R.Ashok: ಆರ್.ಅಶೋಕ್ಗೆ ವಿಪಕ್ಷ ನಾಯಕನ ಪಟ್ಟ ಕಟ್ಟಿ ಬಿಜೆಪಿ ಶುರುಮಾಡಿದೆ ಚದುರಂಗದಾಟ!
ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಎದುರಿಸುತ್ತಿದ್ದ ಸವಾಲುಗಳ ಸರಪಳಿ ಇಂದಿಗೆ ಅಂತ್ಯವಾಗಿದೆ. ಪದೇ, ಪದೆ ಕಾಂಗ್ರೆಸ್ ನಾಯಕರಿಂದ ವಿಪಕ್ಷ ನಾಯಕನೇ ಇಲ್ಲ, ವಿಪಕ್ಷ ನಾಯಕನೇ ಇಲ್ಲ ಅನ್ನೋ ಉತ್ತರವೇ ಇಲ್ಲದ ಪ್ರಶ್ನೆ ಎದುರಿಸಿದ್ದ ಬಿಜೆಪಿಗೆ ಮುಜುಗರ ತಪ್ಪಿದಂತಾಗಿದೆ. ಎಲ್ಲ ಬೆಳವಣಿಗೆ ಮಧ್ಯೆ ರಹಸ್ಯವಾಗಿದ್ದ ರಣತಂತ್ರ ಬಯಲಾಗಿದೆ. ಕೇಂದ್ರ ಬಿಜೆಪಿ ನಾಯಕರಿಂದ ಕರ್ನಾಟಕದಲ್ಲಿ ಈಗ ಅಸಲಿ ಚದುರಂಗದಾಟ ಶುರುವಾಗಿದೆ!
ಆರ್.ಅಶೋಕ್ ಮೊಟ್ಟ ಮೊದಲ ಬಾರಿ ಬಿಜೆಪಿ ಪಕ್ಷದಲ್ಲಿ ಅತ್ಯಂತ ದೊಡ್ಡ ಹುದ್ದೆಯನ್ನು ಪಡೆದಿದ್ದಾರೆ. ಈ ಹಿಂದೆ 2008ರಲ್ಲಿ ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಇದೇ ಆರ್.ಅಶೋಕ್ ಅವರು ಪ್ರಬಲ ನಾಯಕರಾಗಿ ಬೆಳೆದರು. ಡಿಸಿಎಂ ಸ್ಥಾನ ಪಡೆದು, ಗೃಹ ಇಲಾಖೆಯನ್ನೂ ನಿಭಾಯಿಸಿದ್ದರು. ಇದೆಲ್ಲಾ ಅಧಿಕಾರದ ವಿಚಾರವಾದರೆ, ಬಿಜೆಪಿ ಪಕ್ಷಕ್ಕೆ ದಕ್ಷಿಣ ಭಾರತದಲ್ಲಿ ದೊಡ್ಡ ನೆಲೆ ದೊರಕಿಸಿಕೊಟ್ಟ ಯಡಿಯೂರಪ್ಪ ಅವರ ಜೊತೆಗೆ ಆರ್.ಅಶೋಕ್ ಕೂಡ ಬಲವಾಗಿ ನಿಂತರು. ಅದರಲ್ಲೂ ರಾಜಧಾನಿ ಬೆಂಗಳೂರಿನ ಅಖಾಡದಲ್ಲಿ ಆರ್.ಅಶೋಕ್ ತಮ್ಮದೇ ಆದ ಪೊಲಿಟಿಕಲ್ ಗ್ರಿಪ್ ಬೆಳೆಸಿಕೊಂಡಿದ್ದಾರೆ.

ಮೂಲ ಬೆಂಗಳೂರಿಗ ಆರ್.ಅಶೋಕ್!
ಬಿಜೆಪಿ ಪಕ್ಷದಲ್ಲಿ ಬೆಂಗಳೂರಿನ ನಾಯಕರು ಪ್ರಬಲವಾಗಿ ಬೆಳೆದಿದ್ದಾರೆ. ಅದ್ರಲ್ಲೂ ಮೂಲ ಬೆಂಗಳೂರಿಗರಾದ ಆರ್.ಅಶೋಕ್ ಯಾವುದೇ ಹಂತದಲ್ಲೂ ಪಕ್ಷವನ್ನು ಬೆಳೆಸುವ ತಾಕತ್ ಹೊಂದಿದ್ದಾರೆ. 2010ರಲ್ಲಿ ಬಿಜೆಪಿ ಮೊಟ್ಟ ಮೊದಲ ಬಾರಿ ದಕ್ಷಿಣ ಭಾರತದ ಮಹಾನಗರ ಪಾಲಿಕೆ ಒಂದರಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರ ಹಿಡಿದಿತ್ತು. ಅದು ಕೂಡ ಬೆಂಗಳೂರಲ್ಲಿ ಅನ್ನೋದು ಇದರ ಮತ್ತೊಂದು ವಿಶೇಷ.
2010ರಲ್ಲಿ 198 ಸ್ಥಾನಗಳ ಹೊಂದಿದ್ದ ಬಿಬಿಎಂಪಿ ಆಡಳಿತದಲ್ಲಿ 111 ಸ್ಥಾನಗಳನ್ನು ಬಿಜೆಪಿ ಗೆದ್ದು ಬೀಗುವಲ್ಲಿ ಇದೇ ಆರ್.ಅಶೋಕ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಹಾಗೂ, ಬಿ.ಎಸ್. ಯಡಿಯೂರಪ್ಪ ಜೊತೆಗೆ ಬೆಂಗಳೂರಲ್ಲೂ ಬಿಜೆಪಿ ಕಟ್ಟಿದ್ದರು. ಇದೀಗ ಮೂಲ ಬೆಂಗಳೂರಿಗ ಆರ್.ಅಶೋಕ್ ಅವರಿಗೆ ಮತ್ತಷ್ಟು ಬಲವನ್ನು ತುಂಬಿದ್ದಾರೆ ಕೇಂದ್ರ ಬಿಜೆಪಿ ನಾಯಕರು. ಹಾಗೇ ಹಳೇ ಮೈಸೂರು ಭಾಗದಲ್ಲಿ ಕೂಡ ಹೊಸ ರಾಜಕೀಯ ಮೇಲಾಟವು ಈಗ ಶುರುವಾದಂತೆ ಕಾಣುತ್ತಿದೆ.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕ
ಆರ್.ಅಶೋಕ್ ಒಂದು ಲೆಕ್ಕಾಚಾರದಲ್ಲಿ ಅಜಾತಶತ್ರು, ಯಾಕಂದ್ರೆ ರಾಜಕೀಯವಾಗಿ ಪಕ್ಷ ಬೆಳೆಸುವ ಶಕ್ತಿ ಎಷ್ಟಿದೆಯೋ. ಅದೇ ರೀತಿ ಎದುರಾಳಿ ಪಕ್ಷಗಳ ಜೊತೆಗೆ ಸಹನೆಯಿಂದಲೂ ವರ್ತಿಸುವುದು ಗೊತ್ತಿದೆ. ಒಬ್ಬ ರಾಜಕಾರಣಿಗೆ ಎದುರಾಳಿಗಳನ್ನ ಎದುರಿಸಲು ಬೇಕಾದ್ದುದು ಇದೇ ತಾಳ್ಮೆ. ಅದನ್ನ ಇಟ್ಟುಕೊಂಡಿರುವ ಆರ್.ಅಶೋಕ್ ಬಿಜೆಪಿಗೆ ಈಗ ಸಿಕ್ಕ ಅತ್ಯುತ್ತಮ ವಿರೋಧ ಪಕ್ಷದ ನಾಯಕ ಎನ್ನಬಹುದು. ಹಾಗೆ ಆರ್.ಅಶೋಕ್ ಒಕ್ಕಲಿಗ ಸಮುದಾಯದ ನಾಯಕರೂ ಹೌದು. ಹೀಗಾಗಿ ಬೆಂಗಳೂರು ಸೇರಿದಂತೆ, ಹಳೇ ಮೈಸೂರು ಭಾಗದಲ್ಲಿರುವ ಒಕ್ಕಲಿಗ ಸಮುದಾಯ ಪ್ರಬಲವಾಗಿ ಅಶೋಕ್ ಅವರ ಬೆನ್ನಿಗೆ ನಿಲ್ಲಲಿದೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ VS ಆರ್.ಅಶೋಕ್!
ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕನಾಗಿ ಅಂದ್ರೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅಶೋಕ್, ನಾನು ಇಂದಿರಾ ಗಾಂಧಿ ಅವರ ವಿರುದ್ಧವೇ ಹೋರಾಟ ಮಾಡಿ ಜೈಲು ಸೇರಿದ್ದವನು. ಹೀಗಾಗಿ ಯಾರಿಗೂ ಹೆದರುವ ವ್ಯಕ್ತಿಯಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ್ದಾರೆ. ಹೀಗಾಗಿ, ಇನ್ನುಮುಂದೆ ಕರ್ನಾಟಕದ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ VS ಆರ್.ಅಶೋಕ್ ನಡುವೆ ರಾಜಕೀಯ ಫೈಟ್ ಗ್ಯಾರಂಟಿ ಆಗಿದೆ.

ಏನಿದು ಬಿಜೆಪಿ ವರಿಷ್ಠರ ರಣತಂತ್ರ?
ಒಟ್ನಲ್ಲಿ ಇದೆಲ್ಲಾ ಅಳೆದು, ತೂಗಿ ಹೇಳುವುದಾದರೆ ಮಾಜಿ ಸಿಎಂ ಯಡಿಯೂರಪ್ಪ ಮತ್ತೆ, ಮತ್ತೆ ಗೆಲ್ಲುತ್ತಿದ್ದಾರೆ. ಬಿಜೆಪಿ ಪಕ್ಷದ ಒಳಗೆ ಇರುವ ಹಲವು ನಾಯಕರ ವಿರೋಧ ಎದುರಿಸಿ ತಮ್ಮ ಶಕ್ತಿ ತೋರಿಸುತ್ತಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಹೀನಾಯ ಸೋಲು ಕೇಂದ್ರದ ಬಿಜೆಪಿ ನಾಯಕರನ್ನು ಮಾನಸಿಕವಾಗಿ ಕೂಡ ಕುಗ್ಗಿಸಿದೆ ಎಂಬ ಆರೋಪ ಇದೆ. ಅಲ್ಲದೆ ಲೋಕಸಭೆ ಚುನಾವಣೆ ಬಗ್ಗೆಯೂ ಚಿಂತೆ ಶುರುವಾಗಿದೆ. ಹೀಗಿದ್ದಾಗ, ಲಿಂಗಾಯತ ಸಮುದಾಯದ ಪ್ರಬಲ ನಾಯಕನೇ ಮದ್ದು ಎನ್ನುವ ರಣತಂತ್ರ ನಡೆದಿದೆ. ಇದರ ಜೊತೆಗೆ ಕರ್ನಾಟಕದ ಮತ್ತೊಂದು ಪ್ರಬಲ ಸಮುದಾಯ, ಒಕ್ಕಲಿಗರನ್ನೂ ಜೊತೆಗೆ ಕರೆದುಕೊಂಡು ಹೋಗುವ ನಾಯಕ ಅಗತ್ಯವಿದ್ದರು. ಆರ್.ಅಶೋಕ್ ಮೂಲಕ ಆ ಕೊರತೆ ಕೂಡ ಇದೀಗ ಪೂರ್ಣವಾಗಿದೆ.
ವಿರೋಧಿ ಪಡೆ ಸೈಲೆಂಟ್ ಆಗುತ್ತಾ?
ಮತ್ತೊಂದ್ಕಡೆ ಬಿಜೆಪಿ ನಾಯಕರಿಗೆ ಹೊರಗಿನ ವಿರೋಧಿಗಳಿಗಿಂತ, ಒಳಗಿನ ವಿರೋಧವನ್ನ ಎದುರಿಸುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ಯಡಿಯೂರಪ್ಪ ಅವರಿಗೆ ಈ ಹಿಂದೆ, ಸಾಕಷ್ಟು ಸಮಸ್ಯೆ ಮಾಡುತ್ತಿದ್ದ ನಾಯಕರು ಈಗ ಬಿ.ವೈ. ವಿಜಯೇಂದ್ರ ಅವರಿಗೂ ಅಡ್ಡಿ ಮಾಡಬಹುದು ಎಂಬ ಆರೋಪ ಇದೆ. ಹಾಗೇ ಆರ್. ಅಶೋಕ್ ಕೂಡ ಯಡಿಯೂರಪ್ಪರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಅಶೋಕ್ ಅವರ ವಿರುದ್ಧವೂ ಬಿಜೆಪಿ ಒಳಗಿನ ಕೆಲವು ಶಾಸಕರು ನಿಲ್ಲುವ ಸಾಧ್ಯತೆ ಇದೆ ಎಂಬ ಆರೋಪ ಓಡಾಡುತ್ತಿದೆ. ಇದೆಲ್ಲ ನೋಡುವುದಾದ್ರೆ ಮತ್ತೆ ಬಿಜೆಪಿ ಒಳಗೆ ಅಸಮಾಧಾನ ಸ್ಫೋಟಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications