ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ಜಿಲ್ಲಾ ಪಂಚಾಯಿತಿ ಮೈತ್ರಿ ಮಾತುಕತೆ!
ಬೆಂಗಳೂರು, ಫೆಬ್ರವರಿ 26 : ರಾಜಕೀಯ ಪಕ್ಷಗಳ ನಡುವೆ ಮೈತ್ರಿ ಲೆಕ್ಕಾಚಾರ ಆರಂಭವಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ಪ್ರಾರಂಭ ಮಾಡಿವೆ. ನವದೆಹಲಿಯಲ್ಲಿ ಈ ಮಾತುಕತೆ ನಡೆದಿದ್ದು, ಎರಡೂ ಪಕ್ಷಗಳಿಂದ ಅಂತಿಮ ತೀರ್ಮಾನ ಮಾತ್ರ ಹೊರಬಿದ್ದಿಲ್ಲ.
ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ ಮಂಗಳವಾರ (ಫೆಬ್ರವರಿ 23) ರಂದು ಪ್ರಕಟವಾಗಿದೆ. 11 ಜಿಲ್ಲೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಅಧಿಕಾರದ ಗದ್ದುಗೆ ಏರಲು ಬೇರೆ ಪಕ್ಷಗಳ ಜೊತೆ ಮೈತ್ರಿ ಅನಿವಾರ್ಯವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿವೆ. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
ಗುರುವಾರ ಸಂಜೆ ನವದೆಹಲಿಯಲ್ಲಿ ಕೇಂದ್ರ ಕಾನೂನು ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮೈತ್ರಿ ಕುರಿತು ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ, ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. [ಪಂಚಾಯಿತಿ ಫೈಟ್ : ಜೆಡಿಎಸ್ ಹಿನ್ನಡೆಗೆ ಕಾರಣ ಬಹಿರಂಗ!]
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ 10, ಬಿಜೆಪಿ 7, ಜೆಡಿಎಸ್ 2 ಸ್ಥಾನ ಪಡೆದಿವೆ. 11 ಜಿಲ್ಲೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಇಂತಹ ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಲಿವೆ. ಮೈತ್ರಿ ಮಾತುಕತೆ ವಿವರ ಚಿತ್ರಗಳಲ್ಲಿ...... [ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]
ಮೀಸಲಾತಿ ನಿಗದಿಗೂ ಮೊದಲೇ ಮಾತುಕತೆ
ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟಿಸುವ ಮೊದಲೇ ಮೈತ್ರಿ ಮಾತುಕತೆ ಆರಂಭವಾಗಿದೆ. ಅತಂತ್ರವಾಗಿರುವ 11 ಜಿಲ್ಲಾ ಪಂಚಾಯಿತಿಗಳಲ್ಲಿ ಜೆಡಿಎಸ್ ಜೊತೆ ಸೇರಿ ಅಧಿಕಾರ ಹಿಡಿಯಲು ಬಿಜೆಪಿ ನಿರ್ಧರಿಸಿದೆ.
ಉಭಯ ನಾಯಕರ ಮಾತುಕತೆ
ನವದೆಹಲಿಯಲ್ಲಿ ಗುರುವಾರ ಡಿ.ವಿ.ಸದಾನಂದ ಗೌಡ ಮತ್ತು ಎಚ್.ಡಿ.ದೇವೇಗೌಡ ಅವರು ಮೊದಲ ಸುತ್ತಿನ ಮೈತ್ರಿ ಮಾತುಕತೆ ನಡೆಸಿದ್ದಾರೆ. ಉಭಯ ಪಕ್ಷಗಳು ಮೈತ್ರಿ ಬಗ್ಗೆ ಹೆಚ್ಚು ಒಲವು ವ್ಯಕ್ತಪಡಿಸಿವೆ. ಆದರೆ, ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.
ಕಾಂಗ್ರೆಸ್ ವಿರುದ್ಧ ಹೋರಾಟ
11 ಅತಂತ್ರ ಜಿಲ್ಲಾ ಪಂಚಾಯಿತಿಗಳ ಪೈಕಿ ಕನಿಷ್ಠ 8 ರಲ್ಲಿ ಮೈತ್ರಿ ಮಾಡಿಕೊಂಡರೆ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಉಭಯ ಪಕ್ಷಗಳಿಗೂ ಸಹಾಯಕವಾಗಲಿದೆ. ಒಂದು ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹಿನ್ನಡೆಯಾಗುತ್ತದೆ ಎಂಬುದು ಲೆಕ್ಕಾಚಾರ.
ಸದಾನಂದ ಗೌಡರು ಹೇಳಿದ್ದೇನು?
ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, 'ಜೆಡಿಎಸ್ ಮತ್ತು ಬಿಜೆಪಿ ಸಮಾನ ಮನಸ್ಕ ಪಕ್ಷಗಳು. ಎರಡೂ ಪಕ್ಷಗಳು ಸೇರಿ ರಾಜಕಾರಣ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸುವ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಪಕ್ಷದ ನಾಯಕರ ಜೊತೆ ಈ ಬಗ್ಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ' ಎಂದು ತಿಳಿಸಿದರು.
ದೇವೇಗೌಡರು ಹೇಳಿದ್ದೇನು?
ಸದಾನಂದ ಗೌಡರ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿರುವ ದೇವೇಗೌಡರು, 'ಸದಾನಂದ ಗೌಡರು ಮೈತ್ರಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ನಾನು ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳಲಾಗದು. ಸ್ಥಳೀಯ ಸಂಸ್ಥೆಗಳಲ್ಲಿ ಅಲ್ಲಿನ ಶಾಸಕರು ಮತ್ತು ನಾಯಕರ ತೀರ್ಮಾನವೇ ಅಂತಿಮ. ಕುಮಾರಸ್ವಾಮಿ ಮತ್ತು ಪಕ್ಷದ ಇತರ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ' ಎಂದು ಹೇಳಿದರು.
ಯಾವ ಜಿಲ್ಲೆಗಳಲ್ಲಿ ಮೈತ್ರಿ?
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ತುಮಕೂರು, ಮೈಸೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೆಡಿಎಸ್ ಜೊತೆ ಮೈತ್ರಿ ಅನಿವಾರ್ಯ. ಧಾರವಾಡ, ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ನೆರವು ಸಿಕ್ಕರೆ ಬಿಜೆಪಿ ಅಥವ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು.
ಹೈಕಮಾಂಡ್ ಒಪ್ಪಿಗೆ ಸಿಕ್ಕಿಲ್ಲ
ಮೈತ್ರಿ ಮಾತುಕತೆ ಬಗ್ಗೆ ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದರು. ಆದರೆ, ಪಕ್ಷದ ಹೈಕಮಾಂಡ್ ಮಾತುಕತೆಗೆ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಕಾಂಗ್ರೆಸ್ ನಾಯಕರು ಇನ್ನೂ ಮಾತುಕತೆ ಆರಂಭಿಸಲಿಲ್ಲ. ಅಷ್ಟರಲ್ಲೇ ಬಿಜೆಪಿ ಮೊದಲ ಹೆಜ್ಜೆ ಇಟ್ಟು ಮಾತುಕತೆ ಆರಂಭಿಸಿದೆ.
ಯಾರೊಂದಿಗೆ ಮೈತ್ರಿ?
ಜಿಲ್ಲಾ ಪಂಚಾಯಿತಿ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮಾತನಾಡಿದ್ದರು. ಆದರೆ, ಜೆಡಿಎಸ್ ಯಾವ ಪಕ್ಷದೊಂದಿಗೆ ಕೈ ಜೋಡಿಸಲಿದೆ? ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.