ಸಚಿವ ಸಂಪುಟದಲ್ಲಿ ಬಂಪರ್ ಲಾಟರಿ ಹೊಡೆದ ಸಚಿವರಿವರು
ಬೆಂಗಳೂರು, ಜೂನ್ 8: ಅಂತೂ ಇಂತೂ ಕೊನೆಗೂ ಸಂಪುಟ ವಿಸ್ತರಣೆ ನಡೆದು, ಖಾತೆಗಳ ಹಂಚಿಕೆಯೂ ಮುಗಿದು ಸರಕಾರವೀಗ ಒಂದು ಹಂತಕ್ಕೆ ಬಂದು ನಿಂತಿದೆ. ಖಾತೆ ಹಂಚಿಕೆ ಬೆನ್ನಿಗೆ ಅಸಮಧಾನ ಭುಗಿಲೆದ್ದಿದೆ. ಇನ್ನೊಂದು ಕಡೆ ಖಾತೆ ಹಂಚಿಕೆಯಲ್ಲಿ ಕೆಲವರು ಬಂಪರ್ ಗಿಟ್ಟಿಸಿದ್ದಾರೆ.
ಇಂದಿನ ಖಾತೆ ಹಂಚಿಕೆಯಲ್ಲಿ ಬಂಪರ್ ಲಾಟರಿ ಹೊಡೆದವರ ಪಟ್ಟಿ ಇಲ್ಲಿದೆ.
ಎಚ್.ಡಿ. ಕುಮಾರಸ್ವಾಮಿ
ಸಂಶಯವೇ ಬೇಡ. ಖಾತೆ ಹಂಚಿಕೆಯಲ್ಲಿ ಬಂಪರ್ ಹೊಡೆದವರಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯೂ ಸೇರಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ಇಂಧನ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಜೊತೆಗೆ ಹಣಕಾಸು, ಅಬಕಾರಿಯಂಥ ಪ್ರಮುಖ ಖಾತೆಗಳು ಜವಳಿ ಇಲಾಖೆಯನ್ನೂ ತಮ್ಮಲ್ಲೇ ಇಟ್ಟುಕೊಂಡು ಮುಖ್ಯಮಂತ್ರಿ ಸ್ಥಾನದಾಚೆಯೂ ಅವರು ಪಾರಮ್ಯ ಮೆರೆದಿದ್ದಾರೆ.

ಡಾ.ಜಿ. ಪರಮೇಶ್ವರ್
ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಡಾ. ಜಿ. ಪರಮೇಶ್ವರ್ ಪ್ರಮುಖ ಖಾತೆಗಳನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಗೃಹ ಮತ್ತು ಆರ್ಥಿಕ ಕಾರಣಗಳಿಗೆ ಪ್ರಬಲವಾಗಿರುವ ಬೆಂಗಳೂರು ಅಭಿವೃದ್ಧಿ ಖಾತೆ ಅವರಿಗೆ ದಕ್ಕಿದೆ. ಜೊತೆಗೆ ಕ್ರೀಡೆ ಮತ್ತು ಯುವಜನ ಖಾತೆಯನ್ನೂ ಪಡೆದು ಮತ್ತಷ್ಟು ಮಿಂಚಿದ್ದಾರೆ.
ಎನ್. ಮಹೇಶ್
ಮೊದಲ ಬಾರಿಗೆ ಶಾಸಕರು ಮತ್ತು ಸಚಿವರಾಗಿರುವ ಬಿಎಸ್ಪಿಯ ಎನ್. ಮಹೇಶ್ ಮೊದಲ ಯತ್ನದಲ್ಲೇ ಪ್ರಮುಖ ಖಾತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ.
ಕೆ.ಜೆ.ಜಾರ್ಜ್
ಕಾಂಗ್ರೆಸ್ ಪಾಲಿನ ಆರ್ಥಿಕ ಶಕ್ತಿ ಕೆ.ಜೆ. ಜಾರ್ಜ್ ಅವರಿಗೂ ಪ್ರಮುಖ ಖಾತೆಗಳು ಸಿಕ್ಕಿವೆ. ಕಳೆದ ಬಾರಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಅವರಿಗೆ ಈ ಬಾರಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಿಕ್ಕಿದೆ. ಇದರ ಜೊತೆಗೆ ಸಕ್ಕರೆ, ಬೆಂಗಳೂರು ಕೇಂದ್ರಿತವಾಗಿರುವ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳನ್ನು ಪಡೆದು ಮತ್ತಷ್ಟು ಬೀಗಿದ್ದಾರೆ.
ಪ್ರಿಯಾಂಕ್ ಖರ್ಗೆ
ಕೇವಲ ಎರಡನೇ ಬಾರಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರಮುಖ ಖಾತೆ ಸಮಾಜ ಕಲ್ಯಾಣವನ್ನು ಪಡೆದುಕೊಂಡಿದ್ದಾರೆ. ಹಿರಿಯರೇ ಪ್ರಮುಖ ಖಾತೆಗಳಿಗೆ ಕುಸ್ತಿ ಹೊಡೆಯುತ್ತಿರುವಾಗ ಪ್ರಿಯಾಂಕ್ ಪ್ರಭಾವಿ ಖಾತೆ ಪಡೆದು ಉಳಿದವರ ಹುಬ್ಬೇರಿಸಿದ್ದಾರೆ.
ಡಿ.ಕೆ. ಶಿವಕುಮಾರ್
ಇಂಧನ ಖಾತೆಯ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮಧ್ಯಮ ಮತ್ತು ಬೃಹತ್ ನೀರಾವರಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅವರನ್ನು ತೃಪ್ತಿ ಪಡಿಸಲೋ ಎಂಬಂತೆ ವೈದ್ಯಕೀಯ ಶಿಕ್ಷಣವನ್ನೂ ಅವರಿಗೆ ನೀಡಲಾಗಿದೆ.
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡರದ್ದೂ ಖಾತೆ ಪಡೆಯುವಲ್ಲಿ ಭರ್ಜರಿ ಪ್ರದರ್ಶನ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ, ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾನವ ಸಂಪನ್ಮೂಲವನ್ನು ಅವರು ಪಡೆದುಕೊಂಡಿದ್ದಾರೆ.
ಜಮೀರ್ ಅಹಮದ್ ಖಾನ್
ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗುವುದೇ ಅನುಮಾನ ಎಂಬಂತಿದ್ದ ಜಮೀರ್ ಅಹಮದ್ ಖಾನ್ ಸಚಿವರಾಗಿದ್ದೂ ಅಲ್ಲದೇ ಈಗ ಪ್ರಮುಖ ಖಾತೆಗಳನ್ನೂ ಪಡೆದುಕೊಂಡಿದ್ದಾರೆ. ಆಹಾರ ಮತ್ತು ನಾಗರೀಕ ಸೌಲಭ್ಯದಂಥ ಪ್ರಮುಖ ಖಾತೆಯನ್ನು ಅವರು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಅಲ್ಪಸಂಖ್ಯಾತ ಕಲ್ಯಾಣ, ಹಜ್ಜ್, ವಕ್ಫ್ ಖಾತೆಗಳನ್ನು ಪಡೆದುಕೊಂಡು ಅಚ್ಚರಿ ಹುಟ್ಟಿಸಿದ್ದಾರೆ.












Click it and Unblock the Notifications