ಬಿಜೆಪಿ ಪರಿವರ್ತನಾ ಯಾತ್ರೆ : ಬೈಕ್ ಜಾಥಾ, ಮೂರು ಸಮಾವೇಶ
ಬೆಂಗಳೂರು, ಅಕ್ಟೋಬರ್ 24 : ಕರ್ನಾಟಕ ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ 'ಪರಿವರ್ತನಾ ಯಾತ್ರೆ' ಹಮ್ಮಿಕೊಂಡಿದೆ. ನವೆಂಬರ್ 2ರಂದು ಯಾತ್ರೆಗೆ ಚಾಲನೆ ಸಿಗಲಿದ್ದು, 75 ದಿನಗಳ ಕಾಲ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾತ್ರೆ ಸಂಚಾರ ನಡೆಸಲಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೋಮವಾರ ಯಾತ್ರೆಯ ಲಾಂಛನ ಬಿಡುಗಡೆ ಮಾಡಿದ್ದಾರೆ. ನವೆಂಬರ್ 2ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಯಾತ್ರೆ 7,500 ಕಿ.ಮೀ. ಸಾಗಲಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ಯಾತ್ರೆಯ ವೇಳೆ ಮೂರು ಸಮಾವೇಶ, ಎರಡು ಪ್ರತ್ಯೇಕ ಬೈಕ್ ಜಾಥಾವನ್ನು ಆಯೋಜನೆ ಮಾಡಲಾಗಿದೆ.
ಈ ಯಾತ್ರೆಯ ಮೂಲಕ ಬಿಜೆಪಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮನೆ-ಮನೆಗೆ ತಲುಪಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತವರು ಯಡಿಯೂರಪ್ಪ ಜೊತೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ....

ಬೆಂಗಳೂರಿನಲ್ಲಿ ಉದ್ಘಾಟನೆ
ನವೆಂಬರ್ 2ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು 'ಪರಿವರ್ತನಾ ಯಾತ್ರೆ'ಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. 114 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1 ಲಕ್ಷ ಬೈಕ್ಗಳಲ್ಲಿ ಇಬ್ಬರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಉದ್ಘಾಟನಾ ಸಮಾವೇಶಲ್ಲಿ 3 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ
ಡಿಸೆಂಬರ್ 21ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಉತ್ತರ ಕರ್ನಾಟಕ ಭಾಗದ 110 ವಿಧಾನಸಭಾ ಕ್ಷೇತ್ರಗಳಿಂದ 80 ಸಾವಿರ ಬೈಕ್ಗಳಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ. ಯಾತ್ರೆಯ ನಡುವೆಯೇ ಮೊದಲ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆಯಲಿದೆ.

ಜನವರಿ 25ಕ್ಕೆ ಮೈಸೂರಿನಲ್ಲಿ ಸಮಾವೇಶ
ಯಾತ್ರೆಯ ನಡುವೆಯೇ ಜನವರಿ 25ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಜನವರಿ 28ರಂದು ಬೆಂಗಳೂರಿನಲ್ಲಿ 'ಪರಿವರ್ತನಾ ಯಾತ್ರೆ'ಯ ಸಮಾರೋಪ ಸಮಾರಂಭ ನಡೆಯಲಿದೆ.

1 ಕೋಟಿ ವೆಚ್ಚದ ರಥ ನಿರ್ಮಾಣ
75 ದಿನದ ಯಾತ್ರೆಗಾಗಿ 1 ಕೋಟಿ ರೂ. ವೆಚ್ಚದಲ್ಲಿ ರಥ ನಿರ್ಮಾಣವಾಗುತ್ತಿದೆ. 9 ಜನರು ನಿಲ್ಲುವಂತೆ, 15 ಜನರು ಕುಳಿತುಕೊಳ್ಳುವಂತೆ ರಥವನ್ನು ವಿನ್ಯಾಸ ಮಾಡಲಾಗುತ್ತಿದೆ. ರಥ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಪಕ್ಷವೇ ಭರಿಸಲಿದೆ.

ರಥದ ವಿಶೇಷತೆಗಳೇನು?
ಲಾರಿಯ ಮೇಲು ಸ್ತರದಲ್ಲಿ ರಥ ನಿರ್ಮಾಣವಾಗಲಿದೆ. ಕೆಳಸ್ತರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ, ಶೌಚಾಲಯ, ಲಘು ಉಪಹಾರ ಕೇಂದ್ರ, ಕಾಫಿ, ಟೀ ಪೂರೈಕೆ ಮಾಡುವ ವ್ಯವಸ್ಥೆ ಇರಲಿದೆ.












Click it and Unblock the Notifications