ಉರಿಗೌಡ, ನಂಜೇಗೌಡ ಎಲ್ಲಿದ್ದರೂ ವೇದಿಕೆಗೆ ಬರಬೇಕಾಗಿ ವಿನಂತಿ: ಬಿಜೆಪಿ ವಿರುದ್ಧ ಶುರುವಾಯ್ತು ಟ್ರೋಲ್ ಹಬ್ಬ
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಕಾಂಗ್ರೆಸ್ ಅಭೂತಪೂರ್ವ ಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸೋಲಿನ ಪರಾಮರ್ಶೆ ನಡೆಸುತ್ತಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆಯ ಕಸರತ್ತಿನಲ್ಲಿ ತೊಡಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ.
ಭಾರೀ ಮುಖಭಂಗ ಅನುಭವಿಸಿದ ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಹಬ್ಬವೇ ಶುರುವಾಗಿದೆ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೋಲು ಅನುಭವಿಸಿದ್ದಾರೆ. ಶ್ರೀರಂಗಪಟ್ಟಣದ ದೊರೆಯಾಗಿದ್ದ ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎಂದು ಸಿಟಿ ರವಿ ಸೇರಿದಂತೆ ಹಲವು ನಾಯಕರು ಹೊಸದೊಂದು ನಿರೂಪಣೆಯನ್ನು ಹುಟ್ಟುಹಾಕಲು ಯತ್ನಿಸಿದರು.

ಈ ವಿಚಾರವಾಗಿ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿ ಅವರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಅದಕ್ಕೂ ಬಗ್ಗದ ಸಿಟಿ ರವಿ ತಾವು ಹೇಳುತ್ತಿರುವ ವಿಚಾರವೇ ಸರಿ ಎಂದು ವಾದಿಸಿದ್ದರು. ಚುನಾವಣೆಗೂ ಮುನ್ನ ಈ ವಿವಾದವು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಉರಿಗೌಡ ಮತ್ತು ನಂಜೇಗೌಡರ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದರು. ಟಿಪ್ಪು ಸುಲ್ತಾನ್ನನ್ನು ಕೊಂದ ವೀರ ಯೋಧರು ಎಂದು ಕಥಾನಕವನ್ನು ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರು. ಈ ತರದಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಕ್ಕಲಿಗರ ಸಂಘ ಭಾನುವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು.
ಬಿಜೆಪಿಯವರು ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ಮತ್ತು ಸ್ಪಟಿಕಪುರಿ ಪೀಠಾಧಿಪತಿ ನಂಜಾವಧೂತ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘ ಬೆದರಿಕೆ ಹಾಕಿತ್ತು.

'ಇತಿಹಾಸದಲ್ಲಿ ಇಲ್ಲದ ಪಾತ್ರಗಳನ್ನು ಸೃಷ್ಟಿಸಿ ಪ್ರಚಾರ ನೀಡುವುದರ ಹಿಂದಿನ ಷಡ್ಯಂತ್ರವೇನು?' ಎಂದು ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಪತ್ರಿಕಾ ಟಿಪ್ಪಣಿಯಲ್ಲಿ ಪ್ರಶ್ನಿಸಿದ್ದರು. ಇಂತಹ ಸುಳ್ಳುಗಳ ಮೂಲಕ ಅಪಮಾನ ಮಾಡಿದರೆ ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ ಎಂದಿದ್ದರು.
ಚುನಾವಣೆ ಸಮೀಪಿಸುತ್ತಿರುವ ಕಾರಣ ರಾಜಕೀಯ ಲಾಭ ಪಡೆಯಲು ಸುಳ್ಳು ಸುದ್ದಿ ಹಬ್ಬಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈ ಸುಳ್ಳುಗಳ ಹಿಂದೆ ಇರುವವರನ್ನು ಗುರುತಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಒಕ್ಕಲಿಗರ ಸಂಘ ಹೇಳಿತ್ತು.
ಈ ಚುನಾವಣೆಯಲ್ಲಿ ಸಿಟಿ ರವಿ ಸೇರಿದಂತೆ ಹಲವು ಪ್ರಮುಖ ನಾಯಕರ ತಲೆದಂಡವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ನಾಯಕರನ್ನು ಟ್ರೋಲ್ ಮಾಡಲಾಗುತ್ತಿದೆ. 'ಉರಿಗೌಡ, ನಂಜೇಗೌಡ ಎಲ್ಲಿದ್ದರೂ ವೇದಿಕೆಗೆ ಬರಬೇಕಾಗಿ ವಿನಂತಿ' ಎಂದು ಟ್ರೋಲ್ ಮಾಡಲಾಗುತ್ತಿದೆ.

ಚಿತ್ರ ನಿರ್ಮಿಸಲು ಮುಂದಾಗಿದ್ದ ಮುನಿರತ್ನ
ಮತ್ತೊಂದು ಬೆಳವಣಿಗೆಯಲ್ಲಿ, ತೋಟಗಾರಿಕಾ ಸಚಿವರಾಗಿದ್ದ ಚಲನಚಿತ್ರ ನಿರ್ಮಾಪಕ ಮುನಿರತ್ನ ಅವರು ತಮ್ಮ ನಿರ್ಮಾಣದ ವೃಷಭಾವತಿ ಪ್ರೊಡಕ್ಷನ್ಸ್ ಅಡಿಯಲ್ಲಿ 'ಊರಿಗೌಡ-ನಂಜೇಗೌಡ' ಚಿತ್ರ ಶೀರ್ಷಿಕೆಯನ್ನು ನೋಂದಾಯಿಸಿದ್ದರು. ವಿವಾದದ ನಡುವೆ ಚಿತ್ರದ ಬಿಡುಗಡೆಯನ್ನು ದಿನಾಂಕವನ್ನೂ ಘೋಷಿಸಿದ್ದರು. ಟ್ವಿಟರ್ನಲ್ಲಿ ಆರಂಭಿಕ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು.
ವೃಷಭದ್ರಿ ಪ್ರೊಡಕ್ಷನ್ಸ್ ನಿರ್ಮಾಣದ ಸತ್ಯಗಳನ್ನು ಆಧರಿಸಿದ ಐತಿಹಾಸಿಕ ಚಿತ್ರ ಉರಿಗೌಡ-ನಂಜೇಗೌಡ ಮೇ 18 ರಂದು ಕಂಠೀರವ ಸ್ಟುಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಚಿತ್ರಕಥೆಯನ್ನು ಸಿ.ಎನ್. ಅಶ್ವಥ್ ನಾರಾಯಣ್, ಮತ್ತು ಆರ್.ಎಸ್. ಗೌಡ ಬರೆದಿದ್ದಾರೆ ಎಂದೂ ಮುನಿರತ್ನ ಘೋಷಿಸಿದ್ದರು. ಮುನಿರತ್ನ ಅವರನ್ನು ಮಠಕ್ಕೆ ಕರೆಸಿ ಆದಿಚುಂಚನಗಿರಿ ಶ್ರೀಗಳು ಬುದ್ದಿವಾದ ಹೇಳಿದ ಮೇಲೆ ಸಿನಿಮಾ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದರು.












Click it and Unblock the Notifications