ಪ್ರೇಮ ಬಾಧಿತ ರಾಮದಾಸ್ ಗೆ ಮತ್ತೊಂದು ಸಂಕಟ
ಮೈಸೂರು, ಮಾರ್ಚ್ 4: ಪ್ರೇಮಬಾಧಿತ ಮಾಜಿ ಬಿಜೆಪಿ ಮಾಜಿ ಸಚಿವ, ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಸ್ ಎ ರಾಮದಾಸ್ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ. ಮೈಸೂರು ಜನತೆ ಚಾಮುಂಡೇಶ್ವರಿ ಬೆಟ್ಟದ ಕೆಳಗೆ ಕುಳಿತು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಮೈಸೂರು ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ರಾಮದಾಸ್ ಹತೆಗೆ ಅವರ ಸೋದರನ ವಿರುದ್ಧವೂ ಕಾನೂನು ಅಸ್ತ್ರ ಝಳಪಿಸಿದ್ದಾರೆ.
ರಾಮದಾಸ್ ಮತ್ತು ಅವರ ಸೋದರ ಶ್ರೀಕಾಂತ್ ದಾಸ್ ಒಡೆತನದ ಇಎಸ್ಎಸ್ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಇಎಸ್ಎಸ್ ಇನ್ ಫ್ರಾಸ್ಟ್ರಕ್ಚರ್ ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳನ್ನು ಒದಗಿಸುವಂತೆ ಆಯುಕ್ತೆ ಜಯಂತಿ ಆದೇಶ ಹೊರಡಿಸಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರದ ಉಮಾರಾಣಿ ಎಂಬುವರು ರಾಮದಾಸ್ ಮತ್ತು ಅವರ ಸೋದರ ಶ್ರೀಕಾಂತ್ ಒಡೆತನದ ಕಂಪನಿಗಳಲ್ಲಿ ನಡೆದಿರುವ ವ್ಯವಹಾರಗಳು ಕಾನೂನು ಬದ್ಧವಾಗಿ ಇಲ್ಲ. ಇದರಲ್ಲಿ ಭಾರಿ ಮೊತ್ತದಲ್ಲಿ ಕಪ್ಪು ಹಣ ಬಳಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶಿಖಾ ಹಾಗೂ ಪ್ರಾದೇಶಿಕ ಆಯುಕ್ತೆ ಜಯಂತಿ ಅವರಿಗೆ ಪತ್ರ ಬರೆದು ದೂಡು ನೀಡಿದ್ದರು.
ಹಾಗಾಗಿ, ಪ್ರಾದೇಶಿಕ ಆಯುಕ್ತರು ತನಿಖೆ ಜರುಗಿಸುವ ಸಲುವಾಗಿ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಇಎಸ್ಎಸ್ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಮದಾಸ್ ಒಡೆತನದ ಕಂಪನಿಯಲ್ಲಿ 2600 ಎಕರೆ ಭೂಮಿ ಖರೀದಿಸಿ 25 ಸಾವಿರಕ್ಕೂ ಹೆಚ್ಚು ವಿವಿಧ ವಿಸ್ತೀರ್ಣದ ನಿವೇಶನಗಳನ್ನು ಮಾರಾಟ ಮಾಡಲಾಗಿದೆ.
ನಿವೇಶನಗಳ ವಿಂಗಡಣೆ, ಹಂಚಿಕೆ ಮತ್ತು ಮಾರಾಟದಲ್ಲಿ ಕರ್ನಾಟಕ ಭೂ ಕಂದಾಯ ಹಾಗೂ ಭೂ ಸುಧಾರಣಾ ಅಧಿನಿಯಮಗಳ ಉಲ್ಲಂಘನೆಯಾಗಿದೆ ಎನ್ನುವುದು ದೂರಿನ ಸಾರಾಂಶವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆರ್ಥಿಕ ವಹಿವಾಟಿನ ದಾಖಲೆ ಒದಗಿಸಲು ಮೈಸೂರು ಜಿಲ್ಲಾಧಿಕಾರಿ ಕಚೇರಿಗೂ ಪ್ರಾದೇಶಿಕ ಆಯುಕ್ತರು ಪತ್ರ ಬರೆದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications