ವಿಜಯೇಂದ್ರ ಅಪ್ಪಟ ಚಿನ್ನ, ವಿಡಿಯೋ ರಿಲೀಸ್ ಮಾಡ್ಲಾ..?
ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿ ನಡೆಯುತ್ತಿದೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಎಸ್.ಯಡಿಯೂರಪ್ಪ ಅವರ ಬಣಗಳ ನಡುವೆ ವಾಗ್ಯುದ್ಧ ನಡೆಯುತ್ತಿದ್ದು, ಇದೀಗ ಯತ್ನಾಳ್ ಆಡಿರುವ ಮಾತುಗಳು ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಂಡರೆ ಕಿಡಿಕಾರುತ್ತಿದ್ದ ಯತ್ನಾಳ್ ಅವರು ದಿಢೀರನೆ ಯತ್ನಾಳ್ ಅವರನ್ನು ಅಪ್ಪಟ ಚಿನ್ನ ಎಂದು ಕರೆದಿದ್ದಾರೆ.
ಹೌದು ಯಡಿಯೂರಪ್ಪ ಅವರ ಕುಟುಂಬವು ದೇಶದಲ್ಲೇ ಅತ್ಯಂತ ಪ್ರಾಮಾಣಿಕ ಕುಟುಂಬ, ಇನ್ನು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅಂತೂ ಅಪ್ಪಟ ಚಿನ್ನ, ಬಂಗಾರ ಅಂತಲೇ ಹೇಳಬಹುದು. ಅವರಿಗೆ ಭ್ರಷ್ಟಾಚಾರ ಅಂದ್ರೇನು ಎಂದೇ ಗೊತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಯಡಿಯೂರಪ್ಪ ಅವರ ಕುಟುಂಬ ಅಥವಾ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ವಿಜಯೇಂದ್ರ ಅವರು ವಿರೋಧ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ. ಈ ಬಗ್ಗೆ ಶೀಘ್ರದಲ್ಲೇ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೇನೆ. ವಿಜಯೇಂದ್ರ ಅವರು ಸದನದ ಬಾವಿಯಲ್ಲೇ ಡಿಕೆ ಶಿವಕುಮಾರ್ ಅವರಿಂದ ಯಾವುದಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ ಎಂಬುವ ಬಗ್ಗೆಯೂ ದಾಖಲೆ ಬಿಡುಗಡೆ ಮಾಡುವೆ. ವಿಜಯೇಂದ್ರ ಬರೋಬ್ಬರಿ ಇಪ್ಪತ್ತು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ರಿಲೀಸ್ ಮಾಡ್ಲಾ? ಎಂದು ವಿಜಯೇಂದ್ರ ಅವರಿಗೆ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರಿಗೆ ಚಿತ್ರಹಿಂಸೆ ನೀಡಿ ಅವರ ತೇಜೋವಧೆ ಮಾಡಿದ್ಯಾರು ಅನ್ನೋದನ್ನ ವಿಜಯೇಂದ್ರ ಹೇಳಲಿ. ರಮೇಶ್ ಜಾರಕಿಹೊಳಿ ಅವರಿಗೆ ಏನು ಅನ್ಯಾಯ ಮಾಡಿದ್ದಾರೆ? ವಿಜಯೇಂದ್ರ ಯಾರ ಜೊತೆ ಸೇರಿಕೊಂಡು ರಮೇಶ್ ಜಾರಕಿಹೊಳಿಯ ಅವರ ಮರ್ಯಾದೆ ತೆಗೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ತಮ್ಮದೇ ಪಕ್ಷದ ಅಶೋಕ್ ಅವರ ಬಗ್ಗೆಯೂ ವಿಜಯೇಂದ್ರ ಏನು ಹೇಳಿದ್ದಾರೆ ಎನ್ನುವ ದಾಖಲೆಯೂ ರಿಲೀಸ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಅನೇಕರು ಅಧಿಕಾರ ಅನುಭವಿಸದೆ ಇದ್ದಾರೆ. ಕರ್ನಾಟಕದಲ್ಲಿ ಕುಟುಂಬ ರಾಜಕಾರಣ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಕ್ಷ ಸಂಘಟಿಸಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಆಶಯ. ಇದಕ್ಕಾಗಿಯೇ ನಾವೆಲ್ಲ ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟರನ್ನು ಬದಿಗಿಟ್ಟು, ಪ್ರಾಮಾಣಿಕರನ್ನು ಬೆಳೆಸಬೇಕು ಎನ್ನುವುದೇ ನಮ್ಮೆಲ್ಲರ ಗುರಿ ಎಂದು ಸಮರ್ಥಿಸಿಕೊಂಡಿದ್ದಾರೆ.
ಈಗ ವಿಜಯೇಂದ್ರನ ಬೆಂಬಲಿಗರು ನಮ್ಮನ್ನು ಟೀಕಿಸುತ್ತಿದ್ದಾರೆ. ಇದರಿಂದ ಅವರೆಲ್ಲ ದೊಡ್ಡವರಾಗುತ್ತಾರಾ? ನಮ್ಮ ಬಗ್ಗೆ ಅವರೇನೇ ಹೇಳಿದ್ರೂ ಸ್ವಾಗತಿಸುತ್ತೇವೆ. ಅವರು ನನ್ನನ್ನು ಇಡೀ ದೇಶಕ್ಕೆ ಪರಿಚಯಿಸುತ್ತಿದ್ದಾರೆ. ಒಬ್ಬ ಪ್ರಾಮಾಣಿಕನನ್ನು ಪರಿಚಯ ಮಾಡುವ ಕೆಲಸದಲ್ಲಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧ ಹೋರಾಡುವ ನಾಯಕ ಎನ್ನುವಂತೆ ನನಗೆ ಎಲ್ಲೆಡೆ ಪ್ರಚಾರ ಕೊಡುತ್ತಿದ್ದಾರೆ ಎಂದೂ ಯತ್ನಾಳ್ ತಿರುಗೇಟು ನೀಡಿದ್ದಾರೆ.












Click it and Unblock the Notifications