RSS ಒತ್ತಡ, ಮಲೆನಾಡು ಸಚಿವರೊಬ್ಬರ ತಲೆದಂಡ: ಯಾರವರು?
ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಇಂದಿನಿಂದ (ಡಿ 28) ಆರಂಭವಾಗಲಿದೆ. ಬಿಜೆಪಿ ಪಾಲಿಗೆ ಅದೃಷ್ಟದ ನಗರವಾದ ಹುಬ್ಬಳ್ಳಿಯಲ್ಲಿ ಈ ಕಾರ್ಯಕಾರಿಣಿ ನಡೆಯಲಿದೆ. ಕೋವಿಡ್ ಹಿನ್ನಲೆಯಲ್ಲಿ ಆಮಂತ್ರಣ ನೀಡಲಾಗುವ ಮುಖಂಡರ ಸಂಖ್ಯೆಯನ್ನು ಇಳಿಸಲಾಗಿದೆ.
ಬಹಳ ದಿನಗಳಿಂದ ಬಹು ಚರ್ಚಿತ ವಿಷಯವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆಯನ್ನು ನೀಡಿದ್ದಾರೆ. ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಾಗಿ ಅರುಣ್ ಸಿಂಗ್ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ: ಮುಂದಿನ ದಿನಗಳ ಮುನ್ಸೂಚನೆ
ಯಡಿಯೂರಪ್ಪನವರ ವಿಚಾರದಲ್ಲೂ ಅರುಣ್ ಸಿಂಗ್ ಇದೇ ಮಾತನ್ನು ಹೇಳಿದ್ದರು. ಆದರೆ, ನಡೆದದ್ದು ಬೇರೆ ರಾಜಕೀಯ ವಿದ್ಯಮಾನ ಎನ್ನುವುದು ಗೊತ್ತಿರುವ ವಿಚಾರ. ಹಾಗಾಗಿ, ಬೊಮ್ಮಾಯಿ ಬದಲಾವಣೆ ಇಲ್ಲ ಎನ್ನುವ ಸುದ್ದಿಗೆ ಸದ್ಯದ ಮಟ್ಟಿಗೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆ ಕಮ್ಮಿ.
ಈ ನಡುವೆ, ಸಂಕ್ರಾಂತಿಯ ಆಸುಪಾಸಿನಲ್ಲಿ ಸಚಿವ ಸಂಪುಟ ವಿಸ್ತರಣೆ/ಪುನರ್ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಸಂಪುಟ ವಿಸ್ತರಣೆಯಾಗಲಿ ಬಿಡಲಿ, ಮಲೆನಾಡು ಮೂಲದ ಒಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಲೇ ಬೇಕು ಎನ್ನುವ ಒತ್ತಡವನ್ನು ಸಂಘ ಪರಿವಾರ ಹಾಕಿದೆ ಎಂದು ಹೇಳಲಾಗುತ್ತಿದೆ. ಸಂಪುಟದಲ್ಲಿ ಇರುವ ಮಲೆನಾಡು ಮೂಲದ ಸಚಿವರುಗಳು ಯಾರು?
ಮೂವರು ಸಚಿವರನ್ನು ಕೈಬಿಡುವ ನಿರ್ಧಾರಕ್ಕೆ ಬಿಜೆಪಿ ಬರುವ ಸಾಧ್ಯತೆ
ಸದ್ಯ ಖಾಲಿ ಇರುವ ನಾಲ್ಕು ಸಚಿವ ಸ್ಥಾನವನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ, ಪಕ್ಷದ ಎಚ್ಚರಿಕೆಯ ನಡುವೆಯೂ ಮುಜುಗರ ತರುತ್ತಿರುವ ಮೂವರು ಸಚಿವರನ್ನು ಕೈಬಿಡುವ ನಿರ್ಧಾರಕ್ಕೆ ಬಿಜೆಪಿ ಬರುವ ಸಾಧ್ಯತೆಯಿದೆ. ಪಕ್ಷದ ಕಷ್ಟದ ಸಮಯದಲ್ಲಿ ಟ್ರಬಲ್ ಶೂಟರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಚಿವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಇಂತಹ ಸಚಿವರಿಗೆ ಆಯಕಟ್ಟಿನ ಸಚಿವ ಸ್ಥಾನವೂ ಸಿಗುವ ಸಾಧ್ಯತೆಯಿಲ್ಲದಿಲ್ಲ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ
ಇತ್ತೀಚೆಗೆ ನಡೆದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಪರವಾಗಿ ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡದ ಸಚಿವರ ತಲೆದಂಡವಾಗುವ ಸಾಧ್ಯತೆಯಿದೆ. ಹಿರಿತನ ಮತ್ತು ಪಕ್ಷ ನಿಯತ್ತನ್ನು ಈ ಬಾರಿ ಪರಿಗಣಿಸಲಾಗುವುದು. ಆ ಮೂಲಕ, ಕಾರ್ಯಕರ್ತರಲ್ಲೂ ಹುಮ್ಮಸ್ಸನ್ನು ತರುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ, ವಲಸೆ ಬಂದವರ ಮೇಲೂ ವಿಶೇಷ ನಿಗಾ ಇಡಲಾಗುತ್ತಿದೆ.
ವಿರೋಧ ಪಕ್ಷಗಳ ಟೀಕೆಗೆ ಸಮರ್ಥವಾಗಿ ತಿರುಗೇಟು ನೀಡುವ ಸಚಿವರ ಕೊರತೆ
ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಲೆನಾಡು ಮೂಲದ ಒಬ್ಬರು ಹಿರಿಯ ಸಚಿವರನ್ನು ಯಾವ ಕಾರಣಕ್ಕೂ ಮುಂದುವರಿಸಬಾರದು ಎನ್ನುವ ಒತ್ತಡವನ್ನು ಸತತವಾಗಿ ಹಾಕುತ್ತಿದೆ ಎನ್ನುವ ಮಾಹಿತಿಯಿದೆ. ಇವರು ಮೂಲ ನಿವಾಸಿಯಾಗಿರುವುದು ಇಲ್ಲಿ ಗಮನಿಸಬೇಕಾದ ವಿಚಾರ. ಆದರೆ, ಆ ಸಚಿವರು ಯಾರು ಎನ್ನುವ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಿರೋಧ ಪಕ್ಷಗಳ ಟೀಕೆಗೆ ಸಮರ್ಥವಾಗಿ ತಿರುಗೇಟು ನೀಡುವ ಸಚಿವರ ಕೊರತೆ ಹೈಕಮಾಂಡಿಗೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
RSS ಒತ್ತಡ, ಮಲೆನಾಡು ಸಚಿವರೊಬ್ಬರ ತಲೆದಂಡ: ಯಾರವರು?
ಮಲೆನಾಡು ಭಾಗದ ಮೂಲ ಸಚಿವರು ಯಾರೆಂದರೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ. ಇದರಲ್ಲಿ ಆರಗ ಜ್ಞಾನೇಂದ್ರ ಅವರು ಇತ್ತೀಚಿನ ಸಂಪುಟ ವಿಸ್ತರಣೆಯ ವೇಳೆ ಸ್ಥಾನ ಪಡೆದಿದ್ದರಿಂದ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಕಮ್ಮಿ. ಕಳೆದ ಸಂಪುಟ ವಿಸ್ತರಣೆಯ ವೇಳೆ ಈಶ್ವರಪ್ಪನವರ ಹೆಸರು ಕಡೇ ಗಳಿಗೆಯಲ್ಲಿ ಸೇರ್ಪಡೆಯಾಗಿತ್ತು. ಜೊತೆಗೆ, ಈಶ್ವರಪ್ಪನವರು ವಿವಾದಕಾರೀ ಹೇಳಿಕೆ ನೀಡುವುದನ್ನು ಮುಂದವರಿಸಿದ್ದಾರೆ. ಹಾಗಾಗಿ, RSS ಒತ್ತಡ ಹಾಕುತ್ತಿರುವ ಸಚಿವರು ಈಶ್ವರಪ್ಪನವರಾ ಎನ್ನುವ ಪ್ರಶ್ನೆ ಎದುರಾಗಿದೆ.
Recommended Video