ಬಿಜೆಪಿಗೆ ಆನಂದ್ ಸಿಂಗ್ ಬೆಂಬಲಿಗರ ಸಾಮೂಹಿಕ ರಾಜೀನಾಮೆ
ಬಳ್ಳಾರಿ, ಜನವರಿ 28 : ವಿಜಯನಗರ ಕ್ಷೇತ್ರದ ಬಿಜೆಪಿ ತಾಲೂಕು ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಳಿಕ ಎಲ್ಲರೂ ಪಕ್ಷ ತೊರೆದಿದ್ದಾರೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಆನಂದ್ ಸಿಂಗ್ ಬೆಂಬಲಿಗರು ರಾಜೀನಾಮೆ ಪತ್ರವನ್ನು ಜಿಲ್ಲಾ ಅಧ್ಯಕ್ಷರಿಗೆ ರವಾನಿಸಿದ್ದಾರೆ. ಇದರಿಂದಾಗಿ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದೆ.
ಹೊಸಪೇಟೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಂದೀಪ್ ಸಿಂಗ್, 'ಆನಂದ್ ಸಿಂಗ್ ಅವರ ವಿರುದ್ಧ ಕುತಂತ್ರ ನಡೆದಿದೆ. ಅವರಿಗೆ ಅವಮಾನವಾದ ಹಿನ್ನಲೆಯಲ್ಲಿ ನಾವು ಸಾಮೂಹಿಕ ರಾಜೀನಾಮೆ ನೀಡಿದ್ದೇವೆ' ಎಂದು ಹೇಳಿದರು.

'ಆನಂದ್ ಸಿಂಗ್ ಬೆಂಬಲಕ್ಕೆ ನಾವಿದ್ದೇವೆ. ಸ್ಥಳೀಯ ಬಿಜೆಪಿ ಮುಖಂಡರಾದ ಅನಂತ ಸ್ವಾಮಿ, ಅನಿಲ್ ನಾಯ್ಡು ಸೇರಿದಂತೆ ಇತರರು ಆನಂದ್ ಸಿಂಗ್ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ' ಎಂದು ಸಂದೀಪ್ ಸಿಂಗ್ ಆರೋಪ ಮಾಡಿದರು.
ಶನಿವಾರ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆನಂದ್ ಸಿಂಗ್ ಬೆಂಬಲಿಗರು ಇಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.












Click it and Unblock the Notifications