Lok Sabha Election 2024: ಕೊನೆಗೂ ದಳಪತಿಗಳ ಪಾಲಾಯ್ತು ಮಂಡ್ಯ; ಸುಮಲತಾ ಮುಂದಿರುವ ಆಯ್ಕೆಗಳೇನು?
ಬೆಂಗಳೂರು,ಮಾರ್ಚ್ 25: ಮಂಡ್ಯ ಲೋಕಸಭಾ ಕ್ಷೇತ್ರ ಕೊನೆಗೂ ದಳಪತಿಗಳ ಕೈ ಸೇರಿದೆ. ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿತ್ತು. ಮೈತ್ರಿ ಧರ್ಮದಂತೆ ಜೆಡಿಎಸ್ ಕೇಳಿದ್ದ ಮಂಡ್ಯ,ಹಾಸನ ಹಾಗೂ ಕೋಲಾರ ಕ್ಷೇತ್ರವನ್ನ ಬಿಜೆಪಿ ಬಿಟ್ಟುಕೊಟ್ಟಿದೆ.
ಮಂಡ್ಯ ಬಿಟ್ಟು ರಾಜಕೀಯ ಮಾಡಲ್ಲ, ಮಂಡ್ಯ ಬಿಟ್ಟು ಯಾಕೆ ಹೋಗ್ಲಿ, ಬೆಂಗಳೂರು ಉತ್ತರಕ್ಕೂ ಹೋಗಲ್ಲ, ಚಿಕ್ಕಬಳ್ಳಾಪುರಕ್ಕೂ ಹೋಗಲ್ಲ. ನನಗೆ ಮಂಡ್ಯ ಟಿಕೆಟ್ ಸಿಗುತ್ತೆ100% ಅಲ್ಲ 500 % ನಂಬಿಕೆ ಇದೆ ಎಂದು ಭರವಸೆಯಲ್ಲಿದ್ದ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.

2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ಪೈಪೋಟಿ ನಡೆಸಿದ್ರು. ಆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ರು, ಇದೀಗ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ಮೈತ್ರಿ ಭಾಗವಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಲಾಗಿದೆ.
ಕಳೆದ ವಾರವಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಿ ಬಂದ ಸುಮಲತಾ ಅವರು ಮಂಡ್ಯ ಟಿಕೆಟ್ಟ ಇನ್ನೂ ಫೈನಲ್ ಆಗಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ರು. ಈಗಾಗಲೇ ಬಿಜೆಪಿ ಹೈಕಮಾಂಡ್ ಸಮೀಕ್ಷೆಗಳನ್ನ ಆಧರಿಸಿ ಈ ಸಲ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಬಿಜೆಪಿ ನಾಯಕರು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಾರೆ. ಹಾಗಾದ್ರೆ ಸುಮಲತಾ ಮುಂದಿನ ನಡೆ ಏನು? ಅಲ್ಲದೇ ಸುಮಲತಾ ಮುಂದಿರುವ ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಸುಮಲತಾ ಅಂಬರೀಶ್ ಮುಂದಿರುವ ದಾರಿ ಯಾವುದು?
ಮಂಡ್ಯದಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧೆನಾ?
ಮಂಡ್ಯ ಕ್ಷೇತ್ರದಿಂದ ಟಿಕೆಟ್ ಸಿಗುವ ಬಗ್ಗೆ ಶೇಕಡಾ 100 ಅಲ್ಲ 500 ರಷ್ಟು ವಿಶ್ವಾಸವಿದೆ ಎಂದು ಹಾಲಿ ಮಂಡ್ಯ ಸಂಸದೆ ಸುಮಲತಾ ಹೇಳಿದ್ದರು. ಅಲ್ಲದೇ ಮಂಡ್ಯ ಬಿಟ್ಟು ರಾಜಕೀಯ ಮಾಡಲ್ಲ, ಮಂಡ್ಯ ಬಿಟ್ಟು ನಾನು ಯಾಕೆ ಬೆಂಗಳೂರು ಉತ್ತರ ಹಾಗೂ ಚಿಕ್ಕಬಳ್ಳಾಪುರಕ್ಕೆ ಹೋಗಲಿ ಎಂದು ಸುಮಲತಾ ಹೇಳಿದ್ರು. ಹೀಗಾಗಿ ಸುಮಲತಾ ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಮತ್ತೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟು ದಿನ ಮಂಡ್ಯ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ಸುಮಲತಾ ಅಂಬರೀಶ್ ಅವರಿಗೆ ಅತಿಯಾದ ನಂಬಿಕೆಯೇ ಮುಳುವಾಗಿದ್ದು, ಆಪ್ತರ ಜೊತೆಗೆ ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಮಂಡ್ಯದಿಂದ ಸುಮಲತಾ ಪಕ್ಷೇತರರಾಗಿ ನಿಂತ್ರೆ ಕಳೆದ ಸಲ ಸಿಕ್ಕಂತೆ ಸ್ವಾಭಿಮಾನದ ಮತಗಳು ಈ ಸಲ ಸಿಗಲ್ಲ. ಸುಮಲತಾ ಸ್ಪರ್ಧೆ ಮಾಡಿದ್ರು ಗೆಲುವು ಸುಲಭವಲ್ಲ

ರಾಜ್ಯಸಭೆ ಸದಸ್ಯತ್ವ+ ಕೇಂದ್ರದಲ್ಲಿ ಮಂತ್ರಿಸ್ಥಾನ?
ಸುಮಲತಾ ಅವರು ಸ್ವಾಭಿಮಾನದ ಸಂಕೇತದಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ರು, ಇದೀಗ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರ ಜೆಡಿಎಸ್ ನಾಯಕರ ಕೈ ಸೇರಿದೆ. ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಹತ್ತಿರವಾಗಿರುವ ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಸುಮಲತಾ ಅವರು ಹೈಕಮಾಂಡ್ ಮಾತಿನಂತೆ ಸ್ಪರ್ಧೆಯಿಂದ ಹಿಂದೆ ಸರಿದರೇ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯಸಭೆಗೆ ಕಳುಹಿಸುವ ಮೂಲಕ ಮಂತ್ರಿ ಸ್ಥಾನವನ್ನ ನೀಡಬಹುದು ಎಂದು ಕೇಳಲಾಗಿದೆ.
ಒಟ್ನಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಸಂಕೇತವಾಗಿ ಗೆಲುವು ಕಂಡಿದ್ದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಪಟ್ಟು ಹಿಡಿದು ದಳಪತಿಗಳು ಕ್ಷೇತ್ರವನ್ನ ಪಡೆದುಕೊಂಡಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದರೇ ಗೆಲ್ಲುವುದು ಕಷ್ಟ. ಆದರೆ, ಸುಮಲತಾ ಅವರ ಸ್ಪರ್ಧೆಯಿಂದ ಮೈತ್ರಿಯಲ್ಲಿ ಬಿರುಕು ಮೂಡುತ್ತಾ? ಅಥವಾ ಹೈಕಮಾಂಡ್ ಮಾತಿನಂತೆ ಸುಮಲತಾ ಅವರು ಮೈತ್ರಿ ಅಭ್ಯರ್ಥಿಗಳ ಪರ ಪ್ರಕಾರ ನಡೆಸುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications