'ಮೈಸೂರು ಚಲೋ' ಬೃಹತ್ ಪಾದಯಾತ್ರೆಯ ಉದ್ದೇಶ ವಿವರಿಸಿದ ಬಿ.ವೈ ವಿಜಯೇಂದ್ರ
ಬೆಂಗಳೂರು, ಆಗಸ್ಟ್ 03: ಮೈಸೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮೂಲಕ ಹೋರಾಟವನ್ನು ತೀವ್ರಗೊಳಿಸಿದೆ.
ನಮ್ಮದು ಕೇಂದ್ರಿಕೃತ ಹೋರಾಟವಲ್ಲ. ಕಾಂಗ್ರೆಸ್ ಭ್ರಷ್ಟ ಹಾಗೂ ಸ್ವಜನ ಪಕ್ಷಪಾತ ವಿರುದ್ಧದ ಜನಪರ ಹೋರಾಟ ಎಂದು ಬಿಜೆಪಿ ಮತ್ತು ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಆರಂಭಿಸಿದೆ. ಈ ಪಾದಯಾತ್ರೆಯ ಉದ್ದೇಶದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿವರಿಸಿದ್ದಾರೆ.

ಮೈಸೂರು ಚಲೋ ಪಾದಯಾತ್ರೆಯ ಉದ್ದೇಶ ಈ ಕೆಳಗಿನಂತಿದೆ
• ಪರಿಶಿಷ್ಟರ ಕಲ್ಯಾಣ ಕಾರ್ಯಗಳು ಯಾವುದೇ ಸರ್ಕಾರದ ಆದ್ಯತೆಯಾಗಬೇಕು. ಸ್ವಾತಂತ್ರ್ಯಾ ನಂತರದಿಂದಲೂ ಪರಿಶಿಷ್ಟರು, ಹಿಂದುಳಿದವರು ಅಲ್ಪಸಂಖ್ಯಾತರ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈ ವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಬಂದಿರುವುದು ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಕ್ಕೆ ಬಗೆಯುತ್ತಿರುವ ದ್ರೋಹವಾಗಿದೆ.
• ಸದ್ಯ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಾಗಿದ್ದ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದೆ. ಕರ್ನಾಟಕದ ಇತಿಹಾಸದಲ್ಲಿ ಇಂಥಾ ಘೋರ ವಂಚನೆ ನಡೆದ ದಾಖಲೆಗಳೇ ಇಲ್ಲ. ಇದರ ವಿರುದ್ಧ ಪ್ರತಿಭಟಿಸಿ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪಾದಯಾತ್ರೆಯ ಪರಮ ಉದ್ದೇಶವಾಗಿದೆ.
• ಸೂರಿಲ್ಲದವರಿಗೆ ಸೂರು ಒದಗಿಸಬೇಕು ಎಂಬ ಸಾಮಾಜಿಕ ಕಾಳಜಿ ಆಳುವ ಸರ್ಕಾರದ ಆದ್ಯತೆ ಆಗಬೇಕು. ವಸತಿ ರಹಿತ ಕುಟುಂಬಗಳಿಗೆ ನಿವೇಶನ ಹಾಗೂ ಮನೆಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬೆಂಗಳೂರು ಹಾಗೂ ಮೈಸೂರು ಎರಡೂ ನಗರಗಳ ಯೋಜಿತ ಬೆಳವಣಿಗೆಗೆ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು ಅಸ್ತಿತ್ವಕ್ಕೆ ತಂದವರು ಮೈಸೂರು ಸಂಸ್ಥಾನವನ್ನು ಆಳಿದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಆದರೆ ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಡೀ ರಾಜ್ಯದ ವಸತಿ ರಹಿತ ಕುಟುಂಬಗಳಿಗೆ ʼಸೂರುʼ ಒದಗಿಸುವ ಯಾವುದೇ ಒಂದು ಯೋಜನೆಯನ್ನು ಈವರೆವಿಗೂ ಕೈಗೆತ್ತಿಕೊಳ್ಳಲಿಲ್ಲ.
• ಸಿದ್ಧರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಲಭಿಸಿದ ಅವಕಾಶಗಳನ್ನು ಬಳಸಿಕೊಂಡು ಕನಿಷ್ಠ ಮೈಸೂರು ಜಿಲ್ಲೆಯ ಜನರಿಗಾದರೂ ನಗರಾಭಿವೃದ್ಧಿ ಪ್ರಾಧಿಕಾರದಿಂದ (ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ) ಒಂದೇ ಒಂದು ವಸತಿ ಯೋಜನೆ ರೂಪಿಸಲಿಲ್ಲ.
• ಮೈಸೂರು ಮುಡಾದಲ್ಲಿ ಹತ್ತಾರು ವರ್ಷಗಳಿಂದ ಲಕ್ಷಾಂತರ ಜನ ನಿವೇಶನ ಹಾಗೂ ಮನೆಗಳಿಗಾಗಿ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಈ ಜನರಿಗೆ ಲಭಿಸಬೇಕಾದ ಅತ್ಯಮೂಲ್ಯ ಕೋಟ್ಯಂತರ ಬೆಲೆಬಾಳುವ 5000 ನಿವೇಶನಗಳು ಈ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನೀತಿ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿಗಳು ಹಾಗೂ ಹಣಬಲದ ರಿಯಲ್ ಎಸ್ಟೇಟ್ ಮಾಫಿಯಾಗಳ ಪಾಲಿಗೆ ಅಕ್ರಮವಾಗಿ ಕೊಡ ಮಾಡಲಾಗಿದೆ. 'ನಗರಾಭಿವೃದ್ಧಿ ಪ್ರಾಧಿಕಾರ ಗಬ್ಬೆದ್ದು ಹೋಗಿದೆʼ ಎಂದು ಸ್ವತಃ ಮುಖ್ಯಮಂತ್ರಿಗಳೇ ಕಳೆದ ಕೆಲವು ದಿನಗಳ ಹಿಂದೆ ಉದ್ಗರಿಸಿದ್ದಾರೆ.

• ಆಶ್ಚರ್ಯವೆಂದರೆ ಈ 5,000 ಅಕ್ರಮ ನಿವೇಶನಗಳ ಪಾಲುದಾರರ ಮುಂಚೂಣಿಯಲ್ಲಿರುವುದು ಸ್ವತಃ ಮುಖ್ಯಮಂತ್ರಿಗಳ ಕುಟುಂಬ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ತಮ್ಮ ಧರ್ಮಪತ್ನಿ ಶ್ರೀಮತಿ ಪಾರ್ವತಿ ಅವರ ಹೆಸರಿನ ಭೂ ಮಾಲಿಕತ್ವದ (ಕೆಸರೆ ಸರ್ವೆ ನಂ. 464 ರ 3.16 ಎಕರೆ) ಅಸಲಿತನದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಬಡ ದಲಿತ ಕುಟುಂಬವೊಂದಕ್ಕೆ ಸೇರಬೇಕಾದ ಪರಿಹಾರ ಮುಖ್ಯಮಂತ್ರಿಗಳ ಕುಟುಂಬ ಕಬಳಿಸಿಕೊಂಡಿದೆ ಎಂಬ ಆರೋಪವಿದೆ.
• ವಿವಾದಾಸ್ಪದ ಜಮೀನನ್ನು ಆಧಾರವಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ 14 ನಿವೇಶನಗಳು ಅವರ ಪತ್ನಿಯವರಿಗೆ ಮಂಜೂರಾಗಿರುವುದು ಇಡೀ ದೇಶದಲ್ಲಿ ಚರ್ಚಿತ ವಿಷಯವಾಗಿದೆ. ಇದರಿಂದ 5,000 ನಿವೇಶನಗಳ ಭ್ರಷ್ಟ ವ್ಯವಹಾರ ಹೊರಗೆ ಬಾರದಂತೆ ಮುಖ್ಯಮಂತ್ರಿಗಳೇ ರಕ್ಷಣೆಯಾಗಿ ನಿಂತಿರುವುದು ಸ್ಪಷ್ಟವಾಗಿದೆ.
• ಈ ಹಿನ್ನೆಲೆಯಲ್ಲಿ ಈ ಭ್ರಷ್ಟ ಹಾಗೂ ಸ್ವಜನ ಪಕ್ಷಪಾತದ ಹಗರಣವನ್ನು ಬಯಲಿಗೆಳೆಯಲು ವಿಧಾನ ಸಭೆಯ ಉಭಯ ಸದನಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ನಡೆಸಿದ ಹೋರಾಟವನ್ನು ಸರ್ಕಾರ ಹತ್ತಿಕ್ಕಿ ಪ್ರಜಾಪ್ರಭುತ್ವದ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹೂರಣವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಜಾನಾಂದೋಲನ ರೂಪಿಸುವ 'ಮೈಸೂರು ಚಲೋ' ಬೃಹತ್ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
• ನಮ್ಮ 'ಮೈಸೂರು ಚಲೋ' ಹೋರಾಟ ವ್ಯಕ್ತಿ ಕೇಂದ್ರಿತ ಹೋರಾಟವಲ್ಲ ಜನರ ದನಿಯಾಗಿ ನಿಂತು, ಜನರ ಸಂಪತ್ತು ಹಾಗೂ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಪ್ರಾಮಾಣಿಕ ಕಾಳಜಿಯ ಹೋರಾಟವಾಗಿದೆ. ಆ ಮೂಲಕ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜನಾಕ್ರೋಶವನ್ನು ಪ್ರತಿನಿಧಿಸಲು ಹಮ್ಮಿಕೊಂಡಿರುವ ಈ ಬೃಹತ್ ಪಾದಯಾತ್ರೆಗೆ ಎಲ್ಲರ ಸಹಕಾರ ಬೆಂಬಲವನ್ನು ಕೋರುತ್ತಿದ್ದೇವೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಲು ವಿನಂತಿಸುತ್ತೇನೆ.
• ಪಾದಯಾತ್ರೆಯ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೂ ಬಿಜೆಪಿ ಹಾಗೂ ಜೆಡಿಎಸ್ ನ ಪ್ರಮುಖರು ಹಾಗೂ ಕಾರ್ಯಕರ್ತರು ಜೊತೆಗೂಡಿ ವಿಶ್ವಾಸಪೂರ್ಣ ಹೆಜ್ಜೆಯನ್ನಿಟ್ಟು ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಸಂಕಲ್ಪ ಮಾಡೋಣ. ನಿವೇಶನ ವಂಚಿತ ಸೂರು ರಹಿತರಿಗಾಗಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಾದ ಹಣದ ರಕ್ಷಣೆಗಾಗಿ, ಭ್ರಷ್ಟ ಅಧಿಕಾರಸ್ಥರಿಗೆ ಶಿಕ್ಷೆ ಕೊಡಿಸುವುದಕ್ಕಾಗಿ, ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಾಗಿ, ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications