಿ ಹೇಳಿದ್ದಾರೆ.

ಸುಮಲತಾ ಸಂಪರ್ಕದಲ್ಲಿದ್ದಾರೆ
ಮಂಡ್ಯ ಸಂಸದೆ ಸುಮಲತಾ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸಿಪಿ ಯೋಗೇಶ್ವರ್ ನಿನ್ನೆ ಹೇಳಿದ್ದರು. ಸುಮಲತಾ ಬಿಜೆಪಿ ಸೇರ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಅವರು, ಸುಮಲತಾ ನನ್ನ ಸಂಪರ್ಕದಲ್ಲಿದ್ದಾರೆ. ಅವರು ಬಿಜೆಪಿ ಸೇರ್ತಾರಾ ಇಲ್ವ ಅನ್ನೋದು ಸಂಕ್ರಾಂತಿಯ ನಂತರ ತಿಳಿಯಲಿದೆ ಎಂದು ಸಿಪಿವೈ ಹೇಳಿದ್ದಾರೆ. ಇದೇ ವೇಳೆ, ಮೈಸೂರಿನಲ್ಲಿ ಮಾತನಾಡಿರುವ ಸುಮಲತಾ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ನೀಡಿದ್ದರ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಆಫರ್ಗಳಿವೆ ಎಂದೂ ಹೇಳಿದ್ದರು.

ಆಡಿಯೊ ನನ್ನದಲ್ಲವೆಂದ ಯೋಗೇಶ್ವರ್
ಆಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದಂತೆ, ಮುಜುಗರಕ್ಕೆ ಒಳಗಾಗಿರುವ ಸಿ ಪಿ ಯೋಗೇಶ್ವರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೊ ನನ್ನದಲ್ಲ. ಅದು ಫೇಕ್ ಆಡಿಯೊ ಎಂದು ಸಮಜಾಯಿಸಿ ನೀಡಿದ್ದಾರೆ.












Click it and Unblock the Notifications