ಬಿಜೆಪಿ ತೊರೆಯುವ ಸುಳಿವು ಕೊಟ್ಟ ಶಾಸಕ ಎಸ್.ಟಿ.ಸೋಮಶೇಖರ್
ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿಜೆಪಿಯಿಂದ ಹೊರನಡೆಯಲು ಮುಂದಾಗಿದ್ದಾರಾ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಖುದ್ದು ಸೋಮಶೇಖರ್ ಅವರೇ ಮಾತನಾಡಿದ್ದಾರೆ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೂ ಸ್ವಾಗತಿಸುತ್ತೇನೆ ಎಂದು ಬಹಿರಂಗವಾಗಿ ಅವರು ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಉಚ್ಚಾಟನೆ ಮಾಡಬೇಕೆಂದು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಎಸ್.ಟಿ.ಸೋಮಶೇಖರ್ ಅವರು ಇದನ್ನು ಸಂತೋಷವಾಗಿ ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.

ನಾನು ಹಾಗೂ ಶಿವರಾಂ ಹೆಬ್ಬಾರ್ ಇಬ್ಬರೂ ಒಂದೊಂದು ಕ್ಷೇತ್ರದ ಶಾಸಕರು. ಇವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೊರಟಿದ್ದಾರೆ. ಇನ್ನು ಬಿಜೆಪಿ ಪಕ್ಷಕ್ಕೆ ಯಾರು ಡ್ಯಾಮೇಜ್ ಮಾಡುತ್ತಿದ್ದಾರೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಪಕ್ಷದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಯಾರು ಡ್ಯಾಮೇಜ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಡ್ಯಾಮೇಜ್ ಮಾಡಲು ನಾವ್ಯಾರು ಹೋಗಿಲ್ಲ. ಅವರು ಉಚ್ಚಾಟನೆ ಆದ್ರೂ ಮಾಡಲಿ, ನಾನು ಯಾವುದೇ ಆರೋಪಗಳನ್ನು ಮಾಡಲು ಹೋಗಲ್ಲ. ನನ್ನನ್ನು ಪಕ್ಷದಲ್ಲಿ ಉಳಿಸಿಕೊಂಡರೂ ಹೊರಗೆ ಕಳಿಸಿದರೂ ಎಲ್ಲವನ್ನೂ ಸ್ವಾಗತಿಸುತ್ತೇನೆ. ನಾನು ಯಾವತ್ತಾದ್ರೂ ವಿಜಯೇಂದ್ರ ವಿರುದ್ಧ ಒಂದೇ ಒಂದು ಮಾತು ಆಡಿದ್ದೀನಾ? ಎಂದು ಸೋಮಶೇಖರ್ ಕೇಳಿದ್ದಾರೆ.
ನಾನೊಬ್ಬ ಶಾಸಕ, ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕು. ಹಾಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುತ್ತೇನೆ ಎಂದು ಆರೋಪಗಳಿಗೆ ಕೌಂಟರ್ ನೀಡಿದ್ದಾರೆ. ಕ್ಷೇತ್ರಕ್ಕೆ ಅನುದಾನ ಬೇಕಿರುವುದರಿಂದ ಅವರ ಬಳಿಗೆ ಹೋಗಲೇಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನು ರಾತ್ರೋರಾತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸೋಮಶೇಖರ್ ಭೇಟಿಯಾಗುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾತ್ರಿವೇಳೆ ಭೇಟಿಯಾಗುವ ಅನೇಕರು ಮೊದಲಿನಿಂದಲೂ ಇದ್ದಾರೆ. ನಾನು ಬೆಳಿಗ್ಗೆ ಹೊತ್ತು ಹೋಗಿ ಭೇಟಿ ಮಾಡುತ್ತೇನೆ. ಆದರೆ, ತಡರಾತ್ರಿ ಭೇಟಿಯಾಗುವವರು ಸಾಕಷ್ಟು ಮಂದಿ ಇದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ಲೇಟ್ ನೈಟ್ ಭೇಟಿಯಾಗುವವರ ಬಗ್ಗೆ ಬಹಿರಂಗವಾಗಿ ಹೇಳಲು ಅವರಿಗೆ ಆಗಲ್ಲ. ಹಾಗಾಗಿ ನನ್ನ ಬಾಯಿಂದ ಅವರ ಹೆಸರುಗಳನ್ನು ತರಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಮೊದಲಿನಿಂದಲೂ ಹೇಳಿದ್ದೇನೆ. ನಾನು ಬೆಳಿಗ್ಗೆ ಹೋಗಿ ಭೇಟಿ ಮಾಡುತ್ತೇನೆ. ಇನ್ನುಳಿದ ಬಿಜೆಪಿಯವರು ರಾತ್ರಿ ಭೇಟಿಯಾಗುತ್ತಾರೆ. ಆದರೆ ಅವರ ಹೆಸರು ಹೇಳಲು ಅವರಿಗೆ ಧೈರ್ಯವಿಲ್ಲ. ನನ್ನ ಮುಖಾಂತರ ಅವರ ಹೆಸರುಗಳನ್ನು ಹೊರತರುವ ಪ್ರಯತ್ನವಿದು ಎಂದು ಸೋಮಶೇಖರ್ ದೂರಿದ್ದಾರೆ.
ಇನ್ನು ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆ ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದರು.












Click it and Unblock the Notifications