ರಾಜ್ಯ ಮುಖಂಡರನ್ನು ಬಡಿದೆಬ್ಬಿಸಲು ಬಿಜೆಪಿ ವರಿಷ್ಠರಿಗೆ ಸದಾವಕಾಶ!
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಆಡಳಿತ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡುವ ಹತ್ತು ಹಲವಾರು ವಿದ್ಯಮಾನಗಳು ನಡೆದರೂ, ರಾಜ್ಯ ಬಿಜೆಪಿ ಮುಖಂಡರು ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಜನರ ಮುಂದೆ ತೆರೆದಿಡುವಲ್ಲಿ ವಿಫಲರಾಗಿದ್ದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಇದ್ದ ಬಣ ರಾಜಕೀಯ, ಅಧಿಕಾರ ಇಲ್ಲದ ಮೇಲೂ ಮುಂದುವರಿದಿದ್ದರಿಂದ ಹಲವು ಉಪಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಬೇಕಾಯಿತು. ತಮ್ಮ ಪಕ್ಷದಲ್ಲೇ ಹಲವು ತೂತುಗಳಿದ್ದರೂ, ಬಿಜೆಪಿ ಗುಂಪುಗಾರಿಕೆಯ ಲಾಭ ಪಡೆದುಕೊಂಡಿದ್ದು ಮಾತ್ರ ಕುಮಾರಸ್ವಾಮಿ. (ಚುನಾವಣೆ ಪರ್ವ: ಮೌನಕ್ಕೆ ಶರಣಾದರೆ ಬಿಎಸ್ವೈ)
ಈಗ ಇದಕ್ಕೆಲ್ಲಾ ಪರಿಹಾರ ಸೂಚಿಸುವ ಸದಾವಕಾಶ ಬಿಜೆಪಿ ವರಿಷ್ಠರ ಮುಂದಿದೆ. ಅದು ಮಂಗಳವಾರದಿಂದ (ಫೆ 23) ದೆಹಲಿಯಲ್ಲಿ ಆರಂಭವಾಗಲಿರುವ ಪಕ್ಷದ ಕೋರ್ ಕಮಿಟಿ ಸಭೆ. ರಾಜ್ಯ ಮುಖಂಡರನ್ನು ಬಡಿದೆಬ್ಬಿಸಲು ಅಮಿತ್ ಶಾ ಸೇರಿದಂತೆ ಬಿಜೆಪಿಯ ಕೇಂದ್ರದ ಹಿರಿಯ ಮುಖಂಡರಿಗೆ ಒಳ್ಳೆ ವೇದಿಕೆ ಒದಗಿ ಬಂದಿದೆ.
ರಾಜ್ಯ ಬಿಜೆಪಿಯ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಬೇಕು ಎನ್ನುವ ಫರ್ಮಾನು ಬಂದಿದೆ. ಹೆಬ್ಬಾಳ ಸೇರಿದಂತೆ ಉಪಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶದ ಬಗ್ಗೆ ಮಾತುಕತೆ ನಡೆಯಬಹುದು, ಇದಕ್ಕಿಂತ ಪ್ರಮುಖವಾಗಿ ರಾಜ್ಯಾಧ್ಯಕ್ಷರ ವಿಚಾರದಲ್ಲೂ ಚರ್ಚೆ ನಡೆಯಬಹುದು ಎಂದು ಸಂಸದ ಸದಾನಂದ ಗೌಡ ಹಿಂಟ್ ನೀಡಿದ್ದಾರೆ. (ಬಿಎಸ್ವೈಗೆ ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಖಚಿತ)
ರಾಜ್ಯ ರಾಜಕೀಯದ ಪ್ರಭಾವಿ ಮುಖಂಡ ಮಾಜಿ ಸಿಎಂ ಯಡಿಯೂರಪ್ಪ, ತನ್ನ ಮೇಲಿನ ಒಂದೊಂದು ಕೇಸ್ ಅನೂರ್ಜಿತಗೊಳ್ಳುತ್ತಿದ್ದಂತೇ ಮತ್ತೆ ಹುಮ್ಮಸ್ಸಿನಿಂದ ರಾಜ್ಯ ಪ್ರವಾಸ ಮಾಡಲಾರಂಭಿಸಿದ್ದಾರೆ. ಈ ವಯಸ್ಸಿನಲ್ಲೂ ಬಿರುಗಾಳಿ ವೇಗದಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.
ರಾಜ್ಯಾಧ್ಯಕ್ಷ ಹುದ್ದೆಗೆ ಅವರನ್ನು ಬಿಟ್ಟು, ಇವರನ್ನು ಬಿಟ್ಟು, ಬೇರೊಬ್ಬರು? ಮುಂದಿನ ಸ್ಲೈಡ್ ಕ್ಲಿಕ್ಕಿಸಿ..
ತನ್ನ ಕಾರ್ಯಶೈಲಿಯನ್ನು ಬದಲಾಯಿಸಿದ ಬಿಎಸ್ವೈ
ಪ್ರಮುಖವಾಗಿ ಯಡಿಯೂರಪ್ಪ ತನ್ನ ಕಾರ್ಯಶೈಲಿಯನ್ನೇ ಇತ್ತೀಚಿನ ದಿನದಲ್ಲಿ ಬದಲಾಯಿಸಿ ಕೊಂಡಿದ್ದಾರೆ. 'ಮಾತು ಕಮ್ಮಿ, ಕೆಲಸ ಜಾಸ್ತಿ'ಎನ್ನುವ ಹಾಗೇ ಯಾವುದೇ ವಿವಾದಕಾರಿ ಹೇಳಿಕೆಯಿಂದ ದೂರವಾಗಿರುವ ಯಡಿಯೂರಪ್ಪ, ಪ್ರಮುಖವಾಗಿ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬೇರನ್ನು ಮತ್ತಷ್ಟು ಸುದೃಢ ಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಬಿಎಸ್ವೈ ಹಿಂದೆ ದಂಬಾಲು ಬಿದ್ದ ಸ್ಥಳೀಯ ಮುಖಂಡರು
ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯ ಪ್ರಚಾರಕ್ಕೆ ಬರುವಂತೆ ಸ್ಥಳೀಯ ಮುಖಂಡರು ಯಡಿಯೂರಪ್ಪನವರಿಗೆ ದಂಬಾಲು ಬೀಳುತ್ತಿದ್ದದ್ದು, ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಸ್ವಪಕ್ಷೀಯ ಮುಖಂಡರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು, ಅಷ್ಟರ ಮಟ್ಟಿಗಿತ್ತು ಬಿಎಸ್ವೈ ಜನಪ್ರಿಯತೆ.
ಎಚ್ಚೆತ್ತುಕೊಂಡ ಕಾಂಗ್ರೆಸ್?
ಯಡಿಯೂರಪ್ಪನವರಿಗೆ ಸಿಗುತ್ತಿರುವ ವ್ಯಾಪಕ ಜನಬೆಂಬಲದಿಂದ ಎಚ್ಚೆತ್ತಿರುವ ಕಾಂಗ್ರೆಸ್, ಬಿಎಸ್ವೈ ಅವರನ್ನು ಇನ್ನಷ್ಟು ಕೇಸಿನಲ್ಲಿ ತಗಲಾಯಿಸುವ ಸಾಧ್ಯತೆ ಇಲ್ಲದಿಲ್ಲ. ಯಡಿಯೂರಪ್ಪನವರನ್ನು ಮತ್ತೆ ಮೂಲೆಗುಂಪು ಮಾಡಲು ಹಳೇ ಕೇಸುಗಳನ್ನು ಕೆದಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯಾಧಕ್ಷ ಹುದ್ದೆಗೆ ಪ್ರಮುಖವಾಗಿ ಮೂವರು
ಇನ್ನೇನು ಕೆಲವು ದಿನದಲ್ಲಿ ರಾಜ್ಯಧ್ಯಕ್ಷ ಪ್ರಲ್ಹಾದ್ ಜೋಷಿಯವರ ಅಧಿಕಾರದ ಅವಧಿ ಮುಕ್ತಾಯಗೊಳ್ಳಲಿದೆ. ಮತ್ತೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಅವಕಾಶವಿದ್ದರೂ, ಬಿಜೆಪಿ ವರಿಷ್ಠರು ಹೊಸ ಸಾರಥಿಯನ್ನು ನೇಮಿಸುವುದು ಬಹುತೇಕ ಖಚಿತ. ಸಿ ಟಿ ರವಿ, ಆರ್ ಅಶೋಕ್ ಮತ್ತು ಯಡಿಯೂರಪ್ಪ ಈ ಹುದ್ದೆಗೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳು.
ಅವರನ್ನು ಬಿಟ್ಟು, ಇವರನ್ನು ಬಿಟ್ಟು, ಬೇರೊಬ್ಬರು
ಆದರೆ, ಈ ಮೂವರ ಹೆಸರು ಬಿಟ್ಟು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಸರೂ ಕೇಳಿಬರುತ್ತಿದೆ. ರಾಜ್ಯ ಬಿಜೆಪಿ ಮುಖಂಡರ ಅಭಿಪ್ರಾಯ ಪಡೆದು, ಅಮಿತ್ ಶಾ ಈ ವಿಚಾರವನ್ನು ಆರ್ ಎಸ್ ಎಸ್ ಮುಖಂಡರು, ಪ್ರಧಾನಿ ಮತ್ತು ಪಕ್ಷದ ಹಿರಿಯರ ಜೊತೆ ಚರ್ಚಿಸ ಬೇಕಾಗಿರುವುದರಿಂದ ಕಟೀಲ್ ಹೆಸರು ಅಂತಿಮವಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಯಡಿಯೂರಪ್ಪ
ಒಂದು ವೇಳೆ, ಬಿಎಸ್ವೈ ಬಿಟ್ಟು ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಯಡಿಯೂರಪ್ಪನವರಿಗೆ ಮುಂಬರುವ ವಿಧಾನಸಭಾ ಚುನಾವಣೆಯ ಸಂಪೂರ್ಣ ಉಸ್ತುವಾರಿ ವಹಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಜೊತೆಗೆ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆಯೂ ದಟ್ಟವಾಗಿದೆ ಎನ್ನುವುದು ಬಿಜೆಪಿ ವಲಯದಲ್ಲಿ ಸದ್ಯ ಕೇಳಿ ಬರುತ್ತಿರುವ ಸುದ್ದಿ.