ಕೆಲವರನ್ನ ಹೊರಗೆ ಕಳಿಸೋ ಕೆಲಸ ನಡೀತಿದೆ: ವಿಜಯೇಂದ್ರ ಹೇಳಿದ್ದು ಯಾರ ಬಗ್ಗೆ?
ಒಂದೆಡೆ ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಫಿಕ್ಸ್ ಆಗಿದೆ. ಈ ಹೊತ್ತಿನಲ್ಲೇ ಬಿಜೆಪಿಯಲ್ಲಿ ಬಿರುಕು ಮೂಡಿದಂತಿದೆ. ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳಿವೆ ಎಂಬ ಮಾತು ಕೂಡ ಇದ್ದು, ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಮಾತನಾಡಿದ್ದಾರೆ.
ಯಾರೆಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಾರೋ ಅವರನ್ನೆಲ್ಲ ಹೊರಗೆ ಹಾಕುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಪಕ್ಷ ಶುದ್ಧೀಕರಣ ಆಗಬೇಕು ಎಂಬುದು ಹಲವರ ಆಸೆ. ಅದರಂತೆ ಪಕ್ಷದಲ್ಲಿ ಶುದ್ಧೀಕರಣ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಹತೋಟಿಗೆ ಬರಲಿದೆ ಎಂದೂ ವಿಜಯೇಂದ್ರ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಬಿಜೆಪಿಯಲ್ಲಿ ತಂಡ ಕಟ್ಟುತ್ತಿದ್ದಾರೆ ಎಂಬ ವಿಚಾರವಾಗಿಯೂ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಆ ನಾಯಕ ಅಸಮಾಧಾನಕ್ಕೆ ಬೇರೆಯೇ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ಆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಸದ್ಯಕ್ಕೆ ನಾನು ಅವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಉಪಚುನಾವಣೆ ಇದೆ. ನನಗೆ ಪಕ್ಷ ಸಂಘಟನೆಯ ಕೆಲಸ ಇದೆ. ಮತ್ತೊಂದೆಡೆ ವಕ್ಫ್ ಜಟಾಪಟಿ ಬಗ್ಗೆಯೂ ಪಕ್ಷ ಹೋರಾಟ ಶುರುಮಾಡಬೇಕಾಗಿದೆ. ನಾವು ಈ ವಿಚಾರಗಳನ್ನಷ್ಟೇ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ ಎಂದು ಬಿಜೆಪಿ ಇತರೆ ನಾಯಕರಿಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಇನ್ನು ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವುದು ಬಿಜೆಪಿಯ ಹಿರಿಯ ನಾಯಕರಿಗೆ ಇಷ್ಟವಿಲ್ಲ ಎನ್ನಲಾಗಿದೆ. ಮುಖ್ಯವಾಗಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಬಹಿರಂಗವಾಗಿಯೇ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದರು. ಈ ಸಭೆಯಲ್ಲಿ ಪ್ರತಾಪ್ ಸಿಂಹ ಕೂಡ ಭಾಗಿಯಾಗಿ ಗಮನ ಸೆಳೆದಿದ್ದರು. ಈ ವೇಳೆ ಹೊಂದಾಣಿಕೆ ರಾಜಕಾರಣದ ಬಗ್ಗೆಯೂ ಅವರು ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ವಿಜಯೇಂದ್ರ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಪ್ರಚಾರದಿಂದಲೂ ಹೊರಗಿಟ್ಟಿತಾ ಬಿಜೆಪಿ?
ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆ ಬಿಜೆಪಿ ನಲವತ್ತು ಮಂದಿಯ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.ಇನ್ನು ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇನ್ನೂ ಹಲವು ಬಿಜೆಪಿ ನಾಯಕರ ಹೆಸರು ಕೈತಪ್ಪಿರುವುದು ಗಮನ ಸೆಳೆದಿದೆ.
ಮುಖ್ಯವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಸಂಸದ ಜಿ.ಎಂ.ಸಿದ್ದೇಶ್ವರ ಅವರ ಹೆಸರು ಸ್ಟಾರ್ ಪ್ರಚಾರ ಪಟ್ಟಿಯಿಂದ ಹೊರಗಿಟ್ಟಿದೆ.
ಯತ್ನಾಳ್ ಇತ್ತೀಚೆಗೆ ಬಿಜೆಪಿಯಲ್ಲಿ ಒಂದು ರೀತಿ ಬಂಡಾಯ ಎದ್ದಿದ್ದಾರೆ ಎನ್ನುವ ಮಾತಿದೆ. ಅಲ್ಲದೆ, ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ರಾಜ್ಯ ಬಿಜೆಪಿಯನ್ನು ನಡುಗಿಸಿದ್ದರು. ಈ ಸಭೆಗಳಲ್ಲಿ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಗುಂಪುಗೂಡಿದ್ದರು. ಈ ಕಾರಣಕ್ಕೆ ಅವರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಬೈಎಲೆಕ್ಷನ್ ಚುನಾವಣಾ ಪ್ರಚಾರಕ್ಕೆ ಅವರನ್ನು ದೂರವಿಟ್ಟಿದೆಯಾ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.












Click it and Unblock the Notifications