ಫೇಸ್ಬುಕ್ನಲ್ಲಿ ಬೀದರ್ ಡಿಸಿ ಧಾರ್ಮಿಕ ಅವಾಂತರ
ಬೀದರ್, ನ 6: ಹಿಂದೂ ಧರ್ಮವನ್ನು ಮತ್ತು ದೇವರುಗಳನ್ನು ಅವಹೇಳನಕಾರಿಯಾಗಿ ಟೀಕಿಸಿದ ಪೋಸ್ಟ್ ಅನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಬೀದರ್ ಜಿಲ್ಲಾಧಿಕಾರಿ ವಿವಾದಕ್ಕೆ ಸಿಲುಕಿದ್ದಾರೆ. ತದನಂತರ ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಫೇಸ್ ಬುಕ್ ವೈಯಕ್ತಿಕ ಅಕೌಂಟ್ ನಲ್ಲಿ ಹಿಂದೂಗಳ ಆರಾಧ್ಯ ದೇವರಾದ ಪ್ರಭು ಶ್ರೀರಾಮಚಂದ್ರನನ್ನು 'ಡ್ಯೂಡ್', ಸೀತಾಮಾತೆಯನ್ನು 'ಬೇಬ್' ಎಂದು ಸಂಬೋಧಿಸಿದ ಪೋಸ್ಟ್ ಅನ್ನು ದೀಪಾವಳಿ ಹಬ್ಬದಂದು ಬೀದರ್ ಡಿಸಿ ಡಾ. ಜಾಫರ್ ಪಿ ಸಿ, ಶೇರ್ ಮಾಡಿರುವುದು ವಿವಾದಕ್ಕೆ ಗ್ರಾಸವಾಗಿದೆ.
ತಾಯಿ ಮತ್ತು ಮಗನ ನಡುವಣ ಸಂಭಾಷಣೆಯನ್ನು ಫೇಸ್ ಬುಕ್ ನಲ್ಲಿ ಲಗತ್ತಿಸಿ ಅದರಲ್ಲಿ 'ಪ್ರಭು ಶ್ರೀರಾಮಚಂದ್ರ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಿದ್ದು ಪಿತೃ ವಾಕ್ಯ ಪರಿಪಾಲನೆಗೆ ಅಲ್ಲ ಬದಲಾಗಿ ಸೀತಾಮಾತೆಯನ್ನು ಮಜಾ ಮಾಡಲು' ಎಂದು ಪ್ರಸ್ತಾಪಿಸಿದ್ದು ವಿವಾದಕ್ಕೆ ಗುರಿಯಾಗಿದೆ.
ಜಿಲ್ಲಾಧಿಕಾರಿಗಳ ಈ ಆವಾಂತರ ಗಮನಕ್ಕೆ ಬರುತ್ತಿದ್ದಂತೇ ಭಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಜಿಲ್ಲಾಧಿಕಾರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಶೋಭೆ ತರುವ ವಿಚಾರ ಇದಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಇವರು ಪೋಸ್ಟ್ ಮಾಡಿದ ಲೇಖನದ ಪ್ರತಿಯನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಐಎಎಸ್ ಅಧಿಕಾರಿಗಳ ಸಂಘಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಸ್ಥಾನದಿಂದ ಅವರನ್ನು ವಜಾಗೊಳಿಸುವವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಇದರಿಂದ ಕೂಡಲೇ ಎಚ್ಚೆತ್ತ ಕೇರಳದ ಕಾಲಿಕಟ್ ಮೂಲದ ಡಿಸಿ ಜಾಫರ್ ತಕ್ಷಣವೇ ತನ್ನ ಫೇಸ್ ಬುಕ್ ಅಕೌಂಟ್ (https://www.facebook.com/pcjaffer?fref=ts) ನಿಂದ ವಿವಾದಕಾರಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳು, ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆಣಕುವ ಅಥವಾ ರಾಮಾಯಣವನ್ನು ಅವಹೇಳನ ಮಾಡುವ ಉದ್ದೇಶ ನನ್ನದಲ್ಲ. ಇಸ್ಮಾರ್ಟ್ ಎನ್ನುವ ವೆಬ್ ಸೈಟಿನಿಂದ ಈ ಲೇಖನವನ್ನು ಶೇರ್ ಮಾಡಿಕೊಂಡಿದ್ದೆ. ಭಾರತೀಯ ಸಂಸ್ಕೃತಿಯನ್ನು ಯುವ ಜನರಿಗೆ ತಿಳಿಸುವ ಉದ್ದೇಶದಿಂದ ಇದನ್ನು ಪೋಸ್ಟ್ ಮಾಡಿದ್ದೆ.
ನನ್ನ ಹೇಳಿಕೆಯನ್ನು ಮಾಧ್ಯಮದವರು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ತಿರುಚಿದ್ದಾರೆ ಎಂದು ಆರೋಪಿಸಿದ ಅವರು, ಇದರಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ ಎಂದು ವಿವಾದಕ್ಕೆ ತೆರೆಯೆಳೆಯಲು ಯತ್ನಿಸಿದ್ದಾರೆ.