ಬಿಎಸ್ವೈ ಜೊತೆ ಡಿವಿಎಸ್, ಈಶ್ವರಪ್ಪ ರಹಸ್ಯ ಚರ್ಚೆ!
ಬೆಂಗಳೂರು, ಡಿ. 13 : ಕೆಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನಕ್ಕೆ ಚಾಲನೆ ದೊರಕಿದೆಯೇ? ಶುಕ್ರವಾರದ ಮಹತ್ವದ ಬೆಳವಣಿಗೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮತ್ತು ಡಿ.ವಿ.ಸದಾನಂದಗೌಡ ಬೆಂಗಳೂರಿನಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವಕೃಪದಲ್ಲಿ ಭೇಟಿಯಾಗಿದ್ದಾರೆ.
ಶುಕ್ರವಾರ ಯಡಿಯೂರಪ್ಪ ಅವರು ಆರ್ಎಸ್ಎಸ್ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿಯೇ ಅಲ್ಲಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮತ್ತು ಕೆ.ಎಸ್.ಈಶ್ವರಪ್ಪ ಅವರು ಆಗಮಿಸಿದ್ದಾರೆ. ಉಭಯ ನಾಯಕರು ಒಟ್ಟಾಗಿದ್ದು ಇವರೊಂದಿಗೆ ಆರ್ಎಸ್ಎಸ್ ನ ಹಲವು ನಾಯಕರು ಸೇರಿದ್ದಾರೆ. ಎಲ್ಲರೂ ಒಟ್ಟಾಗಿ ಬಿಜೆಪಿಗೆ ಮರಳುವಂತೆ ಯಡಿಯೂರಪ್ಪ ಅವರ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ. (ಯಡಿಯೂರಪ್ಪ ಅವರಿಗಾಗಿ ಕಾದು ಕುಳಿತ ಬಿಜೆಪಿ)
ಸುಮಾರು ಅರ್ಧ ಗಂಟೆ ಕಾಲ ನಡೆದ ಮಾತುಕತೆಯಲ್ಲಿ ಯಡಿಯೂರಪ್ಪ ಅವರರನ್ನು ಪಕ್ಷಕ್ಕೆ ಬರುವಂತೆ ಬಿಜೆಪಿ ನಾಯಕರು ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ್ದ ಸದಾನಂದಗೌಡರು, ಬಿಎಸ್ವೈ ಮರು ಸೇರ್ಪಡೆ ವಿಚಾರ ಹತ್ತು ದಿನಗಳಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಯಡಿಯೂರಪ್ಪ ಅವರ ಜೊತೆ ನಾಯಕರು ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. (ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ)
ಕೇಶವಕೃಪದಿಂದ ಮೂವರು ನಾಯಕರು ಶಿವಮೊಗ್ಗ ಸಂಸದ ಮತ್ತು ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಆಗಮಿಸಿ ಉಪಹಾರ ಸೇವನೆ ಮಾಡಿದ್ದಾರೆ. ರಾಘವೇಂದ್ರ ಅವರ ನಿವಾಸದಲ್ಲೂ ಮತ್ತೊಂದು ಸುತ್ತಿನ ಸಭೆ ನಡೆದಿದ್ದು, ಯಡಿಯೂರಪ್ಪ ಬಿಜೆಗೆ ಬಂದರೆ ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಹಾಯಕವಾಗುತ್ತದೆ ಎಂದು ನಾಯಕರು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಡಿ.9ರಂದು ಕೆಜೆಪಿ ಕಾರ್ಯಕಾರಣಿ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಯಾವ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ದೂರವಾಣಿ ಮುಖಾಂತರವೂ ನನ್ನೊಂದಿಗೆ ಮಾತನಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಬಿಜೆಪಿಗೆ ಮರಳಲು ಯಾವ ನಾಯಕರು ನನಗೆ ಆಹ್ವಾನ ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಅವರ ಈ ಹೇಳಿಕೆ ನಂತರ ಬಿಜೆಪಿ ನಾಯಕರು ಅವರನ್ನು ಭೇಟಿ ಮಾಡಿದ್ದಾರೆ.