ವಿಜಯೇಂದ್ರ ಸೂಪರ್ ಸಿಎಂ; ವೈರಲ್ ಆದ ಅನಾಮಧೇಯ ಪತ್ರ!
ಬೆಂಗಳೂರು, ಮಾರ್ಚ್ 12 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಡನೆ ಮಾಡಿದ ಬಜೆಟ್ ಬಗ್ಗೆ ಅಸಮಾಧಾನ ಉಂಟಾಗಿತ್ತು. ಈಗ ಅನಾಮಧೇಯ ಪತ್ರವೊಂದು ಬಿಡುಗಡೆಯಾಗಿದ್ದು, ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಟಾರ್ಗೆಟ್ ಮಾಡಲಾಗಿದೆ.
Recommended Video
ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ಗುರಿಯಾಗಿಟ್ಟುಕೊಂಡು ಬರೆದಿರುವ ಪತ್ರ ಒನ್ ಇಂಡಿಯಾಗೆ ಲಭ್ಯವಾಗಿದೆ. ಸೂಪರ್ ಸಿಎಂ ವಿಜಯೇಂದ್ರ ದರ್ಬಾರ್ ನಡೆಸುತ್ತಿದ್ದಾರೆ ಎನ್ನುವ ಆರೋಪ ಮಾಡಿರುವ ಪತ್ರದಲ್ಲಿ ಭ್ರಷ್ಟಾಚಾರದ ಆರೋಪವನ್ನು ಮಾಡಲಾಗಿದೆ.
ಯಡಿಯೂರಪ್ಪನವರ ವಯಸ್ಸಿನ ಲಾಭವನ್ನು ಪಡೆದುಕೊಂಡು ಪರ್ಯಾಯ ಕೂಟ ರಚಿಸಿಕೊಂಡಿದ್ದಾರೆ. ಕುಟುಂಬ ಸದಸ್ಯರು ಕಮಿಷನ್ ಆಧಾರದ ಮೇಲೆ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದಾರೆ. ಯಡಿಯೂರಪ್ಪ ರಾಜಕೀಯ ಯುಗವನ್ನು ಮುಗಿಸಿಸಲು ವಿಜಯೇಂದ್ರ ವಾಮಮಾರ್ಗ ಹುಡುಕಿಕೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟು 6 ಪುಟಗಳ ಪತ್ರದಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರಿಕ ಆಡಳಿತ ಮೇಳೈಸುತ್ತಿದೆ. ಅನುವಂಶೀಯ ಆಡಳಿತಕ್ಕೆ ಸ್ವತಃ ಯಡಿಯೂರಪ್ಪ ಒತ್ತಾಸೆಯಾಗಿದ್ದಾರೆ. ಮಗನ ಕಾರ್ಯವೈಖರಿಯ ಬಗ್ಗೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿರುವುದು ದುರಾದೃಷ್ಟಕರ ಸಂಗತಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಯಡಿಯೂರಪ್ಪ ದೃತರಾಷ್ಟ್ರ ಪ್ರೇಮ
ದೇವೇಗೌಡರ ಪುತ್ರ ವ್ಯಾಮೋಹವನ್ನು ಟೀಕಿಸುತ್ತಿದ್ದ ರಾಜಾಹುಲಿ ಇಂದು ತಮ್ಮ ಅಧಿಕಾರವನ್ನು ಕುಟುಂಬಕ್ಕೆ ದಯಪಾಲಿಸಿ ದೃತೃರಾಷ್ಟ್ರ ಪ್ರೇಮ ತೋರಿಸುತ್ತಿದ್ದಾರೆ. ಯಡಿಯೂರಪ್ಪ ಕೇವಲ ಉತ್ಸವ ಮೂರ್ತಿ ವಿಜಯೇಂದ್ರ ತನ್ನದೇ ಆದ ಕೂಟ ರಚಿಸಿ ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಧ್ಯವರ್ತಿಗಳು ಹಾಗೂ ಹಣ ಕೊಟ್ಟು ಕೆಲಸ ಮಾಡಿಕೊಳ್ಳಲು ಇಚ್ಚಿಸುವರು ಈ ಕೂಟವನ್ನು ಸಂಪರ್ಕಿಸಿ ಕಮಿಷನ್ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ದೂರಲಾಗಿದೆ.

16 ಜನರ ಹೆಸರು ಉಲ್ಲೇಖ
ಪತ್ರಿಕಾಪ್ರಕಟಣೆ ಹೆಸರಿನಲ್ಲಿ ಬಂದಿರುವ 6 ಪುಟಗಳ ಪತ್ರದಲ್ಲಿ 16 ಜನರ ಹೆಸರು ಉಲ್ಲೇಖಿಸಲಾಗಿದೆ. ಯಡಿಯೂರಪ್ಪ ಕುಟುಂಬಕ್ಕೆ, ವಿಜಯೇಂದ್ರಗೆ ಆಪ್ತರಾದ ಇವರೆಲ್ಲರೂ ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದು ಅವರ ಫೋಟೋ, ಮೊಬೈಲ್ ನಂಬರ್ ಹಾಕಿ ವಿವರಣೆ ಕೊಡಲಾಗಿದೆ. ಈ ಪತ್ರ ಈಗ ವೈರಲ್ ಆಗಿದೆ.

ಶಾಸಕರ ಅನುಭವ
ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಮುಖ್ಯಮಂತ್ರಿಗಳ ಆದೇಶ ಇದ್ದರೂ ಕೆಲಸಗಳು ಆಗದೆ ಪರಿತಪಿಸುತ್ತಿದ್ದಾರೆ. ವಿಜಯೇಂದ್ರನ ಒಪ್ಪಿಗೆ ಹಾಗೂ ಆದೇಶ ಇಲ್ಲದೆ ಸರಕಾರದಲ್ಲಿ ಏನೂ ನಡೆಯದು ಎನ್ನುವುದು ಶಾಸಕರ ಅನುಭವ. ಪುತ್ರನನ್ನು ಭೇಟಿ ಮಾಡುವಂತೆ ಬಿಎಸ್ವೈ ಸೂಚನೆ ನೀಡುವುದು ನಮ್ಮ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡಿದೆ. ಸರಕಾರವನ್ನು ಖಾಸಗಿ ಕಂಪನಿಯಂತೆ ಕಾರ್ಪೋರೇಟ್ ಸ್ಟೈಲ್ನಲ್ಲಿ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮುಂದಿನ ಮುಖ್ಯಮಂತ್ರಿ
ಬಿ. ವೈ. ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎನ್ನುವ ಭ್ರಮೆಯಲ್ಲಿ ಉತ್ತರಾಧಿಕಾರಿಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ.ವಿರೋಧ ಪಕ್ಷಗಳ ಮುಖಂಡರುಗಳ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡುವ ಮೂಲಕ ಭ್ರಷ್ಟಾಚಾರದ ವಿರುದ್ದ ವಿರೋಧ ಪಕ್ಷಗಳ ಧ್ವನಿಯನ್ನು ಕೊಂಡುಕೊಂಡಿದ್ದಾರೆ. ತಂದೆ-ಮಕ್ಕಳ ಈ ವರ್ತನೆಗೆ ಶಾಸಕರು ಬೇಸತ್ತಿದ್ದೇವೆ. ಕ್ಷೇತ್ರದ ಮತದಾರರ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಶಾಸಕರು ಅಂಗವಾಚಬೇಕು
ನಮ್ಮ ಅಳಲನ್ನು ಪಕ್ಷದ ಆಂತರಿಕ ಹಾಗೂ ಶಾಸಕಾಂಗ ಸಭೆಯಲ್ಲಿ ಹೇಳಲೂ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನದ ಸಂವಿಧಾನ ಬದ್ದ ಅಧಿಕಾರವನ್ನು ವಿಜಯೇಂದ್ರ ಚಲಾಯಿಸುತ್ತಿದ್ದಾರೆ. ಪ್ರತಿಯೊಂದು ಕೆಲಸಕ್ಕೆ ವಿಜಯೇಂದ್ರ ಮುಂದೆ ತಲೆತಗ್ಗಿಸಿ ನಿಲ್ಲುವಂತ ಅನಿವಾರ್ಯತೆ ಶಾಸಕರಿಗೆ ಬಂದೊದಗಿದೆ. ಸ್ವಾಭಿಮಾನ ಮೂಲ ಮಂತ್ರವಾಗಿರುವ ಬಿಜೆಪಿ ಪಕ್ಷದ ಶಾಸಕರುಗಳು ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಗೇಡಿನ ಸಂಗತಿ. ಶಾಸನ ಬದ್ಧ ಅಧಿಕಾರ ಮಗ ಚಲಾಯಿಸುತ್ತಿರುವುದು ಶಾಸಕರು ಹಾಗೂ ಪಕ್ಷಕ್ಕೆ ಮಾಡುತ್ತಿರುವ ಅವಮಾನವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭಾರಿ ಬೆಲೆ ತೆರಬೇಕಾಗುತ್ತದೆ
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಹಾಗೂ ಶಾಸಕರು ಸ್ಪಂದಿಸಲು ಆಗುತ್ತಿಲ್ಲ. ಆಡಳಿತದಲ್ಲಿರುವ ಭ್ರಷ್ಟಾಚಾರ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಶಾಸಕರಾಗಿ ನಮ್ಮ ಸಾರ್ವಜನಿಕ ಬದುಕು ಕೂಡಾ ಅತಂತ್ರವಾಗಲಿದೆ. ಇಂದು ನಮ್ಮ ಸರಕಾರ ವಿಎಸ್ಟಿ ಪರಿಣಾಮದಿಂದ 15 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ ಮಾನ್ಯ ಪ್ರಧಾನಿಗಳು ಹಾಗೂ ಕೇಂದ್ರ ಗೃಹ ಸಚಿವರು ರಾಜ್ಯದ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಪಕ್ಷ ಹಾಗೂ ಸರಕಾರಕ್ಕೆ ಭರಿಸಲಾರದಂತಹ ಧಕ್ಕೆ ಉಂಟಾಗಲಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications