ಮತಕ್ಕಾಗಿ ಓಲೈಕೆ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ: ಅಶ್ವತ್ಥನಾರಾಯಣ
ಬೆಂಗಳೂರು,ಜನವರಿ 20: ಮತಕ್ಕಾಗಿ ಓಲೈಕೆ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ. ಜನಪರ ಸರಕಾರವನ್ನು ನಾವು ನೀಡಲಿದ್ದೇವೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು, ಪೂರ್ಣ ಬಹುಮತ ಇರುವ, ಸ್ಥಿರ ಮತ್ತು ಜನರ ನಿರೀಕ್ಷೆಗೆ ಮೀರಿ ಉತ್ತಮ ಕಾರ್ಯಕ್ರಮಗಳುಳ್ಳ ಸರಕಾರ ಕೊಡಲು ನಿರ್ಧರಿಸಿದ್ದೇವೆ. ಎಲ್ಲ ಮುಸಲ್ಮಾನರನ್ನು ಮತಾಂಧ- ನರಹಂತಕ ಟಿಪ್ಪುವಿಗೆ ಹೋಲಿಸುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಮುನ್ನಡೆಯುತ್ತೇವೆ ಎಂದರು.
ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವು ಮತಕ್ಕಾಗಿ ರಾಜಕೀಯ ಮಾಡುತ್ತಿಲ್ಲವೇ. ದೇವಸ್ಥಾನದ ಸುತ್ತಮುತ್ತ ಬೇರೆ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಕಾಂಗ್ರೆಸ್ ಪಕ್ಷವು ಕಾಯ್ದೆ ಮಾಡಿತ್ತು ಎಂದು ಹೇಳಿದರು.
ಇನ್ನೂ ಗುಣಮಟ್ಟದ ಶಿಕ್ಷಣದ ಜೊತೆಗೇ ಡಿಜಿಟಲ್- ತಾಂತ್ರಿಕ ಕೌಶಲ್ಯವನ್ನೂ ನೀಡಲಾಗುತ್ತಿದೆ. ಕೌಶಲ್ಯವನ್ನು ಈ ಹಿಂದೆ ಕಡೆಗಣಿಸಲಾಗಿತ್ತು. ಉದ್ಯೋಗದಾತರಾಗಲು ಮುದ್ರಾ ಯೋಜನೆಯಡಿ ನೆರವು ಕೊಡಲಾಗುತ್ತಿದೆ. ಮಹಿಳಾ ಸಶಕ್ತೀಕರಣ ಕಾರ್ಯವೂ ನಡೆದಿದೆ. ಹಾಲು ಉತ್ಪಾದನೆ, ಪಶು ಸಂಗೋಪನೆ, ಬ್ಯಾಂಕಿಂಗ್, ಕರಕೌಶಲ್ಯ, ಕಸ ನಿರ್ವಹಣೆ ಸೇರಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುವಕರ ಸಬಲೀಕರಣವೂ ನಡೆದಿದೆ ಎಂದರು.

ಯೋಗ ಕಲಿಕೆಯನ್ನು ವಿಶ್ವಕ್ಕೇ ನಾವು ನೀಡಿದ್ದೇವೆ. ಇದು ವಿಶ್ವಕ್ಕೆ ಭಾರತದ ಕೊಡುಗೆ. ಸಿರಿಧಾನ್ಯ ಮೂಲಕ ಸಶಕ್ತ ದೇಶ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷವನ್ನು ಸಿರಿಧಾನ್ಯ ವರ್ಷವಾಗಿ ಪ್ರಕಟಿಸಿದ್ದೇವೆ. ಜಿ 20 ಅಧ್ಯಕ್ಷತೆ ಪಡೆದು ದೇಶದ ಉದ್ದಗಲದಲ್ಲಿ 4 ಸಾವಿರ ಸ್ಥಳದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ವಿಶ್ವದ ಎಲ್ಲರೂ ಪಾಲ್ಗೊಳ್ಳುವ ಮತ್ತು ಆ ಸ್ಥಳವನ್ನು ತಿಳಿಯಲು ಇದು ಪೂರಕವಾಗಿದೆ ಎಂದು ವಿವರಿಸಿದರು.
ಭಾರತವು ಈಗಾಗಲೇ 3 ಟ್ರಿಲಿಯನ್ ಇಕಾನಮಿ ಆಗಿದೆ. ನಿಗದಿತ ಕಾಲಮಾನದಲ್ಲಿ ಅದು 5 ಟ್ರಿಲಿಯನ್ ಇಕಾನಮಿ ಆಗಲಿದೆ.ಎಲ್ಲರಿಗೂ ಸಲ್ಲುವ ರೀತಿಯಲ್ಲಿ ಸಮಾಜ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇಶ, ರಾಜ್ಯದ ಸರ್ವತೋಮುಖ ಅಭಿವೃದ್ಧಿ, ಪ್ರತಿಯೊಬ್ಬರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು. ಜಿಎಸ್ಟಿ ಸಡಿಲೀಕರಣ ಆಗುತ್ತಿದೆ. ಹಿಂದೆ 30ಕ್ಕೂ ಹೆಚ್ಚು ರೀತಿಯ ತೆರಿಗೆಗಳಿದ್ದವು. ಇಡೀ ದೇಶಕ್ಕೆ ಒಂದೇ ತೆರಿಗೆ ಎಂಬಂತಾಗಿದೆ ಎಂದರು.
ಜನವರಿ 16, 17ರಂದು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಡಿದ ಜನಪರ ಕಾರ್ಯಗಳ ಚರ್ಚೆ ಮಾಡಲಾಗಿದೆ. ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಆಧಾರದಲ್ಲಿ ಕಾರ್ಯಕ್ರಮ ರೂಪಿಸಿದ್ದು, ದೇಶದ ಅಖಂಡತೆ, ಏಕತೆ ಮತ್ತು ರಾಷ್ಟ್ರದ ಹಿತವನ್ನು ಕಾಪಾಡಲು ಶ್ರಮಿಸಿದ ಕುರಿತು ಸಚಿವರು ಅಭಿಪ್ರಾಯ ಮಂಡಿಸಿದರು ಎಂದು ತಿಳಿಸಿದರು.

ನಳಿನ್ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿಯವರಿಂದ ಮಾಹಿತಿ ರಾಜ್ಯದಲ್ಲಿನ ಸಂಘಟನೆ, ಬೂತ್ ಅಭಿಯಾನಗಳ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಕಾರ್ಯಕಾರಿಣಿಗೆ ಮಾಹಿತಿ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರಕಾರದ ಉತ್ತಮ ಕಾರ್ಯಗಳನ್ನು ತಿಳಿಸಿದರು. ಇನೊವೇಟಿವ್ ರಾಜ್ಯವಾಗಿ ಹೊರಹೊಮ್ಮಿದ್ದು, ಗರಿಷ್ಠ ವಿದೇಶಿ ನೇರ ಹೂಡಿಕೆ, ವಿಶೇಷ ಹೂಡಿಕೆ ವಲಯಗಳ ಸ್ಥಾಪನೆ, ಕೈಗಾರಿಕಾ ಟೌನ್ಶಿಪ್, ಕಂದಾಯ ಕಾಯ್ದೆಯಡಿ ತಿದ್ದುಪಡಿ, ಭೂಸುಧಾರಣೆ ಮತ್ತಿತರ ವಿಚಾರಗಳ ಕುರಿತು ಅವರು ಮಾಹಿತಿ ನೀಡಿದ್ದಾಗಿ ಹೇಳಿದರು. ಗರಿಷ್ಠ ಸ್ಟಾರ್ಟಪ್, ರೈತ ವಿದ್ಯಾನಿಧಿ ಸೇರಿ ಸರ್ವಾಂಗೀಣ ಅಭಿವೃದ್ಧಿ ಕುರಿತು ತಿಳಿಸಿದ್ದಾಗಿ ಹೇಳಿದರು.
ಆಡಳಿತ ವಿರೋಧಿ ಅಲೆ ಬಿಜೆಪಿಗೆ ಅನ್ವಯ ಆಗುವುದಿಲ್ಲ. ತ್ರಿಪುರ ಸೇರಿ 3 ರಾಜ್ಯಗಳಲ್ಲಿ ಸದ್ಯವೇ ಚುನಾವಣೆ ನಡೆಯಲಿದೆ. ಚುನಾವಣೆ ನಿರಂತರವಾಗಿ ಆಗುತ್ತಿರುತ್ತದೆ. ಅದೆಲ್ಲಕ್ಕೂ ಬಿಜೆಪಿ ಸದಾ ಸಿದ್ಧವಾಗಿರಲು ಸೂಚಿಸಿದರು ಎಂದರು.












Click it and Unblock the Notifications