ರಾಯಣ್ಣ ಬ್ರಿಗೇಡ್ ನ ಮತ್ತೊಂದು ವಿಕೆಟ್ ಪತನ
ಬೆಂಗಳೂರು, ಜನವರಿ. 13 : ಕೆ.ಎಸ್.ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಅವಣ್ಣ ಮ್ಯಾಕೇರಿ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.
ಯಡಿಯೂರಪ್ಪ ಹಾಗೂ ಕೆ.ಎಸ್ ಈಶ್ವರಪ್ಪ ನಡುವೆ ರಾಯಣ್ಣ ಬ್ರಿಗೇಡ್ ಸಂಬಂಧ ತಿಕ್ಕಾಟಗಳು ನಡೆದಿವೆ. ರಾಯಣ್ಣ ಬ್ರಿಗೇಡ್ ನ್ನು ನಿರ್ಣಾಮ ಮಾಡಲು ಈಶ್ವರಪ್ಪ ಅವರ ಜತೆ ಗುರುತಿಸಿಕೊಂಡವರನ್ನು ಒಬ್ಬರಾದ ಮೇಲೆ ಒಬ್ಬರನ್ನು ಪಕ್ಷದಿಂದ ಅಮಾನತು ಮಾಡಿ ಬ್ರಿಗೇಡ್ ಶಕ್ತಿಯನ್ನು ಕುಗ್ಗಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.
ಎರಡು ದಿನಗಳ ಹಿಂದೆ ಕೆ.ಎಸ್.ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದರ ಬೆನ್ನಲೆ ಈಗ ಮತ್ತೊಂದು ವಿಕೆಟ್ ಪತನವಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.[ಬ್ರಿಗೇಡ್ ನಿಂದ ಬಿಜೆಪಿಯಲ್ಲಿ ಬಿಕ್ಕಟ್ಟು, ಮಾಜಿ ಮೇಯರ್ ಅಮಾನತು]
ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಅವಣ್ಣ ಮ್ಯಾಕೇರಿ ಅವರನ್ನು ವಜಾಗೊಳಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಅವ್ವಣ್ಣ ಮ್ಯಾಕೇರಿ ಕಲಬುರಗಿ ಎಪಿಎಂಸಿಯ ಮಾಜಿ ಅಧ್ಯಕ್ಷರಾಗಿದ್ದರು ಹಾಗೂ ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾಗಿದ್ದರು.[ರಾಯಣ್ಣ ಬ್ರಿಗೇಡ್: ಈಶ್ವರಪ್ಪ ತಮ್ಮ ಸ್ಥಾನ ಕಳೆದುಕೊಳ್ತಾರಾ?]
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ್ದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಬಿಜೆಪಿಗೂ ರಾಯಣ್ಣ ಬ್ರಿಗೇಡ್ ಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕರ್ತರು ಬ್ರಿಗೇಡ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು' ಎಂದು ಹೇಳಿದ್ದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಕೆ.ಎಸ್.ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಜಟಾಪಟಿ ನಡೆಯುತ್ತಿದೆ. ಪಕ್ಷದ ನಾಯಕರ ಸೂಚನೆಯನ್ನೂ ಮೀರಿ ಈಶ್ವರಪ್ಪ ಬ್ರಿಗೇಡ್ ಸಂಘಟಿಸುತ್ತಿದ್ದಾರೆ.