'ರಾಷ್ಟ್ರಪತ್ನಿ' ಹೇಳಿಕೆ: ಕಾಂಗ್ರೆಸ್ ಪಕ್ಷ ಬುಡಕಟ್ಟು ಸಮುದಾಯದ ವಿರೋಧಿ ಎಂದ ಗೀತಾ ವಿವೇಕಾನಂದ
ಬೆಂಗಳೂರು ಜು.29: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ದೇಶದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಹೇಳನ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಗೌರವಿಸದ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, "ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರತಿಭಟನೆ ವೇಳೆ ರಾಷ್ಟ್ರಪತಿಗಳನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದಾರೆ. ಈ ಹೇಳಿಕೆಯನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ. ಈ ಹೇಳಿಕೆಯು ಕಾಂಗ್ರೆಸ್ ಪಕ್ಷವು ಬುಡಕಟ್ಟು ಸಮುದಾಯದ ವಿರೋಧಿ, ದಲಿತ ಮತ್ತು ಮಹಿಳಾ ವಿರೋಧಿ ಎಂಬುದಕ್ಕೆ ಸ್ಪಷ್ಟ ಉದಾಹರಣೆ," ಎಂದು ಅವರು ಕಿಡಿಕಾರಿದ್ದಾರೆ.
'ರಾಷ್ಟ್ರಪತ್ನಿ' ಹೇಳಿಕೆ ವಿವಾದ: ಅಧೀರ್ ರಂಜನ್ ಚೌಧರಿ ದೇಶದ ಕ್ಷಮೆಯಾಚಿಸಲಿ ಎಂದ ಯೋಗಿ ಆದಿತ್ಯನಾಥ್
ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗ ಕೂಡ ದಲಿತರು ಮತ್ತು ಆದಿವಾಸಿ ಸಮುದಾಯವನ್ನು ಕಡೆಗಣಿಸಿ ಕೇವಲ ಮತಬ್ಯಾಂಕ್ ಆಗಿ ನೋಡುತ್ತಿತ್ತು. ಸಂವಿಧಾನಕ್ಕೆ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿತ್ತು ಎಂದು ಗೀತಾ ವಿವೇಕಾನಂದ ಅವರು ಆಪಾದಿಸಿದ್ದಾರೆ.
ಕಾಂಗ್ರೆಸ್ನಿಂದ ಮೊಸಳೆ ಕಣ್ಣೀರು
ಬಿಜೆಪಿ ಸರ್ಕಾರಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಮುಖ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ರಾಜ್ಯದಲ್ಲೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಪರಿಶಿಷ್ಟ ಜಾತಿ, ಪಂಗಡದವರ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಆದರೆ ಕಾಂಗ್ರೆಸ್ ಪಕ್ಷದವರು ಮತಬ್ಯಾಂಕ್ ದೃಷ್ಟಿಯಿಂದ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿಗರ ಆಕ್ರೋಶಕ್ಕೆ ಗುರಿಯಾದ ಅಧೀರ್
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಸಂಬಂಧಿಸಿದ ಕಾಂಗ್ರೆಸ್ನ ಸೋನಿಯಾಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ್ದನ್ನು ವಿರೋಧಿಸಿ ಸಂಸತ್ ಅಧಿವೇಶನ ವೇಳೆ ಕಾಂಗ್ರೆಸ್ ನಾಯಕರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿಗಳನ್ನು 'ರಾಷ್ಟ್ರಪತ್ನಿ' ಎಂಬು ಸಂಬೋಧಿಸುವ ಮೂಲಕ ಬಿಜೆಪಿಗರ ಆಕ್ರೋಶಕ್ಕೆ ಗುರಿಯಾದರು.
ಕ್ಷಮೆಗೆ ಬಿಜೆಪಿ ನಾಯಕಿಯರ ಪಟ್ಟು
ಅಧಿರ್ ಹೇಳಿಕೆ ಖಂಡಿಸಿ ಸಂಸತ್ತಿನಲ್ಲೇ ಬಿಜೆಪಿ ಮಹಿಳಾ ನಾಯಕರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಿಪಡಿಸಿದರು. ಮಹಿಳೆಯರಿಗೆ, ಬುಡಕಟ್ಟು ಸಮುದಾಯಕ್ಕೆ ಹಾಗೂ ದೇಶದ ಸಾಂವಿಧಾನಿಕ ಅತ್ಯುನ್ನದ ಹುದ್ದೆಯ ಕಾಂಗ್ರೆಸ್ ಕೊಡುವ ಗೌರವದ ರೀತಿ ಇದು ಎಂದು ಟೀಕಿಸಿದ್ದರು. ಅಲ್ಲದೇ ರಂಜನ್ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು.
ಮುರ್ಮು ಬಳಿ ಕ್ಷಮೆ ಕೇಳುವೆ
ಬಿಜೆಪಿ ನಾಯಕರು ಪ್ರತಿಭಟನೆ, ಟೀಕೆ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಅಧೀರ್ ರಂಜನ್ ಚೌಧರಿ ಅವರು ನಾನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಬಳಿ ಕ್ಷಮೆಯಾಚಿಸುತ್ತೇನೆ. ಈಸಂಬಂದ ಅವರನ್ನು ಭೇಟಿ ಮಾಡುತ್ತೇನೆ. ಆದರೆ ವಂಚಕ ಬಿಜೆಪಿ ನಾಯರಕ ಬಳಿ ಕ್ಷಮೆ ಕೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಬಂಗಾಳಿ, ನನಗೆ ಹಿಂದಿ ಭಾಷೆ ಸರಿಯಾಗಿ ಗೊತ್ತಿಲ್ಲ. ಪ್ರತಿಭಟನೆ ವೇಳೆ ಹಿಂದಿ ಭಾಷೆಯಲ್ಲಿ ಮಾತನಾಡಬಾರದಿತ್ತು ಎಂದು ಅವರು ತಪ್ಪನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಿಸಿದರು.
Recommended Video