ಕಾಂಗ್ರೆಸ್ ವಿರುದ್ಧ ಹೋರಾಡಲು ಎರಡು ಸಮಿತಿ ರಚಿಸಿದ ಬಿಜೆಪಿ, ಯಾರೆಲ್ಲ ಇದ್ದಾರೆ?
ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸುತ್ತಿರುವ ಸರಣಿ ಆತ್ಮಹತ್ಯೆಗಳ ಹಿನ್ನೆಲೆ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಜನಾಂದೋಲನಕ್ಕೆ ಕರೆ ನೀಡಿದೆ. ಇದಕ್ಕಾಗಿ ಎರಡು ಪ್ರತ್ಯೇಕ ಸಮಿತಿಗಳನ್ನೂ ರಚಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ, ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗೆ ಕಾರಣವಾಗಿರುವ ಕರ್ನಾಟಕ ದುರಾಡಳಿತದ ವಿರುದ್ಧ ಜನಾಂದೋಲನ ರೂಪಿಸಲು ಪಕ್ಷದ ಪ್ರಮುಖರನ್ನೊಳಗೊಂಡ ಆಂದೋಲನ ಸಮಿತಿ ರಚಿಸಲಾಗಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತು ಸತ್ಯಶೋಧನೆ ನಡೆಸಲು ಪಕ್ಷದ ಪ್ರಮುಖರನ್ನೊಳಗೊಂಡ ಸತ್ಯಶೋಧನಾ ಸಮಿತಿ ರಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

ಆಂದೋಲನ ಸಮಿತಿಯಲ್ಲಿ ಛಲವಾದಿ ನಾರಾಯಣಸ್ವಾಮಿ, ಆರಗ ಜ್ಞಾನೇಂದ್ರ, ಎನ್.ಮಹೇಶ್, ಅಶ್ವತ್ಥ್ ನಾರಾಯಣ, ಬಸವರಾಜ್ ಮತ್ತಿಮೂಡ್, ಎನ್.ರವಿಕುಮಾರ್, ಕೆ.ಎಸ್.ನವೀನ್, ರಾಜುಗೌಡ, ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಲಲಿತಾ ಅನಪೂರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಚಂದು ಪಾಟೀಲ್, ಭಾಸ್ಕರ್ ರಾವ್, ವೆಂಕಟೇಶ್ ದೊಡ್ಡೇರಿ, ವಸಂತಕುಮಾರ್, ಕರುಣಾಕರ್ ಖಾಸಲೆ ಇದ್ದಾರೆ.
ಸತ್ಯಶೋಧನಾ ಸಮಿತಿಯಲ್ಲಿ ಶೈಲೇಂದ್ರ ಬೆಳ್ದಾಳೆ, ಅವಿನಾಶ್ ಜಾಧವ್, ಚಂದ್ರು ಲಮಾಣಿ, ಬಸವರಾಜ್ ಕೇಲಗಾರ, ಲಕ್ಷ್ಮಿ ಅಶ್ವಿನ್ ಗೌಡ, ನಾರಾಯಣ್, ಅರುಣಾ, ವಿಜಯಲಕ್ಷ್ಮಿ ಕರೂರು, ಪದ್ಮ ಪ್ರಕಾಶ್, ವಿಜಯಲಕ್ಷ್ಮಿ ಬಾ.ತುಂಗಳ, ಸುಧಾ ಹಲ್ಕಾಯಿ, ರತನ್ ರಮೇಶ್ ಪೂಜಾರಿ, ಪ್ರದೀಪ್ ಕಡಾಡಿ, ಮಂಜುಳಾ ಹಾಗೂ ಅಶೋಕ್ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಬಲಗೈ ಬಂಟ ರಾಜುವಿನ ಕಿರುಕುಳದಿಂದ ಆತ್ಮಹತ್ಯೆಗೀಡಾದ ಬೀದರ್ ಗುತ್ತಿಗೆದಾರ ಸಚಿನ್ ಬರೆದಿರುವ ಡೆತ್ನೋಟ್ನಲ್ಲಿ ನಮ್ಮ ಪಕ್ಷದ ಶಾಸಕರಾದ ಬಸವರಾಜ್ ಮತ್ತಿಮಡು, ಬಿಜೆಪಿ ನಾಯಕರಾದ ಚಂದು ಪಾಟೀಲ್, ಮಣಿಕಂಠ ರಾಥೋಡ್ ಹಾಗೂ ಆಂದೋಲ ಸ್ವಾಮೀಜಿಯವರ ಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ಗೆ ಸುಪಾರಿ ನೀಡಿರುವ ಆತಂಕಕಾರಿ ಹಾಗೂ ಗಂಭೀರ ಮಾಹಿತಿ ಬಹಿರಂಗವಾಗಿದೆ. ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ಶಾಸಕರನ್ನು ಗುರಿಯಾಗಿಸಿಕೊಂಡು, ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕರ ನಿಯೋಗವು ಗುತ್ತಿಗೆದಾರ ಸಚಿನ್ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಅಮಾಯಕ ಗುತ್ತಿಗೆದಾರ ಸಚಿನ್ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. ಅಕ್ಷರಶಃ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ, ತಾವು ನಿಜವಾಗಿಯೂ ಪವರ್ ಫುಲ್ ಸಿಎಂ ಆಗಿದ್ದರೆ ಕೂಡಲೇ ಪ್ರಿಯಾಂಕ್ ಖರ್ಗೆ ಅವರ ಸವಾಲು ಸ್ವೀಕರಿಸಿ ಅವರನ್ನ ಸಂಪುಟದಿಂದ ವಜಾ ಮಾಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಆಗ್ರಹಿಸಿದ್ದಾರೆ.












Click it and Unblock the Notifications