ಸಿ. ಟಿ. ರವಿ ಆಸ್ತಿ ಸಂಪಾದನೆ ವಿವರ ನೀಡಲಿ; ಎಎಪಿ ಸವಾಲು
ಬೆಂಗಳೂರು, ಸೆಪ್ಟಂಬರ್ 04: ಪಾರದರ್ಶಕ ಆಡಳಿತದಲ್ಲಿ ದೃಢವಾದ ನಂಬಿಕೆ ಹೊಂದಿರುವ ಆಮ್ ಆದ್ಮಿ ಪಕ್ಷದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ. ಟಿ. ರವಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಎಎಪಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ತಿರುಗೇಟು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ವಿರುದ್ಧ ಸಿ. ಟಿ. ರವಿ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಒಂದು ಕಾಲದಲ್ಲಿ ಧರಿಸಲು ಸರಿಯಾಗಿ ಒಂದು ಜೊತೆ ಬಟ್ಟೆ ಇರಲಿಲ್ಲ. ಬಾಬಾ ಬುಡನ್ಗಿರಿ ಫೈಲುಗಳನ್ನು ಹೊತ್ತುಕೊಂಡು ಆರ್ಎಸ್ಎಸ್ ಕಚೇರಿ ಅಲೆಯುತ್ತಿದ್ದ ಸಿ. ಟಿ. ರವಿಯವರ ಈಗಿನ ಆಸ್ತಿ ಎಷ್ಟು?. ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಹೇಗೆ ಸಂಪಾದಿಸಿದರೆಂದು? ಅವರು ರಾಜ್ಯದ ಜನತೆಗೆ ತಿಳಿಸಬೇಕು ಎಂದರು.
ದೇವನಹಳ್ಳಿಯ ಭೂ ಹಗರಣದಿಂದ ತಪ್ಪಿಸಿಕೊಳ್ಳಲು ಸಿ. ಟಿ. ರವಿ ಕಾಂಗ್ರೆಸ್ ನಾಯಕರ ಬೂಟು ನೆಕ್ಕಿದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಡಿದು ಪಾನಮತ್ತನಾಗಿ ಕಾರು ಓಡಿಸಿ ಅಮಾಯಕ ಯುವಕರನ್ನು ಬಲಿ ತೆಗೆದುಕೊಂಡ ರವಿ ಎಂಥಹರವರು? ಎಂಬುದು ಜನರಿಗೆ ತಿಳಿದಿದೆ ಎಂದು ಅವರು ಕಿಡಿ ಕಾರಿದರು.

ಹಣ ಲೂಟಿ ಅಸಾಧ್ಯವೆಂದು ಸಚಿವ ಸ್ಥಾನ ಬಿಟ್ಟರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೆಚ್ಚು ಹಣ ಕೊಳ್ಳೆ ಹೊಡೆಯಲು ಸಾಧ್ಯವಿಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನವನ್ನೇ ಕಾಲಲ್ಲಿ ಒದ್ದವರು ಈ ಶಾಸಕ ಸಿ. ಟಿ. ರವಿ. ಪಾರದರ್ಶಕತೆಗೆ ಆದ್ಯತೆ ನೀಡುವ ಮೂಲಕ ದೇಶದ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸುತ್ತಿರುವ ಆಮ್ ಆದ್ಮಿ ಪಾರ್ಟಿಯ ಹೆಸರು ಹೇಳುವ ಯೋಗ್ಯತೆ ಕೂಡ ಸಿ. ಟಿ. ರವಿಯವರಿಗೆ ಇಲ್ಲ ಎಂದು ಗುಡುಗಿದರು.
ಸಿ. ಟಿ. ರವಿಯವರು ಕಾಂಗ್ರೆಸ್ ಹಲವು ನಾಯಕರೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಿದ್ದಾರೆ. ಅದರಿಂದ ನೂರಾರು ಕೋಟಿ ಸಂಪಾದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಎಎಪಿ ಅಭಿವೃದ್ಧಿ ಕೆಲಸ ವೀಕ್ಷಿಸಲು ಸವಾಲ್
ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಎಎಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ಸಿ. ಟಿ. ರವಿಯವರು ಸಿದ್ಧರಿದ್ದರೆ ಅವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ. ಭೇಟಿಗೆ ಅವರೇ ದಿನಾಂಕ ಹಾಗೂ ಸಮಯ ನಿಗದಿಪಡಿಸಲಿ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುವ್ಯವಸ್ಥಿತ ಸರ್ಕಾರಿ ಶಾಲೆಗಳು, ಮೊಹಲ್ಲಾ ಕ್ಲಿನಿಕ್ಗಳು ಸೇರಿದಂತೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ತಂದ ನೂರಾರು ಕ್ರಾಂತಿಕಾರಿ ಬದಲಾವಣೆಗಳನ್ನು ಅವರು ಪರಿಶೀಲಿಸಲಿದೆ ಎಂದು ಸವಾಲು ಹಾಕಿದರು.

ಕಮಿಷನ್ನಿಂದ ಗುಣಮಟ್ಟದ ಕಾಮಗಾರಿ ಆಗಿಲ್ಲ
ಅಭಿವೃದ್ಧಿ ಕೆಲಸ ವೀಕ್ಷಿಸಿದ ಬಳಿಕ ಎಎಪಿ ಪಕ್ಷದ ಬಗ್ಗೆ ಮಾತನಾಡಲಿ. ಭ್ರಷ್ಟ ಬಿಜೆಪಿಯ 40ಪರ್ಸೆಂಟ್ ಕಮಿಷನ್ ಸರ್ಕಾರದ ಕಳಪೆ ಕಾಮಗಾರಿಗಳಿಗೂ ಎಎಪಿ ಸರ್ಕಾರದ ಗುಣಮಟ್ಟದ ಕಾಮಗಾರಿಗಳಿಗೂ ಇರುವ ವ್ಯತ್ಯಾಸವು ಸಿ. ಟಿ. ರವಿಯವರಿಗೆ ಅರ್ಥವಾಗುತ್ತಿಲ್ಲ. ಬಿಜೆಪಿ 40ಪರ್ಸೆಂಟ್ ಕಮಿಷನ್ ಸರ್ಕಾರದಿಂದ ಗುಣಮಟ್ಟದ ಕಾಮಗಾರಿಗಳು ಆಗಿಲ್ಲ ಎಂದು ಬಿಜೆಪಿ ವಿರುದ್ಧ ಮುಕುಂದ್ ಗೌಡ ವ್ಯಂಗ್ಯವಾಡಿದರು.

ಸಿ.ಟಿ. ರವಿ ಹೇಳಿದ್ದೇನು?
ಇತ್ತೀಚೆಗೆ ಸಿ. ಟಿ. ರವಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕೇಜ್ರಿವಾಲರು ಈಗ ಭ್ರಷ್ಟಾಚಾರದ ಪರವಾಗಿದ್ದಾರೆ. 200ರಿಂದ 250 ಶಾಲೆ ಕಟ್ಟಿ ಸಾವಿರ ಶಾಲೆ ಕಟ್ಟಿರುವುದಾಗಿ ಹೇಳಿ ಕೋಟಿಗಟ್ಟಲೇ ಅನುದಾನ ಪಡೆಯತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಕರ್ನಾಟಕ ಎಎಪಿ ಕಾರ್ಯಕರ್ತರು ಸಿ. ಟಿ. ರವಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.












Click it and Unblock the Notifications