ಸಿಪಿವೈ ಬಳಿಕ ಕಾಂಗ್ರೆಸ್ ಸೇರುವ ಸುಳಿವು ಕೊಟ್ಟ ಬಿಜೆಪಿ ಶಾಸಕ!
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿ ಭರ್ಜರಿ ಗೆಲುವು ಸಾಧಿಸಲು ಎಲ್ಲ ರೀತಿಯ ತಯಾರಿ ನಡೆಯುತ್ತಿವೆ. ಈ ಹೊತ್ತಿನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಈತ್ತೀಚೆಗೆ ಬಿಜೆಪಿಯಲ್ಲಿ ಸಿ.ಪಿ.ಯೋಗೇಶ್ವರ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾದರು. ಈಗ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಮತ್ತಷ್ಟು ಶಾಸಕರು ಕಾಂಗ್ರೆಸ್ನತ್ತ ಬರುವ ದೊಡ್ಡ ಸೂಚನೆ ಸಿಕ್ಕಿದೆ.

ಬಿಜೆಪಿಯಲ್ಲಿರುವ ಎಸ್.ಟಿ.ಸೋಮಶೇಖರ್ ಅವರು ಈ ಹಿಂದೆಯೇ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಶಾಸಕ ಕೂಡ ಇದೇ ಮಾತನ್ನು ಪ್ರತಿಪಾದಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಎಸ್.ಟಿ.ಸೋಮಶೇಖರ್ ಅವರ ಮಾತುಗಳು ಸತ್ಯವೇ ಇರಬಹುದು. ಸೋಮಶೇಖರ್ ಅವರ ಮಾತು ನೋಡಿದ್ರೆ ಇದು ಖಚಿತ ಮಾಹಿತಿ ಇರಬಹುದು ಅನಿಸುತ್ತೆ. ಅವರ ಮಾತಿನಲ್ಲಿ ಸತ್ಯ ಇದೆ ಎಂದು ಹೆಬ್ಬಾರ್ ಹೇಳಿದ್ದಾರೆ.

ಸೋಮಶೇಖರ್ ಅವರ ಬಳಿ ಇದೇ ವಿಚಾರದ ಬಗ್ಗೆ ಮಾತನಾಡಲು ಕರೆ ಮಾಡಿದ್ದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಸದ್ಯಕ್ಕೆ ನಾನು ಬಿಜೆಪಿಯಿಂದ ಒಂದು ಕಾಲನ್ನು ಹೊಗಿಟ್ಟಿದ್ದೇನೆ ಎಂದೇ ಬರೆದುಕೊಳ್ಳಿ. ಅಥವಾ ಎರಡೂ ಕಾಲು ಹೊರಗಿಟ್ಟೆ ಅಂತನೇ ಬರೆದುಕೊಳ್ಳಿ. ಅದು ನಿಮಗೆ ಬಿಟ್ಟಿದ್ದು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದು ರಾಜಕಾರಣ, ಹಾಗಾಗಿ ಈ ಕ್ಷೇತ್ರದಲ್ಲಿ ಯಾವ ನಿರ್ಣಯವನ್ನು ಯಾವಾಗ ತೆಗೆದುಕೊಳ್ಳಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್ ಸುಳಿವು ನೀಡಿದ್ದಾರೆ.
ಸೋಮಶೇಖರ್ ಹೇಳಿದ್ದೇನು?: ಬಿಜೆಪಿಯಿಂದ ಕಾಂಗ್ರೆಸ್ಗೆ ಎಂಟು ಜನ ಶಾಸಕರು ಹೋಗುತ್ತಾರೆ. ಮುಖ್ಯವಾಗಿ ಬೆಂಗಳೂರಿನ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಎಸ್.ಟಿ.ಸೋಮಶೇಖರ್ ಬಾಂಬ್ ಸಿಡಿಸಿದ್ದರು. ನನ್ನ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸಿದ್ರೂ ನನಗೆ ಭಯವಿಲ್ಲ. ಆರ್.ಅಶೋಕ್ ಅವರ ಮಾತಿಗೆ ಬೆಲೆ ಕೊಡಬಾರದು, ನೀವೇ ನೋಡ್ತಿರಿ..ಇನ್ನೂ ಎಂಟು ಮಂದಿ ಕಾಂಗ್ರೆಸ್ಗೆ ಹೋಗುತ್ತಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಬಹಿರಂಗವಾಗಿ ಹೇಳಿದ್ದರು.
ಇನ್ನು ಬೆಂಗಳೂರಿನ ಇಬ್ಬರು ಶಾಸಕರು ಪಕ್ಕಾ ಕಾಂಗ್ರೆಸ್ಗೆ ಹೋಗುತ್ತಾರೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಸೋಮಶೇಖರ್ ಅವರೂ ಬೆಂಗಳೂರಿನ ಕ್ಷೇತ್ರದಿಂದಲೇ ಶಾಸಕರಾಗಿದ್ದು, ಈ ಹಿಂದೆಯೂ ಅವರು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದರು. ಹಾಗಾಗಿ ಆ ಇಬ್ಬರಲ್ಲಿ ಸೋಮಶೇಖರ್ ಕೂಡ ಒಬ್ಬರು ಎನ್ನಲಾಗಿದೆ. ಬೆಂಗಳೂರಿನ ಮತ್ತೊಬ್ಬ ಶಾಸಕರು ಯಾರಿರಬಹುದು? ಎನ್ನುವ ಪ್ರಶ್ನೆಯೂ ಎದುರಾಗಿದೆ.












Click it and Unblock the Notifications