ಕುಡಿಯುವ ನೀರಿಗೆ ಹಸಿರು ಸೆಸ್: ಏನಿದು ಸರ್ಕಾರದ ಹೊಸ ಹೆಜ್ಜೆ
ಬೆಂಗಳೂರು, ನವೆಂಬರ್ 14: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ 'ಸೆಸ್' ಹೆಸರಿನಲ್ಲಿ ಕತ್ತರಿ ಹಾಕಲು ಮುಂದಾಗಿದೆ. ಅದರಲ್ಲೂ ಕುಡಿಯುವ ನೀರಿಗೆ ಸೆಸ್ ಹಾಕುವ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಸಚಿವರ ಟಿಪ್ಪಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜ್ಯದ ಪ್ರತಿಪಕ್ಷ ಬಿಜೆಪಿ ಇದನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದೆ.
ಈಶ್ವರ ಬಿ. ಖಂಡ್ರೆ ಸಚಿವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂಡಿಸಿರುವ ಟಿಪ್ಪಣಿ ಈಗ ವೈರಲ್ ಆಗಿದೆ. 7 ದಿನಗಳ ಒಳಗಾಗಿ ಕಡತದಲ್ಲಿ ಪ್ರಸ್ತಾವನೆ ಮಂಡಿಸಲು ಸಚಿವರು ಸೂಚನೆ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನೀರಿನ ಬಿಲ್ ಮೇಲೆ 3 ರೂ. ಸೆಸ್ ವಿಧಿಸಲಾಗುತ್ತದೆ.

ಸಚಿವರ ಟಿಪ್ಪಣಿ: ಸಚಿವ ಈಶ್ವರ ಖಂಡ್ರೆ ಅವರು ಟಿಪ್ಪಣಿಯಂತೆ ಪಶ್ಚಿಮಘಟ್ಟ ಜೀವವೈವಿಧ್ಯತೆಯ ತಾಣವಷ್ಟೇ ಅಲ್ಲದೆ, ಮಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗಲು ಸಹಕರಿಸುವ ಜೀವನಾಡಿಯಾಗಿವೆ. ಜೊತೆಗೆ ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವೂ ಆಗಿದೆ.
ಇಂದು ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ನದಿಗಳು ತುಂಬಿ ಹರಿಯಲು ಸಾಧ್ಯ.
ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ನದಿಗಳ ನೀರು ಪೂರೈಕೆ ಆಗುವ ನಗರ, ಪಟ್ಟಣಗಳ ಕುಡಿಯುವ ನೀರಿನ ಬಿಲ್ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿದರೂ ಪ್ರತಿ ತಿಂಗಳೂ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತದೆ.
ಈ ಹಣವನ್ನು ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಿ, ಅರಣ್ಯ ಸಂರಕ್ಷಿಸಲು ಮತ್ತು ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಬಳಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ 7 ದಿನಗಳ ಒಳಗಾಗಿ ಕಡತದಲ್ಲಿ ಪ್ರಸ್ತಾವನೆ ಮಂಡಿಸಲು ಈ ಮೂಲಕ ಸೂಚಿಸಿದೆ ಎಂದು ಸಚಿವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಬಿ. ವೈ. ವಿಜಯೇಂದ್ರ ಅಸಮಾಧಾನ: ಕುಡಿಯುವ ನೀರಿಗೆ ಸೆಸ್ ಹಾಕುವ ಪ್ರಸ್ತಾವನೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪಶ್ಚಿಮ ಘಟ್ಟ ಪ್ರದೇಶವನ್ನು ಸಂರಕ್ಷಿಸುವ ಹೆಸರಿನಲ್ಲಿ ಕುಡಿಯುವ ನೀರಿಗೆ ಹಸಿರು ಸೆಸ್ ವಿಧಿಸಿ ಜನರಿಂದ ಹಣ ವಸೂಲಿ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಖಂಡನೀಯ' ಎಂದು ವಿಜಯೇಂದ್ರ ಹೇಳಿದ್ದಾರೆ.
'ಕಾಂಗ್ರೆಸ್ ಸರ್ಕಾರ ಭವಿಷ್ಯದ ದಿನಗಳಲ್ಲಿ ಬರಿದಾಗಿರುವ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಶುದ್ಧ ಗಾಳಿಗೂ ತೆರಿಗೆ ವಿಧಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ, ಪಶ್ಚಿಮ ಘಟ್ಟ ಉಳಿಯಬೇಕು, ನದಿಗಳ ಸಂರಕ್ಷಣೆ ಆಗಬೇಕು ಎನ್ನುವುದು ವಿಶೇಷ ಆದ್ಯತೆಯಾಗಬೇಕು ಎನ್ನುವುದನ್ನು ಬೆಂಬಲಿಸುತ್ತೇವೆ, ಆದರೆ ಅದರ ಹೆಸರಿನಲ್ಲಿ ಜನರಿಂದ ವಸೂಲಿಗೆ ಇಳಿಯುವ ಜನ ವಿರೋಧಿ ಧೋರಣೆಯನ್ನು ಬಿಜೆಪಿ ಕರ್ನಾಟಕ ಖಂಡಿಸುತ್ತದೆ' ಎಂದು ಪೋಸ್ಟ್ ಹಾಕಿದ್ದಾರೆ.
ಈ ಕುರಿತು ಸಚಿವ ಈಶ್ವರ ಖಂಡ್ರೆ ಮಾತನಾಡಿ, "ಪಶ್ಚಿಮಘಟ್ಟ ಅರಣ್ಯ ಪ್ರದೇಶದ ನದಿಗಳ ನೀರು ಬಳಸುವ ಬಳಕೆದಾರರಿಂದ ಹಸಿರು ಸೆಸ್ ರೂಪದಲ್ಲಿ 2 ರಿಂದ 3 ರೂ. ಪಡೆಯುವ ಉದ್ದೇಶವಿದೆ. ಆ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮಘಟ್ಟದ ಮಹತ್ವದ ಅರಿವು ಮೂಡಿಸಬಹುದಾದ ಹಸಿರು ಸೆಸ್ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ಅರಣ್ಯ ಅಭಿವೃದ್ಧಿ ಸೇರಿ ಮತ್ತಿತರ ಕಾರ್ಯಗಳಿಗೆ ಬಳಸಲಾಗುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications