ರಾಜ್ಯ ವಿಧಾನ ಪರಿಷತ್ನಲ್ಲಿ ಬಹುಮತ ಪಡೆಯಲು ಬಿಜೆಪಿ ಭರ್ಜರಿ ತಯಾರಿ!
ಬೆಂಗಳೂರು, ನ. 07: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ರಾಜ್ಯ ಬಿಜೆಪಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಅಕ್ಷರಶಃ ಹೊಸ ಸವಾಲು ಎದುರಿಸಬೇಕಿದೆ. ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ಗೆ ಇದೇ ಡಿಸೆಂಬರ್ ತಿಂಗಳಿನಲ್ಲಿ ಮಹತ್ವದ ಚುನಾವಣೆ ನಡೆಯಲಿದೆ. ಒಟ್ಟು 20 ಸ್ಥಳೀಯ ಸಂಸ್ಥೆ ಕ್ಷೇತ್ರಗಳಿಂದ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದೆ.
ವಿಧಾನಪರಿಷತ್ ಚುನಾವಣೆ ತಯಾರಿ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು, "ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇದೇ ನವೆಂಬರ್ 19ರಿಂದ ಪ್ರತಿ ಜಿಲ್ಲೆಗೆ ಒಂದರಂತೆ 'ಜನಸ್ವರಾಜ್ ಸಮಾವೇಶ ನಡೆಸಲಾಗುವುದು' ಎಂದು ಹೇಳಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ್ದಾರೆ.
ಕಳೆದ ಬಾರಿ ಈ 25 ಸ್ಥಾನಗಳಲ್ಲಿ ಬಿಜೆಪಿ 7 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಹೀಗಾಗಿ ಈ ಸಲ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಪರಿಷತ್ನಲ್ಲಿ ಬಹುಮತ ಪಡೆಯಲು ತೀವ್ರ ಪ್ರಯತ್ನಗಳನ್ನು ರಾಜ್ಯ ಬಿಜೆಪಿ ನಡೆಸಿದೆ. 'ಜನಸ್ವರಾಜ್ ಸಮಾವೇಶ'ದ ಸಂಪೂರ್ಣ ವಿವರ ಮುಂದಿದೆ.
ಮುಂದಿನ ತಿಂಗಳು ವಿಧಾನಪರಿಷತ್ ಮಹತ್ವದ ಚುನಾವಣೆ!
ರಾಜ್ಯದಲ್ಲಿ ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಬಹುತೇಕ 2020ರ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಈ ಚುನಾವಣೆಗೆ ಪೂರ್ವತಯಾರಿ ನಡೆಯಲಿದೆ. ಗ್ರಾಮ ಪಂಚಾಯತಿ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರ ಸಮಾವೇಶವನ್ನು ಮಾಡಲು ಪಕ್ಷ ತೀರ್ಮಾನಿಸಿದೆ ಎಂದು ಎನ್. ರವಿಕುಮಾರ್ ತಿಳಿಸಿದ್ದಾರೆ.
ಅತಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಕಸರತ್ತು!
ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲು ನವೆಂಬರ್ 19ರಿಂದ 23ರವರೆಗೆ ಈ ಸಮಾವೇಶಗಳನ್ನು ಆಯೋಜಿಸಲಾಗುವುದು. ಒಂದು ದಿನಕ್ಕೆ ಎರಡು ತಂಡ ಸಮಾವೇಶದಲ್ಲಿ ಭಾಗವಹಿಸಲಿದೆ. ಒಂದನೇ ತಂಡ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಇರುತ್ತದೆ. ಎರಡನೇ ತಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ, ಮೂರನೇ ತಂಡವು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಮತ್ತು ನಾಲ್ಕನೇ ತಂಡವು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ರವಿಕುಮಾರ್ ವಿವರಿಸಿದ್ದಾರೆ.
ಒಟ್ಟು ನಾಲ್ಕು ತಂಡಗಳಲ್ಲಿ ಚುನಾವಣೆ ತಯಾರಿ!
ಮೊದಲನೇ ತಂಡವು 19, 20, 21ರಂದು ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಪ್ರವಾಸ ಮಾಡಲಿದೆ. ಇದರ ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಹ ಸಂಚಾಲಕರಾಗಿ ಕೇಶವಪ್ರಸಾದ್ ಇರುತ್ತಾರೆ. ಎರಡನೇ ತಂಡವು ಎನ್. ರವಿಕುಮಾರ್ ಸಂಚಾಲಕತ್ವ ಹೊಂದಿದ್ದು, ರಾಜ್ಯ ಕಾರ್ಯದರ್ಶಿ ಕೆ. ಎಸ್. ನವೀನ್ ಅವರ ಸಹ ಸಂಚಾಲಕತ್ವದಲ್ಲಿ 4 ದಿನಗಳ ಕಾಲ ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ್, ಬಾಗಲಕೋಟೆ, ವಿಜಯಪುರ ಮತ್ತು ಚಿಕ್ಕೋಡಿ, ಬೆಳಗಾವಿಗಳಲ್ಲಿ ಸಂಚರಿಸಲಿದೆ. ಉತ್ತರ ಕನ್ನಡದಿಂದ ಈ ಯಾತ್ರೆ ಆರಂಭವಾಗಲಿದೆ.
ರಾಜ್ಯಾದ್ಯಂತ ತಂಡಗಳ ಪ್ರವಾಸ-ಸಂಘಟನೆ!
ಮೂರನೇ ತಂಡವು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಸಂಚಾಲಕತ್ವ, ರಾಜ್ಯ ಕಾರ್ಯದರ್ಶಿ ವಿನಯ ಬಿದರೆ ಸಹ ಸಂಚಾಲಕತ್ವ ಹೊಂದಿದೆ. ಈ ತಂಡವು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಪ್ರವಾಸ ಮಾಡಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಸಂಚಾಲಕರಾಗಿ, ಮುನಿರಾಜು ಗೌಡ ಅವರು ಸಹ ಸಂಚಾಲಕರಾಗಿರುವ ನಾಲ್ಕನೇ ತಂಡವು ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ 7 ಜಿಲ್ಲೆಗಳನ್ನು ಒಳಗೊಂಡಿದೆ ಎಂದು ಎನ್. ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಹಿಂದಿನ ಬಾರಿ 7 ಸೀಟುಗಳನ್ನು ನಾವು ಗೆದ್ದಿದ್ದೆವು. ಈ ಬಾರಿ ಅತಿ ಹೆಚ್ಚು ಸೀಟು ಗೆಲ್ಲಲು ಪಕ್ಷ ಮುಂದಾಗಿದೆ. ಎಂದರು. ಇದಕ್ಕಾಗಿ ಮುಂಚಿತವಾಗಿ ಸಮಾವೇಶ ನಡೆಸಲಾಗುತ್ತಿದೆ. ಮೊದಲನೇ ಸಮಾವೇಶದ ಆರಂಭದಲ್ಲಿ 4 ತಂಡಗಳು ಒಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷನ ಮನೆಯಲ್ಲಿ ಉಪಾಹಾರ ಮಾಡಿ ಅಲ್ಲಿಂದ ಸಮಾವೇಶಕ್ಕೆ ಹೋಗುವ ಯೋಚನೆ ಮಾಡಿದ್ದೇವೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ ಎಂದು ಎನ್. ರವಿಕುಮಾರ್ ತಿಳಿಸಿದ್ದಾರೆ.