ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಬಾಗಿಲು ತಟ್ಟಲು ಮುಂದಾದರೇ ಜನಾರ್ಧನ ರೆಡ್ಡಿ?
ಬೆಂಗಳೂರು, ಡಿಸೆಂಬರ್ 10: ಒಂದು ಕಾಲದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಗಣಿಧಣಿ ಜನಾರ್ಧನ ರೆಡ್ಡಿ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ರಾಜ್ಯದಲ್ಲಿ ತೀವ್ರ ಕುತೂಹಲ ಶುರುವಾಗಿದೆ. ಈ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಹಲವಾರು ಉಹಾಪೋಹಗಳು ಹರಿದಾಡುತ್ತಿವೆ. ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆ ಕಾರಣ ರೆಡ್ಡಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಮತ್ತೊಂದೆಡೆ, ತಮ್ಮದೇ ಆದ ಹೊಸ ಪಕ್ಷವನ್ನು ರೆಡ್ಡಿ ಕಟ್ಟುತ್ತಾರೆ ಎನ್ನಲಾಗುತ್ತಿದೆ. ಆದರೆ, ಇದೆಲ್ಲದಕ್ಕೂ ಡಿಸೆಂಬರ್ 18ರ ನಂತರ ಉತ್ತರ ನೀಡುವುದಾಗಿ ರೆಡ್ಡಿ ಹೇಳಿದ್ದಾರೆ.
ಗಣಿ ದೂಳಿದಲ್ಲಿ ರಂಗು ಕಳೆದುಕೊಂಡ ಜನಾರ್ಧನ ರೆಡ್ಡಿ
ಈ ಹಿಂದೆ ಸುಷ್ಮಾ ಸ್ವರಾಜ್ ಅವರ ಆಶೀರ್ವಾದದಿಂದ ಜನಾರ್ಧನ ರೆಡ್ಡಿ ಹಾಗೂ ಅವರ ಕುಟುಂಬ ಕರ್ನಾಟಕ ರಾಜಕೀಯದಲ್ಲಿ ಪ್ರಭಾವ ಕಂಡುಕೊಂಡಿತ್ತು. ತೆಲುಗು ಭಾಷೆಯ ಪ್ರಾಬಲ್ಯವಿರುವ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ರೆಡ್ಡಿಯವರ ವರ್ಣರಂಜಿತ ರಾಜಕಾರಣ ಮುನ್ನೆಲೆಗೆ ಬಂದಿತ್ತು. ಅವರ ಆಪ್ತ ಶ್ರೀರಾಮುಲು, ಸಹೋದರರಾದ ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ಅವರು ಬಿಜೆಪಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡರು. ಬಳ್ಳಾರಿ ಹಾಗೂ ಆಂಧ್ರ ಪ್ರದೇಶದ ಗಡಿಗಳಲ್ಲಿ ನಡೆಸಿದ ಗಣಿ ವ್ಯವಹಾರದಿಂದ ರೆಡ್ಡಿ ಅಪಾರ ಸಂಪಾದನೆ ಮಾಡಿದರು. ಅಕ್ರಮಗಳು ರೆಡ್ಡಿ ಅವರಿಗೆ ಸುತ್ತಿಕೊಂಡವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರೆಡ್ಡಿ ಅವರು ಬಂಧಿತರಾದರು. ಸುಮಾರು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಇದು ರೆಡ್ಡಿ ಅವರ ರಾಜಕೀಯ ಅಸ್ವಿತ್ವವನ್ನೇ ಅಲ್ಲಾಡಿಸಿತ್ತು. ವರ್ಣ ರಂಜಿತ ರಾಜಕಾರಣಿಯ ರಂಗು ಮಾಸುತ್ತಲೇ ಹೋಯಿತು.
ಗಂಗಾವತಿಯಲ್ಲಿ ಹೊಸ ಬಂಗಲೆ, ಹೊಸ ರಾಜಕೀಯ ಪಯನ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದು ಜನಾರ್ಧನ ರೆಡ್ಡಿ ಅವರ ಆಕಾಂಕ್ಷೆಯಾಗಿದೆ. ಪ್ರಸ್ತುತ ಬಿಜೆಪಿಯಲ್ಲಿರುವ ರೆಡ್ಡಿ ಅವರಿಗೆ ಕೇಸರಿ ಪಕ್ಷವು ಟಿಕೆಟ್ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ಕೋರ್ಟ್ ಅವಕಾಶ ನೀಡಿಲ್ಲ. ಹೀಗಾಗಿ, ರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕಚೇರಿ ಸೇರಿದಂತೆ ಹೊಸ ಮನೆಯನ್ನೂ ರೆಡ್ಡಿ ನಿರ್ಮಿಸಿದ್ದಾರೆ. ಗಂಗಾವತಿಯಲ್ಲಿ ಪದೇಪದೇ ಸಂಚಾರ ನಡೆಸಿದ್ದಾರೆ. ಈ ಮೂಲಕ ರೆಡ್ಡಿ ಅವರು ಗಂಗಾವತಿಯಿಂದ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಅಭಿಪ್ರಾಯಗಳು ದಟ್ಟವಾಗಿವೆ.
ನೂತನ ಪಕ್ಷದ ಊಹಾಪೋಹ
ಬಿಜೆಪಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗಿರುವ ಪರಿಸ್ಥಿತಿ ನೋಡಿದರೆ, ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗುವುದು ಸುಲಭವಲ್ಲ. ಕಾರಣ, 2013 ರ ಚುನಾವಣೆಗೂ ಮುನ್ನ ಬಳ್ಳಾರಿ ಪಾದಯಾತ್ರೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಆಗ ರೆಡ್ಡಿಗಳ ವಿರುದ್ಧ ತೊಡೆತಟ್ಟಿಯೇ ಅಧಿಕಾರ ಹಿಡಿದಿದ್ದರು. ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಮುಜುಗರವಾಗಲಿದೆ. ಈ ಕಾರಣಕ್ಕೆ ಕೈ ನಾಯಕರು ರೆಡ್ಡಿ ಸೇರ್ಪಡೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ವಾದಗಳು ಮುನ್ನೆಲೆಗೆ ಬಂದಿವೆ. ಹೊಸ ಪಕ್ಷವನ್ನು ಹುಟ್ಟುಹಾಕುವುದು ರೆಡ್ಡಿಗೆ ಸುಲಭದ ಮಾತಲ್ಲ. ಈ ಹಿಂದೆ, ಸಚಿವ ರಾಮುಲು ಬಿಆರ್ಎಸ್ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದ್ದರು. ಆದರೆ, ಆ ಪಕ್ಷವು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಅವರು ಮತ್ತೆ ಬಿಜೆಪಿಗೆ ಮರಳಿದರು. ಈ ಎಲ್ಲ ಹಿನ್ನೆಲೆಗಳಿಂದ ನೋಡುವುದಾದರೆ, ರೆಡ್ಡಿ ಹೊಸ ಪಕ್ಷ ಕಟ್ಟುವ ನಿರ್ಧಾರ ತೆಗೆದುಕೊಳ್ಳಲಾರರು ಎಂದು ಹೇಳಲಾಗುತ್ತಿದೆ.
ವೈಎಸ್ಆರ್ ಕಾಂಗ್ರೆಸ್ನಿಂದ ಜನಾರ್ಧನ ರೆಡ್ಡಿ ಸ್ಪರ್ಧೆ?
ಜನಾರ್ಧನ ರೆಡ್ಡಿಗೆ ಈಗಿರುವ ಕೊನೆಯ ಆಯ್ಕೆ ಜಗನ್ ಮೋಹನ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ, ರೆಡ್ಡಿ ಅವರು ಜಗನ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಓಡಾಡುತ್ತಿವೆ. ಈ ಹಿಂದೆ, ಗಣಿಗಾರಿಕೆ ನಡೆಸುತ್ತಿದ್ದಾಗ, ಜಗನ್ ತಂದೆ ರಾಜಶೇಖರ ರೆಡ್ಡಿ ಅವರೊಂದಿಗೆ ಜನಾರ್ಧನ ರೆಡ್ಡಿ ಅಪ್ತತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ರೆಡ್ಡಿ, ಜಗನ್ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಈಗ ಜಗನ್ ಅವರ ವೈಆರ್ಎಸ್ ಕಾಂಗ್ರೆಸ್ ಪಕ್ಷವನ್ನು ರೆಡ್ಡಿ ಸೇರಿದರೂ ಅಚ್ಚರಿ ಪಡಬೇಕಿಲ್ಲ. ವೈಆರ್ಎಸ್ ಕಾಂಗ್ರೆಸ್ನಿಂದಲೇ ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಸ್ಪರ್ಧಿಸುವುದನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ, ಡಿಸೆಂಬರ್ 18ರ ನಂತರ ರೆಡ್ಡಿ ನಡೆ ಏನು ಎಂಬುದು ಗೊತ್ತಾಗಲಿದೆ.