ಲಿಂಗಾಯತರ ಕಡೆಗಣನೆ ವಿಚಾರ: ಬಿಜೆಪಿ ಎಂಬ ಗುಡಿಗೆ ಎಲ್ಲರಿಗೂ ಪ್ರವೇಶವಿದೆ: ಬೊಮ್ಮಾಯಿ ಹೀಗೆ ಹೇಳಿದ್ದೇಕೆ?
ಬೆಂಗಳೂರು, ಜೂನ್ 16: ಭಾರತೀಯ ಜನತಾ ಪಾರ್ಟಿ (BJP) ಲಿಂಗಾಯತ ಸಮುದಾಯವನ್ನು ಯಾವಾಗಲೂ ಗೌರವದಿಂದಲೇ ನೋಡಿಕೊಂಡು ಬಂದಿದೆ. ಬಿಜೆಪಿ ಎನ್ನುವ ಒಂದೇ ಗುಡಿ ಇದ್ದು ಎಲ್ಲರಿಗೂ ಪ್ರವೇಶವಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಲವು ವಿಚಾರಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿದ ಬಳಿಕ ಒಂದಷ್ಟು ಬೆಳವಣಿಗೆಗಳು ನಡೆದವು. ಬಿಜೆಪಿ ಪಕ್ಷ ಲಿಂಗಾಯತರನ್ನು ಕಡೆಗಣಿಸುತ್ತಿದೆ ಎಂಬ ಕಾಂಗ್ರೆಸ್ ಹೇಳಿಕೆಗಳು ನಿಜವೇನೋ ಎಂಬಂತಹ ವಾತಾವರಣ ಚುನಾವಣೆಗೂ ಮುನ್ನ ನಿರ್ಮಾಣವಾಗಿತ್ತು. ಇದರ ಪ್ರತಿಫಲವಾಗಿಯೇ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿತು ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ.

ಇದಷ್ಟೇ ಅಲ್ಲದೇ ಹೊಂದಾಣಿಕೆ ರಾಜಕೀಯ ಬಗ್ಗೆ ಸ್ವತಃ ಬಿಜೆಪಿ ನಾಯಕರೇ ತುಟಿ ಬಿಚ್ಚಿದ್ದಾರೆ. ಬಿಜೆಪಿ ಹೈಕಮಾಂಡ್ ಕೆಲವು ನಾಯಕರಿಂದ ಲಿಂಗಾಯತರ ಕಡೆಗಣೆಯ ನಿರ್ಧಾರಗಳು ಮುನ್ನೆಲೆ ಬಂದಿವೆ.
ಕಾಂಗ್ರೆಸ್ ಪಕ್ಷ ಕಳೆದ ಮೂವತೈದು ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ಜಗತ್ತಿಗೆ ಗೊತ್ತು.
— Basavaraj S Bommai (@BSBommai) June 16, 2023
ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಲಿಂಗಾಯತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ. ನಮ್ಮ ಪಕ್ಷದ ವಿಚಾರದಲ್ಲಿ ತಲೆ…
ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ: ಬೊಮ್ಮಾಯಿ
ಇದೆಲ್ಲ ಅಂಶಗಳಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಟ್ವೀಟ್ ಮಾಡಿ ಉತ್ತರಿಸುವ ಜೊತೆಗೆ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್ ನಲ್ಲಿ ಅವರು, ರಾಜ್ಯದಲ್ಲಿ ಕಡಿಮೆ ಅವಧಿ ಅಧಿಕಾರ ನಡೆಸಿದರೂ ನನ್ನ ಸಮೇತವಾಗಿ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಲಿಂಗಾಯತರ ಮುಖ್ಯಮಂತ್ರಿ ಮಾಡುವ ಮೂಲಕವೇ ಪಕ್ಷದಲ್ಲಿ ಈ ಸಮುದಾಯ ಕಡೆಗಣಿಸಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಕಳೆದ ಮೂವತೈದು ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ಜಗತ್ತಿಗೆ ಗೊತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಲಿಂಗಾಯತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ಗೆ ತಿರುಗೇಟು ನಿಡಿದ್ದಾರೆ.
ಬಿಜೆಪಿ ಹೈಕಮಾಂಡ್ ನಡೆಗೆ ಬೇಸರ: ಪಕ್ಷದ ಮೇಲೆ ದುಷ್ಪರಿಣಾಮ
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಕ್ಕೂ ಮೊದಲೇ ಸಿಎಂ ಆಗಿದ್ದ ಲಿಂಗಾಯತ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತು. ಇದು ರಾಜ್ಯದ ಲಿಂಗಾಯತ ಸಮುದಾಯದ ಬೇಸರಕ್ಕೆ ಕಾರಣವಾಯಿತು ಎಂಬ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹುದಿನಗಳಿಂದ ಚರ್ಚೆಯಾಗುತ್ತಿವೆ.
ಇದರ ಬೆನ್ನಲ್ಲೇ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಆಯ್ಕೆ ವಿಚಾರದಲ್ಲಿ/ಸಮಿತಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಲಾಯಿತು. ಕೇಂದ್ರದ ಬಿ.ಎಲ್.ಸಂತೋಷ್ ಸೇರಿ ಕೆಲವರೇ ಅದನ್ನು ನಿರ್ವಹಿಸಿದರು. ಇದರಿಂದಾಗಿ ಲಿಂಗಾಯತ ನಾಯಕರಾದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರು ಪಕ್ಷದಿಂದ ವಿಮುಖರಾದರು. ಇದು ಬಿಜೆಪಿ ವರ್ಚಸ್ಸಿಗೆ ಕುಂದು ತಂದಿತಾದರೂ, ಲಿಂಗಾಯತರ ವಿರುದ್ಧ ಬಿಜೆಪಿಯಲ್ಲಿ ಮತ್ತೇನೋ ನಡೆಯುತ್ತಿದೆ ಎಂಬ ಅಂಶ ಜಗಜ್ಜಾಹೀರಾಯಿತು.
ಇತ್ತ ಕಾಂಗ್ರೆಸ್ ಲಿಂಗಾಯತರ ಕಡೆಗಣನೆ ವಿಚಾರ ಇಟ್ಟುಕೊಂಡೇ ಬಿಜೆಪಿಯನ್ನು ಬಹಳ ಹಗುರವಾಗಿ ಜನರ ಮುಂದಿಡುವಲ್ಲಿ ಯಶಸ್ವಿ ಆಯಿತು ಎಂದು ಭಾಸವಾಗುತ್ತದೆ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾದರೆ, ಕಾಂಗ್ರೆಸ್ ಪ್ರಚಂಡ ಬಹುಮತ ಪಡೆದು ಗೆದ್ದು ಬೀಗಿತು.
ಇದೆಲ್ಲ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮಧ್ಯೆಯೇ ಬಿಜೆಪಿ ಮುಖಂಡರಾದ ವಿ.ಸುನೀಲ್ ಕುಮಾರ್, ಸಿಟಿ. ರವಿ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಕೆಲ ನಾಯಕರ ಮಧ್ಯೆ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂದು ನೇರ ವಾಗ್ದಾಳಿ ನಡೆಸಿದ್ದರು. ಇದೆಲ್ಲ ವಿಚಾರಗಳಿಗೆ ತೆರೆ ಎಳೆಯಲು ಬಸವರಾಜ ಬೊಮ್ಮಾಯಿ ಅವರು ಪ್ರಯತ್ನಿಸಿದ್ದಾರೆ.
ರಾಜ್ಯಾಧ್ಯಕ್ಷ-ವಿಪಕ್ಷ ಸ್ಥಾನದ ಕಗ್ಗಂಟು: ಲಿಂಗಾಯತ vs ಒಕ್ಕಲಿಗ?
ಇದು ಸಾಲದೆಂಬಂತೆ ಬಿಜೆಪಿ ವಿರೋಧ ಪಕ್ಷದ ನಾಯಕರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಬಣಗಳಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಎಸ್ ಯಡಿಯೂರಪ್ಪ ಬಣದಿಂದ ಮಾಜಿ ಸಿಎಂ ಬೊಮ್ಮಾಯಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮತ್ತು ಆರ್.ಅಶೋಕ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಇತ್ತ ಬಿಎಲ್ ಸಂತೋಷ್ ಬಣದಲ್ಲಿ ಮಾಜಿ ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ ಅವರು ರಾಜ್ಯಾಧ್ಯಕ್ಷರನ್ನಾಗಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕೆಂಬ ಒಲವು ವ್ಯಕ್ತವಾಗಿದೆ.
ವಿಶೇಷವೆಂದರೆ ಎರಡು ಬಣದಲ್ಲಿ ಒಬ್ಬರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಾಯಕರಿದ್ದಾರೆ. ಅಷ್ಟೇ ಅಲ್ಲದೇ ಎರಡು ಬಣದಲ್ಲಿ ಒಬ್ಬರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಾಯಕರು ಇದ್ದಾರೆ. ಇದೆಲ್ಲ ನೋಡಿದರೆ ಇವೆರಡು ಸ್ಥಾನಗಳ ಆಯ್ಕೆ ವಿಚಾರದಲ್ಲಿ ಲಿಂಗಾಯತ vs ಒಕ್ಕಲಿಗ ಏರ್ಪಡುತ್ತದೇನೋ? ಎಂದು ಭಾಸವಾಗುತ್ತದೆ.












Click it and Unblock the Notifications