SM Krishna : ರಾಜಕೀಯ ನಿವೃತ್ತಿ ಘೋಷಿಸಿದ ಎಸ್. ಎಂ. ಕೃಷ್ಣ
ಬೆಂಗಳೂರು, ಜನವರಿ 04; ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್. ಎಂ. ಕೃಷ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈ ಘೋಷಣೆ ಅಚ್ಚರಿಕೆ ಕಾರಣವಾಗಿದೆ.
ಬುಧವಾರ ಎಸ್. ಎಂ. ಕೃಷ್ಣ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಅದರ ಜೊತೆಗೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದಾರೆ.
"ನನಗೀಗ 90 ವರ್ಷ, ವಯಸ್ಸಿನ ಬಗ್ಗೆ ನಮಗೆ ಅರಿವು ಇರಬೇಕು. 90 ರಲ್ಲಿ 50 ವರ್ಷದ ರೀತಿ ನಟನೆ ಮಾಡಲು ಆಗುವುದಿಲ್ಲ. ಅದಕ್ಕಾಗಿ ಕ್ರಮೇಣವಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ" ಎಂದು ಎಸ್. ಎಂ. ಕೃಷ್ಣ ಹೇಳಿದ್ದಾರೆ.

ಕೇಳಿದರೆ ಸಲಹೆ ನೀಡುತ್ತೇನೆ; ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸಂಪೂರ್ಣವಾಗಿ ರಾಜಕೀಯದಿಂದ ನಿವೃತ್ತಿಯಾಗುತ್ತಿಲ್ಲ. "ನಾನು ಸಂಪೂರ್ಣವಾಗಿ ಸನ್ಯಾಸಿಯಾಗುತ್ತೇನೆ ಎಂದಲ್ಲ. ಪಕ್ಷ ಇಲ್ಲವೇ ನಾಯಕರು ಸಲಹೆ ಕೇಳಿದರೆ ಕೊಡುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಮೀಸಲಾತಿ ವಿಚಾರವಾಗಿ ಕೇಳಿದರೆ ಸಲಹೆ ಕೊಡುತ್ತೇನೆ. ನಾನು ಮೇಲೆ ಬಿದ್ದು ಸಲಹೆ ಕೊಡುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಬಂದು ಸಲಹೆ ಕೇಳಿದರೆ ಕೊಡುತ್ತೇನೆ" ಎಂದು ಎಸ್. ಎಂ. ಕೃಷ್ಣ ಹೇಳಿದರು.
ಹೈಕಮಾಂಡ್ ಗಮನಕ್ಕೆ ತರಬೇಕಿಲ್ಲ; ಮಾಧ್ಯಮಗಳು ಬಿಜೆಪಿ ಎಸ್. ಎಂ. ಕೃಷ್ಣರನ್ನು ಕಡೆಗಣಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನೇ ನಿವೃತ್ತಿ ಆಗುತ್ತಿರುವಾಗ ಕಡೆಗಣಿಸುವ ಪ್ರಶ್ನಯೇ ಇಲ್ಲ" ಎಂದರು.
ರಾಜಕೀಯ ನಿವೃತ್ತಿ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದಿರಿಯೇ? ಎಂದಾಗ, "ರಾಜಕೀಯದಲ್ಲಿ ಯಾರೂ ಪಿಂಚಣಿ ನೀಡುವುದಿಲ್ಲ. ಆದ್ದರಿಂದ ನನ್ನ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ" ಎಂದು ಹೇಳಿದರು.
"ಬಿಜೆಪಿ ಸಂಘಟನೆ, ಅಭಿವೃದ್ಧಿ ಕಾರ್ಡ್ ಬಳಸಬೇಕಾ?, ಭಾವನಾತ್ಮಕ ವಿಚಾರ ಬಳಕೆಯಾಗಬೇಕಾ? ಎಂಬ ಬಗ್ಗೆ ನಾನೇನು ಹೇಳುವುದಿಲ್ಲ. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಸಂಘಟನೆಯ ಪ್ರಯತ್ನ ನಡೆಯುತ್ತಿದೆ. ಯಾವ ವಿಚಾರ ಸಂಘಟನೆಗೆ ಪೂರಕ ಎಂದು ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯೋಚನೆ ಮಾಡಬೇಕು" ಎಂದು ಎಸ್. ಎಂ. ಕೃಷ್ಣ ಹೇಳಿದರು.
ಸಚಿವರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಣೆ ಮಾಡಿರುವ ಎಸ್. ಎಂ. ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.












Click it and Unblock the Notifications