ದೆಹಲಿ ಸೇರಿದ ವಿಜಯೇಂದ್ರ-ಯತ್ನಾಳ್, ಇಂದೇ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಘೋಷಣೆ?
ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ವಿಚಾರ ಸದ್ಯ ಕರ್ನಾಟಕದಿಂದ ದೆಹಲಿ ಅಂಗಳಕ್ಕೆ ತಲುಪಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಣ ಈಗಾಗಲೇ ದೆಹಲಿ ತಲುಪಿದೆ. ಇತ್ತ ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಕೂಡ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಹೈಕಮಾಂಡ್ ಕರೆದ ಕೂಡಲೇ ವಿಜಯೇಂದ್ರ ಎಲ್ಲ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿ ದೆಹಲಿಗೆ ತೆರಳಿದ್ದು, ಇಂದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಲಿದೆ.
ಯತ್ನಾಳ್ ಬಣದ ನಾಯಕರು ಹಾಗೂ ವಿಜಯೇಂದ್ರ ಅವರು ಇಬ್ಬರೂ ಸಹ ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹಾಗಾಗಿ ಹೈಕಮಾಂಡ್ ಈ ಎರಡೂ ಬಣದ ನಾಯಕರನ್ನು ಕೂರಿಸಿ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಅಲ್ಲದೆ ಇಬ್ಬರೂ ನಾಯಕರನ್ನು ಮುಖಾಮುಖಿಯಾಗಿ ಕೂರಿಸಿಕೊಂಡು ಗೊಂದಲಗಳನ್ನು ಪರಿಹರಿಸಿ ಒಗ್ಗಟ್ಟಿನ ಮಂತ್ರ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ನಾಯಕರು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಕರ್ನಾಟಕ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಬಣ ಬಡಿದಾಟ, ಆಂತರಿಕ ಕಚ್ಚಾಟ, ರಾಜ್ಯಾಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಏಕೆಂದರೆ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ಕಾರಣ ಅವರ ಚಿತ್ತವೆಲ್ಲ ದೆಹಲಿ ಕಡೆಗೆ ಮಾತ್ರವೇ ಇತ್ತಿ. ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ ಹೈಮಾಂಡ್ ನಾಯಕರು ಕರ್ನಾಟಕದ ಕಡೆಗೆ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಬಣದ ನಾಯಕರು ಕಳೆದ ವಾರವೂ ದೆಹಲಿಗೆ ತೆರಳಿ ವಿಜಯೇಂದ್ರ ಅವರ ವಿರುದ್ಧ ತೊಡೆ ತಟ್ಟಿದ್ದರು. ಅಲ್ಲದೆ ಕೆಲ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದು, ಅಲ್ಲಿಂದ ನಮಗೆ ಉತ್ತಮ ಸ್ಪಂದನೆ ಸಿಕ್ಕಿದೆ, ಕಾದು ನೋಡಿ ಎಂದು ಗುಟ್ಟು ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಯತ್ನಾಳ್ ಅವರ ಬಣ ದೆಹಲಿಗೆ ತೆರಳಿದೆ.

ಕೇಂದ್ರ ಸಚಿವ ವಿ.ಸೋಮಣ್ಣ ಅವರ ಗೃಹಪ್ರವೇಶಕ್ಕೆ ಮತ್ತೆ ದೆಹಲಿಗೆ ಹೋಗುತ್ತಿದ್ದು, ಪಕ್ಷದ ವರಿಷ್ಠರನ್ನು ಕೂಡ ಭೇಟಿ ಮಾಡುತ್ತೇವೆ. ಆದರೆ ಹೈಕಮಾಂಡ್ ನಾಯಕರು ಸಿಗುತ್ತಾರೋ ಇಲ್ಲವೋ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ರಾಜ್ಯ ಬಿಜೆಪಿಯನ್ನು ಬಲಪಡಿಸಲು ಹೈಕಮಾಂಡ್ ನಾಯಕರು ಗಂಭೀರ ಚಿಂತನೆ ನಡೆಸಿದ್ದು, ಈ ಕಾರಣದಿಂದಲೇ ವಿಜಯೇಂದ್ರ ಅವರನ್ನೂ ದೆಹಲಿಗೆ ಕರೆಸಿಕೊಂಡಿದೆ ಎನ್ನಲಾಗಿದೆ. ಯತ್ನಾಳ್ ಬಣ ಕೂಡ ದೆಹಲಿಯಲ್ಲೇ ಇರುವುದರಿಂದ ಅವರನ್ನೂ ಹೈಕಮಾಂಡರ್ ನಾಯಕರು ಕರೆಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ವಿಜಯೇಂದ್ರ ಹಾಗೂ ಯತ್ನಾಳ್ ಅವರು ಇಬ್ಬರೂ ರಾಜ್ಯಾಧ್ಯಕ್ಷ ಹುದ್ದೆಗೆ ಕಣಕ್ಕಿಳಿದಿದ್ದಾರೆ. ಈ ವಿಚಾರದ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾದರೆ ಈ ರೀತಿಯ ಕಚ್ಚಾಟಗಳು, ವೈಮನಸ್ಸುಗಳು ಇರಬಾರದು. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬುದ್ಧಿ ಹೇಳಬಹುದು. ಅಲ್ಲದೆ ವಿಜಯೇಂದ್ರ ಬಗ್ಗೆ ಹಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿ, ಹೊಸ ರಾಜ್ಯಾಧ್ಯಕ್ಷರನ್ನು ಘೋಷಿಸುವ ಸಾಧ್ಯತೆಯೂ ಇದೆ.












Click it and Unblock the Notifications