ಪರಿಷತ್ ಚುನಾವಣೆ, ಮೂರು ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು
ಬೆಂಗಳೂರು, ನವೆಂಬರ್ 13 : ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿಯಲ್ಲಿ ಕಸರತ್ತು ನಡೆಯುತ್ತಿದೆ. 6 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಕ್ಷೇತ್ರಗಳ ಅಭ್ಯರ್ಥಿ ಅಂತಿಮಗೊಳಿಸುವುದು ಕಗ್ಗಂಟಾಗಿದೆ.
ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಸದಸ್ಯತ್ವದ ಅವಧಿ ಮುಗಿಯಲಿರುವ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆರು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಬಿಜೆಪಿ ಸರಣಿ ಸಭೆಗಳನ್ನು ನಡೆಸುತ್ತಿದೆ.

ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿಯೂ ಈ ವಿಚಾರದ ಚರ್ಚೆ ನಡೆದಿದೆ. ಆದರೆ, ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.
ಆದ್ದರಿಂದ, ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಪಟ್ಟಿ ಅಂತಿಮಗೊಳಿಸುವ ಜವಾಬ್ದಾರಿ ನೀಡಿದ್ದಾರೆ. ಯಡಿಯೂರಪ್ಪ ಅವರು ಒಂದು ಕ್ಷೇತ್ರಕ್ಕೆ ಎರಡು ಮೂರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ರವಾನೆ ಮಾಡಿದ್ದಾರೆ.
ಯಾವ ಕ್ಷೇತ್ರಗಳಿಗೆ ಚುನಾವಣೆ? : ಬೆಂಗಳೂರು ಪದವೀಧರ ಕ್ಷೇತ್ರ - ರಾಮಚಂದ್ರಗೌಡ (ಬಿಜೆಪಿ), ಆಗ್ನೇಯ ಶಿಕ್ಷಕರ ಕ್ಷೇತ್ರ - ರಮೇಶ ಬಾಬು (ಜೆಡಿಎಸ್), ದಕ್ಷಿಣ ಪದವೀಧರ ಕ್ಷೇತ್ರ - ಮರಿತಿಬ್ಬೇಗೌಡ (ಜೆಡಿಎಸ್), ನೈಋತ್ಯ ಪದವೀಧರ ಕ್ಷೇತ್ರ - ಡಿ.ಎಚ್.ಶಂಕರಮೂರ್ತಿ (ಬಿಜೆಪಿ), ನೈಋತ್ಯ ಶಿಕ್ಷಕರ ಕ್ಷೇತ್ರ - ಗಣೇಶ ಕಾರ್ಣಿಕ್ (ಬಿಜೆಪಿ), ಈಶಾನ್ಯ ಪದವೀಧರ ಕ್ಷೇತ್ರ - ಅಮರನಾಥ ಪಾಟೀಲ (ಬಿಜೆಪಿ) ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಕಗ್ಗಂಟಾಗಿರುವ ಕ್ಷೇತ್ರಗಳು : ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ರಾಮಚಂದ್ರಗೌಡ ಅವರು ಸ್ಪರ್ಧಿಸುತ್ತಿಲ್ಲ. ಇವರ ಬದಲಿಗೆ ಪಕ್ಷದ ಸಹ ವಕ್ತಾರ ಆನಂದ್, ಸರ್ಕಾರಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಜೈಶಂಕರ್ ಹೆಸರಿತ್ತು. ಈಗ ಅ.ದೇವೇಗೌಡ ಅವರ ಹೆಸರು ಸೇರಿಕೊಂಡಿದ್ದರು ಆಯ್ಕೆ ಕಗ್ಗಂಟಾಗಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋತಿದ್ದ ಬಸವರಾಜು ಜೊತೆ ಬಿಸ್ಸೇಗೌಡ ಹಾಗೂ ಶಿವಕುಮಾರ್ ಹೆಸರಿದೆ. ಆದ್ದರಿಂದ, ಆಯ್ಕೆ ಕಷ್ಟವಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಎಸ್.ಎಂ. ಗುರುನಂಜಯ್ಯ, ನಿರಂಜನ ಅವರ ಹೆಸರು ಕೇಳಿಬರುತ್ತಿದೆ. ಆದ್ದರಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗಿದೆ.












Click it and Unblock the Notifications