ಕಾಂಗ್ರೆಸ್ಸಿನ ಬಣ ರಾಜಕೀಯ, ಬಿಜೆಪಿಯ ಸಂಪುಟ ವಿಸ್ತರಣೆ ಕಿರಿಕಿರಿ: ಲಾಭ ಕುಮಾರಣ್ಣನಿಗೆ?
Recommended Video
ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಕಾಂಗ್ರೆಸ್ ಪಕ್ಷದ ಮುಖಂಡರು ನಾಚಿಸುವಂತೆ, ಬಿಜೆಪಿ ವಿರುದ್ದ ತಿರುಗಿಬೀಳುತ್ತಿದ್ದಾರೆ.
ಬಿಜೆಪಿ ವಿರುದ್ದ ಟೀಕಾಪ್ರಹಾರ ನಡೆಸಲು ಸಿಕ್ಕ ಅವಕಾಶಗಳನ್ನೆಲ್ಲಾ ಒಂದಿಂಚೂ ಬಿಡದೇ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ವಿರುದ್ದ, ಕುಮಾರಸ್ವಾಮಿ ಅಕ್ಷರಸಃ ಮುಗಿಬೀಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಬಗ್ಗೆ ಬಹಿರಂಗವಾಗಿ ಅಷ್ಟೇನೂ ಆಕ್ರೋಶ ವ್ಯಕ್ತಪಡಿಸದ ಕುಮಾರಸ್ವಾಮಿಯವರ ಬದಲಾದ ಅಗ್ರೆಸ್ಸೀವ್ ರಾಜಕೀಯದ ಹಿಂದಿನ ಕಾರ್ಯತಂತ್ರ ಏನಿರಬಹುದು ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಜೆಪಿ ಆಡಳಿತ ಪಕ್ಷವಾಗಿದ್ದರೂ, ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿದ್ದರೂ, ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗೊತ್ತಿರುವ ವಿಚಾರ. ಇಂತಹ ಸಮಯದಲ್ಲಿ, ಕಾಂಗ್ರೆಸ್ಸಿನ ಮುಖಂಡರು ಪ್ರಮುಖವಾಗಿ ಮಾಡಬೇಕಾಗಿರುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಹೊರತು ಪಡಿಸಿದರೆ ಬೇರೆ ಯಾರೂ ಅಗ್ರೆಸ್ಸೀವ್ ಇಲ್ಲ
ಕಾಂಗ್ರೆಸ್ಸಿನಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ ಹೊರತು ಪಡಿಸಿದರೆ ಬೇರೆ ಯಾವ ಮುಖಂಡರೂ, ಬಿಜೆಪಿ ವಿರುದ್ದ ತಿರುಗಿಬೀಳುವ ಕೆಲಸವನ್ನು ಕಾಟಾಚಾರಕ್ಕೆ ಮಾತ್ರ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟ. ಕಾರಣ, ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಒಂದೆಡೆಯಾದರೆ, ಕೆಪಿಸಿಸಿ ಅಧ್ಯಕ್ಷ ಆದಿಯಾಗಿ, ಹಲವು ಹುದ್ದೆಗಳಿಗೆ ಆಯ್ಕೆಯಲ್ಲಿ ಆಗುತ್ತಿರುವ ವಿಳಂಬ.

ಬಿಜೆಪಿಗೆ ಸಚಿವ ಸಂಪುಟ ವಿಸ್ತರಣೆಯ ಚಿಂತೆ
ಇನ್ನು, ಈ ಕಡೆ, ಬಿಜೆಪಿಗೆ ಸಚಿವ ಸಂಪುಟ ವಿಸ್ತರಣೆಯ ಚಿಂತೆ. ಹಲವು ಆಂತರಿಕ ಕಾರಣಗಳಿಂದ ಈ ಪ್ರಕ್ರಿಯೆ ಮುಗಿಸಲು ಸಾಧ್ಯವಾಗುತ್ತಿಲ್ಲ. ಇದು, ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ, ಮೂಲ ಬಿಜೆಪಿ ಶಾಸಕರ ಸಿಟ್ಟು ಹೊರಬೀಳಬಹುದು ಎನ್ನುವ ಆತಂಕ. ಜೊತೆಗೆ, ಪರಾಭವಗೊಂಡಿರುವ ಅನರ್ಹ ಶಾಸಕರ ಒತ್ತಡ.

ಮೋದಿಯವರ ಪರೀಕ್ಷಾ ಪೇ ಚರ್ಚಾ
ಮೋದಿಯವರ ಪರೀಕ್ಷಾ ಪೇ ಚರ್ಚಾ, ನೆರೆ ಪರಿಹಾರ, ರೈತರ ಸಮಸ್ಯೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು, ಕುಮಾರಸ್ವಾಮಿ, ಬಿಜೆಪಿ ವಿರುದ್ದ ಪ್ರತೀದಿನ ತಿರುಗಿಬೀಳುತ್ತಿದ್ದಾರೆ. ಇದರ ಜೊತೆಗೆ, ಪೌರತ್ವ ತಿದ್ದುಪಡಿ ಮಸೂದೆ, ಧರ್ಮ, ಸಮಾಜ, ಜಾತಿ ವಿಚಾರವನ್ನು ಮುಂದಿಟ್ಟುಕೊಂಡು, ಎಚ್ಡಿಕೆ, ಬಿಜೆಪಿಯನ್ನು ಬೆಂಡೆತ್ತುತ್ತಿದ್ದಾರೆ.

ಎಚ್ಡಿಕೆಗೆ ಕೊಲೆ ಬೆದರಿಕೆ ಪತ್ರ
ಇವೆಲ್ಲದರ ನಡುವೆ, ಕೊಲೆ ಬೆದರಿಕೆ ಪತ್ರ ಬಂದಿರುವುದು ಬಿಜೆಪಿ ಮತ್ತು ಸಂಘ ಪರಿವಾರದ ತಿರುಗಿ ಬೀಳಲು ಕುಮಾರಸ್ವಾಮಿಗೆ ಇನ್ನೊಂದು ಸರಕು ಸಿಕ್ಕಂತಾಗಿದೆ. ಯಾವುದೇ ಪಕ್ಷವಿರಲಿ, ಯಾವುದೇ ಮುಖಂಡರು ಇರಲಿ, ಅವರ ವಿರುದ್ದ ಏನಾದರೂ ಒಂದನ್ನು ಇಟ್ಟುಕೊಂಡಿರುವ ಕುಮಾರಸ್ವಾಮಿ, ತನ್ನ ರಾಜಕೀಯ ಸ್ಟೈಲ್ ಅನ್ನು ಬದಲಿಸಿಕೊಂಡಂತೆ ಕಾಣುತ್ತಿದೆ.

ಕಾಂಗ್ರೆಸ್, ಬಿಜೆಪಿ ಭಿನ್ನಮತದ ಭರ್ಜರಿ ಲಾಭ ಪಡೆದುಕೊಳ್ಳುತ್ತಿರುವ ಎಚ್ಡಿಕೆ
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ, ಬಿಜೆಪಿ, ಅಧಿಕೃತ ವಿರೋಧ ಪಕ್ಷವಾಗಿತ್ತು. ಆ ವೇಳೆ, ಬಿಜೆಪಿ, ವಿರೋಧ ಪಕ್ಷವೋ, ಕುಮಾರಣ್ಣ ವಿರೋಧ ಪಕ್ಷದ ನಾಯಕರೋ ಎನ್ನುವಂತೆ ಅವರು ಕಾರ್ಯೋನ್ಮುಖರಾಗಿದ್ದವರು. ಈಗ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಸಮಸ್ಯೆಯನ್ನು ಕುಮಾರಣ್ಣ ಯೋಜನಾಬದ್ದವಾಗಿ ಬಳಸಿಕೊಳ್ಳುತ್ತಿದ್ದಾರೆ.












Click it and Unblock the Notifications