ಹಾಸನ ರಾಜಕೀಯದಲ್ಲಿ ಕುತೂಹಲ; ಸಿದ್ದರಾಮಯ್ಯ ಭೇಟಿಯಾದ ಎ. ಮಂಜು!
ಬೆಂಗಳೂರು, ಡಿಸೆಂಬರ್ 31; ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಎ. ಮಂಜು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾದರು. ಬಿಜೆಪಿ ನಾಯಕ ಎ. ಮಂಜು ಕಾಂಗ್ರೆಸ್ಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿಗಳು ಹಲವು ದಿನದಿಂದ ಹಬ್ಬಿದೆ.
ಶುಕ್ರವಾರ ಬೆಂಗಳೂರಿನ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಎ. ಮಂಜು ಭೇಟಿಯಾಗಿದ್ದಾರೆ. 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎ. ಮಂಜು ಕಾಂಗ್ರೆಸ್ಗೆ ವಾಪಸ್ ಆಗಲಿದ್ದಾರೆಯೇ? ಕಾದು ನೋಡಬೇಕು.
ಬಿಜೆಪಿ ಬಿಟ್ಟು ಕಾಂಗ್ರೆಸ್ನತ್ತ ಮಾಜಿ ಸಚಿವ; ಸಿದ್ದರಾಮಯ್ಯ ಭೇಟಿ!
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎ. ಮಂಜು ಪುತ್ರ ಮಂಥರ್ ಗೌಡ ಕೊಡಗು ಕ್ಷೇತ್ರದಿಂದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅವರು ಸೋಲು ಕಂಡರೂ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಹಾಸನ ರಾಜಕೀಯ; ಎ. ಮಂಜುಗೆ ಪ್ರೀತಂ ಗೌಡ ಟಾಂಗ್!
ಮಂಥರ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದಂತೆ ಎ. ಮಂಜುಗೆ ಪಕ್ಷ ನೀಡಿದ್ದ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಲಾಗಿತ್ತು. ಈ ಬಗ್ಗೆ ಎ. ಮಂಜು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಸಹೋದರನನ್ನು ಚುನಾವಣೆಗೆ ನಿಲ್ಲಿಸಿದ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಏಕಿಲ್ಲ? ಎಂದು ಪ್ರಶ್ನಿಸಿದ್ದರು.
ಹಾಸನ ರಾಜಕೀಯ ಲೆಕ್ಕಾಚಾರ ಬದಲು; ಕಾಂಗ್ರೆಸ್ ನಾಯಕ ಬಿಜೆಪಿಗೆ!
ವಿಧಾನ ಪರಿಷತ್ ಚುನಾವಣೆ ಬಳಿಕ ಎ. ಮಂಜು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆ ಹಾಸನ ಜಿಲ್ಲೆಯಲ್ಲಿ ಯಾರು ಹೊರಬೇಕು?. ಜಿಲ್ಲಾಧ್ಯಕ್ಷ, ಶಾಸಕ ಜವಾಬ್ದಾರಿ ಹೊರಬೇಕು, ಆಯಾ ಜಿಲ್ಲೆಯ ಉಸ್ತುವಾರಿ ಸಚಿವರೇ ಜವಾಬ್ದಾರಿ ಹೊರಬೇಕು" ಎಂದು ಹೇಳಿದ್ದರು.
ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ, "ಎ. ಮಂಜು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ" ಎಂದು ಹೇಳಿಕೆ ಕೊಟ್ಟಿದ್ದರು.
ಪರಿಷತ್ ಚುನಾವಣೆ ಮುಂಚೆ ಮತ್ತು ಮೊದಲು ಹೀಗೆ ನಾನಾ ಬೆಳವಣಿಗೆ ಹಾಸನ ರಾಜಕೀಯದಲ್ಲಿ ನಡೆದಿದೆ. ಇಂತಹ ಸಂದರ್ಭದಲ್ಲಿಯೇ ಎ. ಮಂಜು ಸಿದ್ದರಾಮಯ್ಯ ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
2013ರ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ. ಮಂಜು ಗೆಲುವು ಸಾಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಸಹ ಆಗಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರು.
ಬಳಿಕ 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಎ. ಮಂಜು ಬಿಜೆಪಿ ಸೇರಿದ್ದರು. ಹಾಸನದಿಂದ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಜೆಡಿಎಸ್ನ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದರು. ಒಂದೇ ಪಕ್ಷದಲ್ಲಿದ್ದರೂ ಹಾಸನದಲ್ಲಿ ಎ. ಮಂಜು ಮತ್ತು ಪ್ರೀತಂ ಗೌಡ ನಡುವೆ ಆಗಾಗ ಜಟಾಪಟಿ ನಡೆಯುತ್ತಲೇ ಇರುತ್ತದೆ.
ಚುನಾವಣೆ ಸೋಲು; 2013ರ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದ ಎ. ಮಂಜು 2018ರ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ 74,411 ಮತಗಳನ್ನು ಪಡೆದು ಜೆಡಿಎಸ್ನ ಎ. ಟಿ. ರಾಮಸ್ವಾಮಿ ವಿರುದ್ಧ ಸೋಲು ಕಂಡರು. ಬಳಿಕ ಬಿಜೆಪಿ ಸೇರಿದರು.
ಎ. ಮಂಜು ಪಕ್ಷ ಬದಲಿಸುವುದು ಮೊದಲ ಬಾರಿ ಏನಲ್ಲ. 1999ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಅವರು 2013ರಲ್ಲಿ ಕಾಂಗ್ರೆಸ್ನಿಂದ ಶಾಸಕರಾಗಿದ್ದರು. ಸಚಿವರೂ ಆಗಿದ್ದರು. 2019ರಲ್ಲಿ ಪುನಃ ಬಿಜೆಪಿ ಸೇರಿದ್ದರು. ಲೋಕಸಭೆ ಚುನಾವಣೆಯಲ್ಲಿ ಸೋತರು.
ಈ ವರ್ಷದ ಜುಲೈನಲ್ಲಿ ಎ. ಮಂಜು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಆಗ ಮಾತನಾಡಿದ್ದ ಅವರು, "ಇದು ಉಹಾಪೋಹ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ" ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದರು.
Recommended Video