ಬಿಜೆಪಿಯಲ್ಲಿ ಹೊತ್ತಿ ಉರಿದ ಕಾರ್ಯಕರ್ತರ ಆಕ್ರೋಶದ ಬೆಂಕಿ
ಬೆಂಗಳೂರು,ಜುಲೈ 29: ಹಿಂದುತ್ವದ ತಳಹದಿ ಮೇಲೆ ಬೆಳೆದು ಬಂದು ಇವತ್ತು ರಾಷ್ಟ್ರದ ಅತಿದೊಡ್ಡ ಪಕ್ಷವಾಗಿ, ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷವು ರಾಜ್ಯದಲ್ಲಿ ಕಾರ್ಯಕರ್ತರ ಆಕ್ರೋಶವನ್ನು ಎದುರಿಸುವಂತಾಗಿದೆ. ಚುನಾವಣೆಗೆ ಕೇವಲ ಒಂಬತ್ತು ತಿಂಗಳು ಇರುವಾಗ ಉದ್ಭವಿಸಿದ ಈ ಆಕ್ರೋಶವನ್ನು ನಾಯಕರು ಯಾವ ರೀತಿಯಲ್ಲಿ ಶಮನಗೊಳಿಸುತ್ತಾರೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ಹಲವು ಹಿಂದೂ ಕಾರ್ಯಕರ್ತರ ಕೊಲೆಗಳಾದವು. ಈ ವೇಳೆ ಬಿಜೆಪಿ ವಿರೋಧ ಪಕ್ಷವಾಗಿತ್ತಲ್ಲದೆ, ಕೊಲೆಗಳನ್ನು ತೀವ್ರವಾಗಿ ಖಂಡಿಸುತ್ತಾ ಬಂದಿತ್ತು. ಜತೆಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಹಿಂದೂ ವಿರೋಧಿ ಪಟ್ಟ ಕಟ್ಟಿದ ಬಿಜೆಪಿ ನಾಯಕರು ಮುಂದೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರನ್ನು ಹತ್ಯೆಗೆ ತಕ್ಕ ಪ್ರತಿಕಾರ ನೀಡುವ ಭರವಸೆ ನೀಡಿದರು. ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಪುಂಖಾನುಪುಂಖವಾಗಿ ಹೇಳಿದರು.
ಕಳೆದ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೂ ಹೆಚ್ಚಿನ ಸ್ಥಾನ ಪಡೆಯಬೇಕಾದರೆ ಅಲ್ಲಿ ಕಾರ್ಯಕರ್ತರು ಬರಿ ಬೆವರು ಹರಿಸಿರಲಿಲ್ಲ ರಕ್ತ ಹರಿಸಿದ್ದರು. ಹಿಂದೂ ಪರ ಸಂಘಟನೆಗಳು ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದರೆ ನಾವು ನೆಮ್ಮದಿಯಾಗಿ ಬದುಕಬಹುದು ಎಂಬ ನಂಬಿಕೆಯಲ್ಲಿದ್ದರು. ಹಿಂದೂ ಕಾರ್ಯಕರ್ತರನ್ನು ಹತ್ಯೆಗೈದ ಹಂತಕರಿಗೆ ಕಠಿಣ ಶಿಕ್ಷೆಯಾಗಬಹುದು. ಮತಾಂಧ ಶಕ್ತಿಗಳನ್ನು ಮಟ್ಟಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿರುವ ಬಿಜೆಪಿ ಜೀವ ಬೆದರಿಕೆ ಇರುವ ಹಿಂದೂ ನಾಯಕರಿಗೆ ನೀಡಿದ್ದ ಭದ್ರತೆಯನ್ನೇ ವಾಪಸ್ ಪಡೆದರು ಆಗಲೂ ವಿರೋಧ ವ್ಯಕ್ತವಾಗಲಿಲ್ಲ.

ನ್ಯಾಯ ಸಿಗದಿದ್ದಕ್ಕೆ ಭುಗಿಲೆದ್ದ ಆಕ್ರೋಶ
ಇದರ ನಡುವೆ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆಗ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದನ್ನು ಜನ ನಂಬಿದರು. ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಾದಾಗ ಜನ ಆಕ್ರೋಶಗೊಂಡರು. ಹರ್ಷನ ಮನೆಗೆ ತೆರಳಿದ ನಾಯಕರು ಮತ್ತೆ ಕಠಿಣ ಕ್ರಮಗಳ ಭರವಸೆ ನೀಡಿದರು. ಇದೇ ವೇಳೆ ಒಂದಷ್ಟು ಆರೋಪಿಗಳನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು. ಆದರೆ ಯಾವಾಗ ಹರ್ಷನ ಕೊಲೆ ಆರೋಪಿಗಳಿಗೆ ಜೈಲ್ ನಲ್ಲಿ ರಾಜಾತೀಥ್ಯ ನೀಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ರಾಜ್ಯದ ಜನ ಅದರಲ್ಲೂ ಆಡಳಿತರೂಢ ಬಿಜೆಪಿಯ ಕಾರ್ಯಕರ್ತರೇ ಆಕ್ರೋಶಗೊಂಡಿದ್ದರು. ಅದು ಭುಗಿಲೆದ್ದು ಉರಿದಿದ್ದು ಪ್ರವೀಣ್ ನೆಟ್ಟಾರು ಕೊಲೆಯ ವೇಳೆ ಎಂದರೆ ತಪ್ಪಾಗಲಾರದು.

ಭಾವನಾತ್ಮಕ ತಂತ್ರ ಹೆಚ್ಚು ದಿನ ನಡೆಯಲ್ಲ
ಇವತ್ತು ಏನಾದರೂ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸದೆ ಹೋಗಿದ್ದರೆ ಇದು ಕೂಡ ಮತ್ತೊಬ್ಬ ಹಿಂದೂ ಯುವಕನ ಹತ್ಯೆಯಾಗಿ ಉಳಿದು ಹೋಗುತ್ತಿತ್ತು. ಮತ್ತು ಮುಂದಿನ ಚುನಾವಣೆಗೆ ಇದು ಭಾವನಾತ್ಮಕ ವಿಚಾರವಾಗಿ ಮತ ಪಡೆಯುವ ತಂತ್ರವಾಗಿ ಉಳಿದು ಬಿಡುತ್ತಿತ್ತೇನೋ? ಆದರೆ ಎಲ್ಲ ತಂತ್ರಗಳು ಹೆಚ್ಚು ದಿನ ನಡೆಯಲ್ಲ ಎಂಬುದನ್ನು ಇತಿಹಾಸ ಮನವರಿಕೆ ಮಾಡಿಕೊಟ್ಟಿದೆ. ಇಲ್ಲೂ ಅದೇ ಆಗಿದೆ.
ಬಿಜೆಪಿ ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದರೆ ಅದರ ಹಿಂದೆ ಹಲವು ಕಾರ್ಯಕರ್ತರ ಬಲಿದಾನವಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಕ್ಷಕ್ಕಾಗಿ, ಧರ್ಮಕ್ಕಾಗಿ ಪ್ರಾಣ ಬಿಟ್ಟವರ ಮನೆಯವರ ಬದುಕು ಹೇಗಿದೆ? ಎಂಬುದನ್ನು ಅಧಿಕಾರದಲ್ಲಿರುವ ಯಾರಾದರೂ ನಾಯಕರು ನೋಡಿದ್ದಾರಾ? ಧರ್ಮಕ್ಕಾಗಿ, ಪಕ್ಷಕ್ಕಾಗಿ ಪ್ರಾಣ ತೆತ್ತ ಕಾರ್ಯಕರ್ತನ ಹೆತ್ತವರ, ಕೈಹಿಡಿದವರ ಮತ್ತು ಅವರನ್ನೇ ಅವಲಂಬಿಸಿದವರ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆಯಾ?

ಕಾರ್ಯಕರ್ತರ ಆಕ್ರೋಶಕ್ಕೆ ಕಾರಣ?
ಇಷ್ಟಕ್ಕೂ ಬೇರೆಲ್ಲ ಪಕ್ಷದ ಕಾರ್ಯಕರ್ತರನ್ನು ನೋಡುವಷ್ಟು ಸುಲಭವಾಗಿ ನಾವು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ನೋಡುವುದಕ್ಕಾಗಲ್ಲ. ಅದಕ್ಕೆ ಕಾರಣವೂ ಇದೆ. ಇಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತ ಹಿಂದುತ್ವ, ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತಾನೆ. ಮತ್ತು ಪಕ್ಷಕ್ಕೆ ಬದ್ಧನಾಗಿರುತ್ತಾನೆ. ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತ ಹಿಂದೂಪರ ಸಂಘಟನೆಯ ಮೂಲಕ ಬಿಜೆಪಿಯನ್ನು ಬೆಳೆಸಲು ಹಗಲಿರುಳು ತಮ್ಮದೇ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅದು ಯಾವುದೇ ರಾಜಕೀಯ ನಾಯಕರ ಫಲಾಪೇಕ್ಷೆಯಿಲ್ಲದೆ ತನ್ನದೇ ಖರ್ಚಿನಲ್ಲಿ ಪಕ್ಷವನ್ನು ಸಂಘಟಿಸುತ್ತಾನೆ. ಹೀಗಿರುವಾಗ ಸಂಘಟನೆ ಮತ್ತು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನ ಬಲಿದಾನವಾಗಿದೆ ಎಂಬುದು ಗೊತ್ತಾದಾಗ ಅಲ್ಲಿಗೆ ಪಕ್ಷದ ಯಾವುದೇ ನಾಯಕರು ಹೋಗೋದಿಲ್ಲ ಎನ್ನುವುದಾದರೆ ನಿಷ್ಠಾವಂತ ಕಾರ್ಯಕರ್ತರು ಆಕ್ರೋಶಗೊಳ್ಳದೆ ಇರುತ್ತಾರಾ?

ಪರಿಸ್ಥಿತಿ ಬಗ್ಗೆ ಬಿಜೆಪಿ ಮನನ ಮಾಡಿಕೊಳ್ಳುವ ಕಾಲ
ಬಹುಶಃ ಬಿಜೆಪಿ ಪಕ್ಷದ ನಾಯಕರು ತಮ್ಮದೇ ಕಾರ್ಯಕರ್ತರು ಈ ಮಟ್ಟಕ್ಕೆ ರೊಚ್ಚಿಗೇಳುತ್ತಾರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಆದರೆ ಚುನಾವಣೆ ಹತ್ತಿರ ಇರುವಾಗಲೇ ಆಗಿರುವ ಈ ಹೊಡೆತವನ್ನು ಯಾವ ರೀತಿಯಲ್ಲಿ ಅವರು ಸರಿಪಡಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣರಾರು ಎನ್ನುವುದನ್ನು ನಾಯಕರು ಮನನ ಮಾಡಿಕೊಳ್ಳಬೇಕಿದೆ. ಹಿಂದುತ್ವದ ಜಪ ಮಾಡುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ರಕ್ಷಣೆ ಸಿಕ್ಕಲ್ಲ, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಮುಗಿಸಲಾಗುತ್ತಿದೆ ಎನ್ನುವುದಾದರೆ ನಾಯಕರು ಏನು ಮಾಡುತ್ತಿದ್ದಾರೆ?
ಪ್ರತಿಕಾರಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಹತ್ಯೆ ಯಾರದ್ದೇ ಆಗಲಿ ಅದರ ಹಿಂದಿನ ಶಕ್ತಿಗಳನ್ನು ಮಟ್ಟಹಾಕದೆ ಹೋದರೆ ಅದು ಮುಂದುವರೆಯುತ್ತಲೇ ಹೋಗುತ್ತದೆ. ಚುನಾವಣೆಗೆ ಒಂಬತ್ತು ತಿಂಗಳಿದೆ ಸರ್ಕಾರ ಮತಾಂಧ ಶಕ್ತಿಗಳನ್ನು ಮಟ್ಟಹಾಕಿ, ಶಾಂತಿ ನೆಲೆಸುವಂತೆ ಮಾಡುತ್ತಾ? ಗೊತ್ತಿಲ್ಲ. ಆದರೆ ಲಾಠಿ ಏಟು ತಿಂದು ಅಧಿಕಾರಕ್ಕೆ ತಂದ ಪಕ್ಷದಿಂದಲೇ ಕಾರ್ಯಕರ್ತರು ಲಾಠಿ ಏಟು ತಿಂದಿದ್ದಾರೆ. ಮುಂದೆ? ಕಾಲವೇ ಹೇಳಬೇಕು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications