ನರೇಂದ್ರ ಮೋದಿ ಹುಬ್ಬಳ್ಳಿ ಸಮಾವೇಶಕ್ಕೆ ಅಪಸ್ವರದ ಕೂಗು
ಹುಬ್ಬಳ್ಳಿ, ಫೆ 28: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶುಕ್ರವಾರ (ಫೆ 28) ರಾಜ್ಯದ ಹುಬ್ಬಳ್ಳಿ ಮತ್ತು ಗುಲ್ಬರ್ಗ ನಗರಗಳಲ್ಲಿ 'ಭಾರತ ಗೆಲ್ಲಿಸಿ' ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದರಂತೆ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿನ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಈಗ ಅಪಸ್ವರದ ಕೂಗು ಎದ್ದಿದೆ.
ನರೇಂದ್ರ ಮೋದಿಯವರ ಹುಬ್ಬಳ್ಳಿ ಮತ್ತು ಗುಲ್ಬರ್ಗ ಸಾರ್ವಜನಿಕ ಸಭೆಯ ನೇರ ಪ್ರಸಾರವನ್ನು 13 LED ಪರದೆಗಳ ಮೇಲೆ ತೋರಿಸಲು ಬಿಜೆಪಿಯ ಹುಬ್ಬಳ್ಳಿ ಮತ್ತು ಗುಲ್ಬರ್ಗ ಘಟಕ ಆಯೋಜಿಸಿದೆ. ಹನ್ನೆರಡು ಪರದೆಗಳಲ್ಲಿ ಒಂದನ್ನು ಸಿದ್ದಾರೂಢರ ಮಠದ ಆವರಣದಲ್ಲಿ ಇರಿಸಲಾಗಿದೆ. (ಮೋದಿ ಮಂಗಳೂರು ಭಾಷಣ)
ಇದಕ್ಕೆ ಸಿದ್ದಾರೂಢಸ್ವಾಮಿ ಮಠದ ಟ್ರಸ್ಟ್ ಆಕ್ಷೇಪ ವ್ಯಕ್ತ ಪಡಿಸಿದೆ. ಮಠವು ಯಾವುದೇ ಪಕ್ಷ, ಜಾತಿಯ ಜೊತೆ ಗುರುತಿಸಿ ಕೊಂಡಿಲ್ಲ. ಈಗ ಮೋದಿ ಭಾಷಣದ ನೇರ ಪ್ರಸಾರದ ಪರದೆಗೆ ಮಠದ ಆವರಣದಲ್ಲಿ ಅವಕಾಶ ನೀಡಿದರೆ ಮಠದ ಭಕ್ತಾದಿಗಳಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ.
ಇದಲ್ಲದೇ, ಶುಕ್ರವಾರ (ಫೆ 28) ಮಹಾಶಿವರಾತ್ರಿಯ ಅಂಗವಾಗಿ ಮಹಾರಥೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಸೇರಲಿದ್ದಾರೆ. ಭದ್ರತೆಯ ದೃಷ್ಠಿಯಿಂದಲೂ ಮೋದಿ ಭಾಷಣದ ನೇರ ಪ್ರಸಾರಕ್ಕೆ ಇಲ್ಲಿ ಅವಕಾಶ ನೀಡಬಾರದೆಂದು ಸಿದ್ದಾರೂಢ ಮಠದ ಟ್ರಸ್ಟ್ ಪೊಲೀಸ್ ಮೆಟ್ಟಲೇರಿದೆ. (ಮೋದಿ ದಾವಣಗೆರೆ ಭಾಷಣದ ಹೈಲೈಟ್ಸ್)
ಟ್ರಸ್ಟ್ ಮನವಿ
ಜಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿ ಮಠದ ಆವರಣದಲ್ಲಿ LED ಪರದೆಗಳ ಮೂಲಕ ನೇರ ಪ್ರಸಾರ ನಡೆದರೆ ಜನ ಒಂದೇ ಕಡೆ ಜಮಾಯಿಸುವ ಸಾಧ್ಯತೆ ಹೆಚ್ಚು. ಕಾನೂನು ಮತ್ತು ಸುವ್ಯವಸ್ಥೆಯ ಆಧಾರದ ಮೇಲೆ ಮಠದ ಆವರಣದಲ್ಲಿ ಪರದೆಗೆ ಅವಕಾಶ ನೀಡಬಾರದೆಂದು ಮಠದ ಟ್ರಸ್ಟ್ ಅಧ್ಯಕ್ಷರು ಪೊಲೀಸರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಪೊಲೀಸರು ಹೇಳುವುದೇನು?
ಸಿದ್ದಾರೂಢ ಮಠದ ಆವರಣದಲ್ಲಿ ಪರದೆ ಮೂಲಕ ನೇರ ಪ್ರಸಾರ ಮಾಡುವುದಕ್ಕೆ ಜಿಲ್ಲಾ ಪೊಲೀಸ್ ಅನುಮತಿ ನೀಡಿಲ್ಲ. ಮಠದ ಟ್ರಸ್ಟಿಗಳು ನಮಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ಪೊಲೀಸ್ ಆಯುಕ್ತರ ಹೇಳಿಕೆ
ಮಠದ ಆವರಣದಲ್ಲಿ ಪರದೆಯ ಮೂಲಕ ಪ್ರಸಾರ ಮಾಡಲು ಸಿದ್ದರೂಢ ಮಠದ ಅನುಮತಿ ಅಗತ್ಯ. ಇನ್ನು ಇತರಡೆ ಇಡಲಾಗುವ ನೇರ ಪ್ರಸಾರದ ಪರದೆಗೆ ನಾವು ಅನುಮತಿ ನಿರಾಕರಿಸಿಲ್ಲ. ಕಾನೂನು ಮತ್ತು ಸುವ್ಯವಸ್ಥೆಗೆ ಯಾವದು ಸೂಕ್ತವೋ ಆ ಕ್ರಮವನ್ನು ಇಲಾಖೆ ತೆಗೆದು ಕೊಳ್ಳಲಿದೆ.
ಜಿಲ್ಲಾ ಬಿಜೆಪಿ ಘಟಕ ಸ್ಪಷ್ಟನೆ
ಒಟ್ಟು 13 LED ಪರದೆಗಳ ಮೂಲಕ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಹನ್ನೆರಡು ಪರದೆಗಳನ್ನು ಮೈದಾನದ ಸುತ್ತಮುತ್ತ ಇಡಲಾಗುವುದು. ಇನ್ನು ಒಂದನ್ನು ಸಿದ್ದಾರೂಢ ಮಠದ ಪ್ರದೇಶದಲ್ಲಿ ಇಟ್ಟು ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಠದ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಹೇಳಿದ್ದಾರೆ.
ಸಿದ್ದಾರೂಢ ಜಾತ್ರೆ
ಅದ್ವೈತ ಸಿದ್ದಾಂತವನ್ನು ಪಾಲಿಸಿ ಕೊಂಡು ಬರುತ್ತಿರುವ ಸಿದ್ದಾರೂಢ ಮಠದಲ್ಲಿ ಶುಕ್ರವಾರ ರಥೋತ್ಸವದ ಸಂಭ್ರಮ. ಮಹಾಶಿವರಾತ್ರಿಯ ಅಂಗವಾಗಿ 112ನೇ ಮಹಾರಥೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.