'ಗೋಮಾಂಸ ವಿಚಾರದಲ್ಲಿ ಬಿಜೆಪಿ ಸಮಾಜ ಒಡೆಯುತ್ತಿದೆ'
ಬೆಂಗಳೂರು, ನವೆಂಬರ್ 04 : 'ರಾಜ್ಯ ಬಿಜೆಪಿ ನಾಯಕರು ಗೋಮಾಂಸದ ವಿಚಾರವನ್ನು ದೊಡ್ಡದು ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಬಿಜೆಪಿಯವರು ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಧರ್ಮದ ಬಗ್ಗೆ ಅವರು ಸಹಿಷ್ಣುಗಳಾಗಿಲ್ಲ' ಎಂದು ದೂರಿದರು. ['ಸಿದ್ದರಾಮಯ್ಯ ಒಂದು ಸಮುದಾಯದ ಓಲೈಕೆ ಮಾಡುತ್ತಿದ್ದಾರೆ']

ಗೋಮಾಂಸದ ಕುರಿತಾಗಿ ತಾವು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ ಅವರು, 'ಗೋಮಾಂಸ ಇಲ್ಲಿವರೆಗೆ ತಿಂದಿಲ್ಲ. ತಿನ್ನಬೇಕು ಎಂದು ಅನಿಸಿದರೆ ತಿನ್ನುತ್ತೇನೆ. ಕೇಳುವುದಕ್ಕೆ ಇವರು ಯಾರು? ಎಂದು ಕೇಳಿದ್ದೆ. ಇದರಲ್ಲಿ ತಪ್ಪೇನಿದೆ. ಬೇರೆ ಪ್ರಾಣಿಗಳ ಮಾಂಸ ತಿನ್ನುವುದಿಲ್ಲವೇ?' ಎಂದು ಪ್ರಶ್ನಿಸಿದರು. ['ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ']
'ಆಹಾರ ಪದ್ಧತಿ ಅವರವರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಹೀಗಿರುವಾಗ ಈ ವಿಚಾರದಲ್ಲಿ ಮೂಗುತೂರಿಸಿ ಮತ್ತೊಬ್ಬರ ಹಕ್ಕುಗಳ ಮೇಲೆ ದಾಳಿ ಮಾಡುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿಯಾದ ಕೆಲಸ' ಎಂದು ಸಿದ್ದರಾಮಯ್ಯ ಹೇಳಿದರು. [ಸಿಎಂ ರುಂಡ ಚೆಂಡಾಡುತ್ತೇನೆ ಎಂದ ಬಿಜೆಪಿ ಮುಖಂಡ ಬಂಧನ]
ಸಿದ್ದರಾಮಯ್ಯ ಏನು ಹೇಳಿದ್ದರು? : ಬೆಂಗಳೂರಿನ ಟೌನ್ ಹಾಲ್ನಲ್ಲಿ ಅಕ್ಟೋಬರ್ 29ರಂದು ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು 'ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ. ಇದನ್ನು ತಡೆಯಲು ನೀವು ಯಾರು?. ನಾನು ಇದುವರೆಗೆ ಗೋಮಾಂಸ ತಿಂದಿಲ್ಲ. ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ' ಎಂದು ಹೇಳಿದ್ದರು.












Click it and Unblock the Notifications