ಕಾಂಗ್ರೆಸ್ ದಲಿತ ನಾಯಕರಿಗೆ ಆರ್.ಅಶೋಕ್ ಗಂಭೀರ ಪ್ರಶ್ನೆ
ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ದಲಿತ ನಾಯಕರಿಗೆ ಗಂಭೀರ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಶೋಷಿತರೇ ಟಾರ್ಗೆಟ್ ಆಗಿದ್ದಾರೆ. ಆದರೂ ಕಾಂಗ್ರೆಸ್ನ ದಲಿತ ನಾಯಕರು ಮೌನಕ್ಕೆ ಶರಣಾಗಿರುವುದು ಏಕೆ? ಎಂದು ಅಶೋಕ್ ಕೇಳಿದ್ದಾರೆ. ದಲಿತ ವಿರೋಧಿ ಕಾಂಗ್ರೆಸ್ ವರಸೆ ಹೀಗಿದೆ. ದಲಿತರ ಮತ ಬೇಕು, ಆದರೆ ದಲಿತರ ಅಭಿವೃದ್ಧಿ ಬೇಡ ಎಂದು ಟೀಕಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದೆ. ಪರಿಶಿಷ್ಟ ಸಮುದಾಯಗಳ ಎಸ್ಸಿಎಸ್ಪಿ, ಟಿಎಸ್ಪಿ ಹಣ ದುರುಪಯೋಗವಾಗಿದೆ. ಪರಿಶಿಷ್ಟರ ನಿಗಮ ಮಂಡಳಿಗಳ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ದಲಿತ ವಿರೋಧಿ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಕುರ್ಚಿ, ದಲಿತರ ಜಮೀನು, ದಲಿತರ ಅನುದಾನ ಕಬಳಿಸಿ, ದಲಿತರಿಗೆ ಕೊಟ್ಟಿದ್ದು ಬಹುದೊಡ್ಡ ಚೊಂಬು ಎಂದು ವಾಗ್ದಾಳಿ ನಡೆಸಿದ್ದಾರೆ.

ದಲಿತ ಸಮುದಾಯದ ನಾಯಕರನ್ನು ತುಳಿಯುತ್ತಲೇ ಮೇಲೆ ಬಂದಿರುವ ಸಿಎಂ ಸಿದ್ದರಾಮಯ್ಯ ಅವರ ದಲಿತ ವಿರೋಧಿ ನೀತಿಗಳು ಅಲ್ಲಿಗೇ ನಿಂತಿಲ್ಲ. ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಎಸ್ಸಿಎಸ್ಪಿ, ಟಿಎಸ್ಪಿ ಹಣವನ್ನು ದುರುಪಯೋಗ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಈ ವರ್ಷದ ಬಜೆಟ್ನಲ್ಲೂ ದ್ರೋಹ ಮಾಡಲು ಹೊರಟಿದೆ ಎಂದು ದೂರಿದ್ದಾರೆ.
2023-24ರಲ್ಲಿ 11,144 ಕೋಟಿ ರೂಪಾಯಿ, 2024-25ರಲ್ಲಿ 14,282 ಕೋಟಿ ರೂಪಾಯಿ ಪರಿಶಿಷ್ಟರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಈ ಬಾರಿ 25,000 ಕೋಟಿ ರೂಪಾಯಿ ಎಸ್ಸಿಎಸ್ಪಿ, ಟಿಎಸ್ಪಿ ಹಣವನ್ನು ಗ್ಯಾರೆಂಟಿಗಳ ಹೆಸರಿನಲ್ಲಿ ಗುಳುಂ ಮಾಡುವ ಮೂಲಕ ಪರಿಶಿಷ್ಟ ಸಮುದಾಯಗಳಿಗೆ ಮತ್ತೂಮ್ಮೆ ದ್ರೋಹ ಬಗೆಯಲು ಹೊಂಚು ಹಾಕುತ್ತಿದೆ ಎಂದಿದ್ದಾರೆ.

ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಅನುದಾನ ನೀಡುವ ಸಂಬಂಧವೂ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 342 ಕೋಟಿ ರೂಪಾಯಿ ಅನುದಾನ ನೀಡಲು ಯೋಗ್ಯತೆ ಇಲ್ಲದೆ, ಬಿಜೆಪಿ ಸರ್ಕಾರ ಒಂಬತ್ತು ಜಿಲ್ಲೆಗಳಲ್ಲಿ ಆರಂಭಿಸಿದ್ದ ವಿಶ್ವವಿದ್ಯಾಲಯಗಳನ್ನ ಮುಚ್ಚುತ್ತೇವೆ ಎಂದು ಕಾಂಗ್ರೆಸ್ ಹಠಕ್ಕೆ ಬಿದ್ದಿದೆ. ಮತ್ತೊಂದೆಡೆ ಮುಸ್ಲಿಮರ ಶಿಕ್ಷಣಕ್ಕೆ 1,200 ಕೋಟಿ ರೂಪಾಯಿ ವಿನಿಯೋಗಿಸಲು ಹೊರಟಿದೆ ಎಂದು ಗರಂ ಆಗಿದ್ದಾರೆ.
ತಮ್ಮ ಸರ್ಕಾರದ ಬಳಿ ಒಂಬತ್ತು ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಲು 342 ಕೋಟಿ ರೂಪಾಯಿ ಹಣ ಇಲ್ಲ. ಆದರೆ ಮುಸ್ಲಿಮರ ಶಿಕ್ಷಣಕ್ಕೆ ಕೊಡಲು 1,200 ಕೋಟಿ ರೂಪಾಯಿ ಇದೆ ಅಲ್ಲವೇ? ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಅನುದಾನ ಕೊಡಿ, ಬೇಡ ಅನ್ನಲ್ಲ. ಆದರೆ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಪಯೋಗವಾಗುವ ವಿವಿಗಳನ್ನು ಯಾಕೆ ಮುಚ್ಚುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ 342 ಕೋಟಿ ರೂಪಾಯಿ ಖರ್ಚು ಮಾಡಲೂ ಸಾಧ್ಯವಾಗದಷ್ಟು ಪಾಪರ್ ಆಗಿದೆಯೇ ನಿಮ್ಮ ಕಾಂಗ್ರೆಸ್ ಸರ್ಕಾರ? ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಹೆಚ್ಚಾಗಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.












Click it and Unblock the Notifications